ಬೆಂಗಳೂರು: ಸಿಇಟಿ ಪರೀಕ್ಷೆ (CET Exam) ವೇಳೆ ವಸ್ತ್ರಸಂಹಿತೆಯಿಂದ ಸಮಸ್ಯೆಗೆ ಒಳಗಾದ ಪರೀಕ್ಷಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವುದಾಗಿ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ (MC Sudhakar) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಲ್ವರು ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಸಮಸ್ಯೆ ಆಗಿದೆ. ಹಾಗಾಗಿ ಆ ವಿದ್ಯಾರ್ಥಿಗಳಿಗೆ ಮಾತ್ರ ಮರುಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.
ಜನಿವಾರ ಹಾಗೂ ಹಿಜಬ್ಗೆ (Hijab) ಸಂಬಂಧಿಸಿದಂತೆ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಎರಡು ಪರೀಕ್ಷಾ ಕೇಂದ್ರದಲ್ಲಿ ಗೊಂದಲ ಆಗಿತ್ತು. ಆದ್ದರಿಂದ ಪರೀಕ್ಷಾರ್ಥಿಗಳು ಮರು ಪರೀಕ್ಷೆಗೆ ಮನವಿ ಮಾಡಿದ್ದರು. ಹೀಗಾಗಿ ತೊಂದರೆಗೆ ಒಳಗಾದ ಪರೀಕ್ಷಾರ್ಥಿಗಳಿಗೆ (Examinee) ಮಾತ್ರ ಅನ್ವಯ ಆಗುವಂತೆ ಮರುಪರೀಕ್ಷೆ ನಡೆಸುತ್ತೇವೆ ಎಂದು ಸಚಿವರುತಿಳಿಸಿದ್ದಾರೆ.

ಗ್ರೇಸ್ ಅಂಕ ಸಮಂಜಸವಲ್ಲ
ಪರೀಕ್ಷೆ ಗೊಂದಲಕ್ಕೆ ಒಳಗಾದ ಪರೀಕ್ಷಾರ್ಥಿಗಳಿಗೆ ಗ್ರೇಸ್ ಅಂಕ ಕೊಡೋದು ಸಮಂಜಸ ಅಲ್ಲ. ಹಾಗಾಗಿ ಮರು ಪರೀಕ್ಷೆ ಮಾಡುತ್ತೇವೆ, ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಕಳೆದ ಬಾರಿ ಕೂಡ ಗೊಂದಲ ಆಗಿತ್ತು. ಈ ಬಾರಿ ಮರು ಪರೀಕ್ಷೆ ಮಾಡೋದು ಸೂಕ್ತ ಅಂತ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ ಸಚಿವರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪರೀಕ್ಷಾರ್ಥಿ ತಂದೆಯಿಂದ ದೂರು
ಸಿಇಟಿ ಪರೀಕ್ಷೆ ವೇಳೆ ಜನಿವಾರಕ್ಕೆ ಕತ್ತರಿ ಪ್ರಕರಣ ಬಹಳಷ್ಟು ವಿವಾದ ಪಡೆದುಕೊಂಡ ಬೆನ್ನಲ್ಲೇ ಹಿಜಬ್ ಧರಿಸಿ ಸಿಇಟಿ ಪರೀಕ್ಷೆಗೆ ಆಗಮಿಸಿದ್ದ ಪರೀಕ್ಷಾರ್ಥಿಗೆ ಸಿಇಟಿ ಪರೀಕ್ಷೆ ಬರೆಯಲು ನಿರಾಕರಣೆ ಮಾಡಿರುವ ಆರೋಪ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಅಂದಹಾಗೆ ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿರುವ ಬಿಜಿಎಸ್ ಸೈನ್ಸ್ ಆಕಾಡೆಮಿ ಕಾಲೇಜಿನಲ್ಲಿ ಘಟನೆ ನಡೆದಿದೆ. ಅಂದಹಾಗೆ ಏಪ್ರಿಲ್ 23 ರಂದು ನಡೆದ ಭೌತಶಾಸ್ತ್ರದ ಸಿಇಟಿ ಪರೀಕ್ಷೆಗೆ ಹಿಜಬ್ ಧರಿಸಿ ಹಾಜರಾಗಿದ್ದ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ವಾಪಸ್ ಕಳಿಸಿರುವುದಾಗಿ ಪರೀಕ್ಷಾರ್ಥಿಯ ತಂದೆ ಕೆಇಎ ಗೆ ಅನ್ ಲೈನ್ ಈ ಮೇಲ್ ಮೂಲಕ ದೂರು ನೀಡಿದ್ದಾರೆ. ಪರೀಕ್ಷಾರ್ಥಿಯ ತಂದೆಯ ದೂರು ಆಧರಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ತನಿಖೆ ನಡೆಸಿ ವರದಿ ನೀಡಲು ಸೂಚನೆ ನೀಡಿತ್ತು. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಪರೀಕ್ಷಾರ್ಥಿ ಹಾಗೂ ದೂರುದಾರ ತಂದೆಯನ್ನ ಕೆರೆಸಿ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ.
ವರದಿಯನ್ನ ಕೆಇಎಗೆ ಸಲ್ಲಿಸಲಾಗುತ್ತಿದೆ. ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ ಸುಧಾಕರ್, ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಕಳೆದ ವರ್ಷವೂ ಇಂತಹ ಘಟನೆಗಳು ನಡೆದಿತ್ತು. ಹೀಗಾಗಿ ಈ ಬಾರಿ ವಸ್ತ್ರಸಂಹಿತೆಗೆ ಆಯಾ ಕಾಲೇಜಿನವರಿಗೆ ಜವಾಬ್ದಾರಿ ನೀಡಲಾಗಿತ್ತು. ಆದ್ರೂ ಈ ರೀತಿಯ ಪ್ರಕರಣಗಳು ಈ ವರ್ಷವೂ ಮರುಕಳಿಸಿವೆ. ಈ ಬಗ್ಗೆ ಗಮನಕ್ಕೆ ಬಂದ ಕೂಡಲೇ ಗಂಭೀರವಾಗಿ ಪರಗಣಿಸಿದ್ದು, ಬೆಂಗಳೂರಿನಲ್ಲಿ ಸೆಂಟರನ್ನೇ ಕ್ಯಾನ್ಸಲ್ ಮಾಡಲು ಜಿಲ್ಲಾಧಿಕಾರಿ ಶಿಫಾರಸ್ಸು ಮಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸರ್ಕಾರವೇ ಕ್ರಮ ಕೈಗೊಳ್ಳುವಂತೆ ವರದಿಯಲ್ಲಿ ಉಲ್ಲೇಖಿಸಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

