ವಿಜಯಪುರ: ಲೋಕಸಭಾ ಚುನಾವಣೆಯ ಹೊತ್ತಲ್ಲೇ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಕುರ್ಚಿಯ ಜಪ ಶುರುವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಬಳಿಕ ನಾನೇ ಸಿಎಂ ಎಂದು ಗೃಹ ಸಚಿವ ಎಂಬಿ ಪಾಟೀಲ್ ಘೋಷಿಸಿಕೊಂಡಿದ್ದಾರೆ.
ಬಬಲೇಶ್ವರದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಸಿಎಂ ಆಗ್ತೀನಿ. ನನಗೂ ಸಿಎಂ ಆಗಬೇಕು ಎಂಬ ಆಸೆ ಇದೆ. ಆದರೆ ದುರಾಸೆ ಇಲ್ಲ. ಸಿದ್ದರಾಮಯ್ಯ ಬಳಿಕ ನಾನೇ ಸಿಎಂ ಎಂದು ಹೇಳಿದರು.
ಇದೇ ವೇಳೆ ಐಟಿ ದಾಳಿಗೆ ಪ್ರತಿಕ್ರಿಯೆ ನೀಡಿ, ನನ್ನ ಸಂಬಂಧಿಕರು ಹಾಗೂ ಸ್ನೇಹಿತರ ಮನೆ ಮೇಲೆ ನಾಳೆಯೂ ಐಟಿ ದಾಳಿ ಆಗಬಹುದು. ಅವರ ಮನೆಯಲ್ಲಿ 6 ಲಕ್ಷ ರೂ. ನಗದು ಇರಬಹುದು. ಐಟಿ ದಾಳಿ ಮಾಡಬೇಕಿದ್ದರೆ ಆಪರೇಷನ್ ಕಮಲ ಮಾಡುವವರ ಮನೆಯಲ್ಲಿ ಐಟಿ ದಾಳಿ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾನು ಮತ್ತೆ ಮುಖ್ಯಮಂತ್ರಿ ಆದರೆ 10 ಕೆಜಿ ಅಕ್ಕಿ ಕೊಡುವುದಾಗಿ ತಿಳಿಸಿದ್ದರು. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಪಕ್ಷದಿಂದ ನಾನೇ ಸಿಎಂ ಅಭ್ಯರ್ಥಿ ಎಂದು ಹೇಳುವ ಶಕ್ತಿ ನನಗಿದೆ. ಈಶ್ವರಪ್ಪ ಅವರನ್ನು ಈ ರೀತಿ ಹೇಳುವಂತೆ ಕೇಳಿ ನೋಡೋಣ ಎಂದು ಟಾಂಗ್ ನೀಡಿದ್ದರು. ಆ ಬಳಿಕ ಮತ್ತೆ ರಾಜ್ಯದಲ್ಲಿ ಸಿಎಂ ಸ್ಥಾನದ ಕುರಿತ ಚರ್ಚೆ ಹೆಚ್ಚಾಗಿತ್ತು.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್, ನನಗೆ ಇನ್ನೂ ವಯಸ್ಸಿದೆ ಎಂಬ ಉತ್ತರಿಸಿದ್ದರು.