– ಪ್ರತಿ ಮನೆಗೆ ಬರಲಿದೆ ತರಕಾರಿ ಸಂಚಾರಿ ವಾಹನ
ಬಳ್ಳಾರಿ: ಕೊರೊನಾ ಮಾಹಾಮಾರಿಗೆ ಈಡಿ ವಿಶ್ವವೇ ತಲ್ಲಣಗೊಂಡಿದೆ. ಈ ಸಂದರ್ಭದಲ್ಲಿ ಅನೇಕ ದಾನಿಗಳು ಬಡವರಿಗೆ ನೆರವಾಗುತ್ತಿದ್ದಾರೆ.
ಬಳ್ಳಾರಿಯ ಆರ್ಯವೈಶ್ಯ ಅಸೋಸಿಯೇಶನ್ ಮತ್ತು ಬಳ್ಳಾರಿ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಜಿಲ್ಲಾಡಳಿತ ಸಹಾಯಕ್ಕೆ ದಾವಿಸಿದ್ದು, ಈ ಎರಡು ಸಂಸ್ಥೆಗಳು ಜೊತೆಗೂಡಿ ತಲಾ 400 ರೇಷನ್ ಕಿಟ್ಗಳಂತೆ ಒಟ್ಟು 800 ರೇಷನ್ ಕಿಟ್ಗಳನ್ನು ಬಳ್ಳಾರಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ.
ಪ್ರತಿ ಒಂದು ಕಿಟ್ನಲ್ಲಿ ದಿನ ನಿತ್ಯ ಬೇಕಾಗುವ ವಿವಿಧ ಬಗೆಯ ಧಾನ್ಯಗಳ ಇದ್ದು, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಈ ರೇಷನ್ ಕಿಟ್ಗಳನ್ನು ಸ್ವೀಕರಿಸಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ನೆರವಿಗೆ ಬಂದಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಇವುಗಳನ್ನು ನಿರಾಶ್ರಿತರಿಗೆ ಮತ್ತು ನಿರ್ಗತಿಕರಿಗೆ ವಿತರಿಸಲಾಗುವುದು ಎಂದಿದ್ದಾರೆ.
ಸಂಚಾರಿ ವಾಹನ ಮೂಲಕ ತರಕಾರಿ ಮಾರಾಟ:
ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಹೊಸಪೇಟೆ ನಗರವನ್ನು ಕಂಟೈನ್ಮೆಂಟ್ ಝೋನ್ ವ್ಯಾಪ್ತಿಗೆ ಒಳಪಡಿಸಿದೆ. ಹೀಗಾಗಿ ಜನರಿಗೆ ಅಗತ್ಯ ವಸ್ತುಗಳ ಕೊರತೆ ಉಂಟಾಗುವ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ಅಗತ್ಯ ವಸ್ತುಗಳು ಪೂರೈಕೆಗೆ ಜಿಲ್ಲಾಡಳಿತ ಮುಂದಾಗಿದೆ. ನಗರಕ್ಕೆ ಯಾವುದೇ ವಾಹನಗಳ ಸಂಚಾರಕ್ಕೆ ನಿರ್ಬಂಧ ಇರುವ ಕಾರಣದಿಂದ ಸಾರ್ವಜನಿಕರಿಗೆ ದಿನನಿತ್ಯದ ಬಳಕೆಗೆ ತರಕಾರಿಗಳನ್ನು ಜಿಲ್ಲಾಡಳಿತದ ವತಿಯಿಂದ ಸಂಚಾರಿ ತರಕಾರಿ ಮಾರಾಟದ ವಾಹನಗಳ ಮೂಲಕ ಎಲ್ಲಾ ವಾರ್ಡ್ ಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡಲಾಗುತ್ತಿದೆ.
ಹೊಸಪೇಟೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದ ಕಾರಣ ಕಳೆದ ಮೂರು ದಿನಗಳಿಂದ ತರಕಾರಿಯ ಆಮದನ್ನು ನಿರ್ಬಂಧಿಸಲಾಗಿತ್ತು. ಈಗ ನಿರ್ಬಂಧವನ್ನು ತೆರವುಗೊಳಿಸಿ ಬೆಳಗ್ಗೆ 5 ರಿಂದ 10ರವರೆಗೆ ಕೇವಲ ರೈತರು, ಸಗಟು ವ್ಯಾಪಾರಿಗಳಿಂದ ತರಕಾರಿಗಳನ್ನು ಕೊಳ್ಳಲು ಅವಕಾಶವಿದೆ. ಚಿಲ್ಲರೆ ವ್ಯಾಪಾರಕ್ಕೆ ಅನುವುಮಾಡಿಕೊಟ್ಟರೆ ಜನ ದಟ್ಪಣೆ ಉಂಟಾಗುವುದರಿಂದ ಚಿಲ್ಲರೆ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ.
ಸಾರ್ವಜನಿಕರಿಗೆ ತರಕಾರಿ ಸರಬರಾಜು ಮಾಡುವ ಸಲುವಾಗಿ ನಗರಸಭೆ ವತಿಯಿಂದ ತರಕಾರಿ ಮಾರಾಟ ಸಂಚಾರಿ ವಾಹನ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯನ್ನು ಅರಣ್ಯ ಸಚಿವರಾದ ಆನಂದ್ ಸಿಂಗ್ ರವರು ಉದ್ಘಾಟಿಸಿದ್ದಾರೆ. ಹಾಲು ವಿತಕರಿಗೆ ಈಗಾಗಲೇ ವ್ಯವಸ್ಥೆ ಕಲ್ಪಿಸಿದ್ದು, ಸಾರ್ವಜನಿಕರು ಡೈರಿಗೆ ಬಾರದಂತೆ ವಿತರಕರೇ ಹೆಚ್ಚಿನ ಮಾನವ ಸಂಪನ್ಮೂಲ ಬಳಸಿ ಮನೆ-ಮನೆಗೆ ಸರಬರಾಜು ಮಾಡುವಂತೆ ವಿತರಕರಿಗೆ ಸೂಚಿಸಲಾಗಿದೆ.