ಬೆಂಗಳೂರು: ಭಾರತ-ಪಾಕಿಸ್ತಾನ (India – Pakistan) ನಡುವೆ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಕಾರಣ, ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಪೊಲೀಸರಿಗೆ ರಜೆ ಕೊಡುವುದಿಲ್ಲ ಎಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಯುದ್ದ ಭೀತಿ ಇದೆ. ಗಡಿ ಭಾಗದಲಲ್ಲಿ ಚಟುವಟಿಕೆಗಳು ನಡೆಯುತ್ತಿದೆ. ಉಗ್ರರನ್ನು ನಮ್ಮ ಸೇನೆ ಸದೆಬಡಿಯುತ್ತಿದೆ. ಇಂದಿನ ಪರಿಸ್ಥಿತಿ ತೀವ್ರ ಆದ್ರೆ, ಯುದ್ಧ ಆಗಬಹುದು. ಹೀಗಾಗಿ ಕೇಂದ್ರ ಎಲ್ಲಾ ರಾಜ್ಯಗಳಿಗೆ ಎಚ್ಚರ ವಹಿಸುವಂತೆ ಸೂಚನೆ ಕೊಟ್ಟಿದೆ. ಈ ಹಿನ್ನೆಲೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಿದ್ದೇವೆ. ಬೇರೆ ಯಾವುದೇ ರೀತಿಯ ಚಟುವಟಿಕೆಗಳ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.
ಒಂದು ವೇಳೆ ಯುದ್ಧದ ಸಮಯ ಬಂದರೆ ನೀರು, ಆಹಾರ ಪದಾರ್ಥ, ಅಗತ್ಯ ವಸ್ತುಗಳ ಸಂಗ್ರಹದ ಬಗ್ಗೆ ಕ್ರಮಕ್ಕೆ ತಯಾರಿ ಮಡೆಯುತ್ತದೆ. ಈ ಬಗ್ಗೆ ಸಿಎಂ ಜೊತೆಗೆ ಸಭೆ ನಡೆಸಿ ಚರ್ಚಿಸುತ್ತೇವೆ. ಮುಂದೆ ಕೇಂದ್ರದಿಂದ ಬರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುತ್ತೇವೆ. ದೇಶದಲ್ಲಿ ಈ ಪರಿಸ್ಥಿತಿ ಇರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದ ಪೊಲೀಸರಿಗೆ ರಜೆಗಳನ್ನು ಮಂಜೂರು ಮಾಡುವುದಿಲ್ಲ. ಕೇಂದ್ರ ಸರ್ಕಾರ ಎಲ್ಲವೂ ಸರಿಯಿದೆ ಎಂದು ಸೂಚನೆ ಕೊಡುವರೆಗೂ ನಮ್ಮ ಪೊಲೀಸರಿಗೆ ರಜೆ ಕೊಡಲ್ಲ ಎಂದು ಮಾಹಿತಿ ನೀಡಿದರು.
ಅಲ್ಲದೇ ಕರಾವಳಿ ಭಾಗದಲ್ಲಿ ಪೊಲೀಸರು ಮತ್ತಷ್ಟು ಪರಿಣಾಮವಾಗಿ ಕೆಲಸ ಮಾಡಬೇಕು. ಅಲ್ಲಿ ಕೂಡ ಭದ್ರತೆ ನೀಡಲಾಗಿದೆ. ಕೋಸ್ಟಲ್ ಭಾಗದಲ್ಲಿ ನಮ್ಮ ಅಧಿಕಾರದಲ್ಲಿರೋ ಕಡೆ ಭದ್ರತೆ ಕೊಡ್ತೀವಿ, ನೌಕಾಪಡೆ, ಅಂತಾರಾಷ್ಟ್ರೀಯ ಗಡಿಯಲ್ಲಿ ಎಲ್ಲ ಕಡೆಯೂ ಭದ್ರತೆ ಹೆಚ್ಚಿಸಲಾಗಿದೆ. ಕೇಂದ್ರ ಏನಾದ್ರು ಬಾರ್ಡರ್ ನಲ್ಲಿ ಸೆಕ್ಯುರಿಟಿ ಕೊಡೋದಾದರೆ ಕೇಂದ್ರ ನಮಗೆ ಸೂಚನೆ ಕೊಡುತ್ತದೆ. ಅದನ್ನ ನಾವು ಪಾಲನೆ ಮಾಡ್ತೀವಿ ಎಂದು ಹೇಳಿದರು.