ಬೆಂಗಳೂರು: ಹಿಂದೂಗಳ ತೆರಿಗೆ ಹಣ ಹಿಂದೂಗಳಿಗೆ ಕೊಡಿ ಎಂಬ ಶಾಸಕ ಹರೀಶ್ ಪೂಂಜಾ (Harish Poonja) ಹೇಳಿಕೆ ವಿಚಾರವಾಗಿ ಸಚಿವ ಎಂ.ಬಿ. ಪಾಟೀಲ್ (MB Patil) ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರೀಶ್ ಪೂಂಜಾ ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂಬುವುದು ಗೊತ್ತಾಗುತ್ತದೆ. ಅವರ ಹೇಳಿಕೆ ಮೂರ್ಖತನದ ಪರಮಾವಧಿ. ದೇಶದ ಸಂವಿಧಾನ, ನಮ್ಮ ದೇಶದ ಫ್ಯಾಬ್ರಿಕ್ ಗೊತ್ತಿಲ್ಲದೆ ಇದ್ದರೆ ಇಂತಹವರು ಶಾಸಕರಾಗಲು ಅರ್ಹತೆ ಇಲ್ಲ. ಈ ರೀತಿ ಹಿಂದೂ ಟ್ಯಾಕ್ಸ್ ಎಂದು ಯಾವ ಮಟ್ಟಕ್ಕಾದ್ರು ಹೋಗಬಹುದಾ? ಇಂತಹ ಮೂರ್ಖತನ ಪ್ರಶ್ನೆಗಳಿಗೆ ಉತ್ತರ ಕೊಡದೇ ಇರೋದೆ ಒಳ್ಳೆಯದು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೊಂಡುವಾದ ಬಿಟ್ಟು ರಾಜ್ಯಕ್ಕೆ ಅನ್ಯಾಯವಾಗುತ್ತಿರೋದನ್ನ ಹರೀಶ್ ಪೂಂಜಾ ಒಪ್ಪಿಕೊಳ್ಳಬೇಕು: ದಿನೇಶ್ ಗುಂಡೂರಾವ್
ರಾಜ್ಯ ಅರ್ಥಿಕ ವ್ಯವಸ್ಥೆ ಬಗ್ಗೆ ನಾವು ಶ್ವೇತ ಪತ್ರ ಹೊರಡಿಸುತ್ತೇವೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿ ಆಗಿಲ್ಲ. ರಾಜ್ಯ ಸರ್ಕಾರ ದಿವಾಳಿ ಆಗಿದ್ರೆ ಗ್ಯಾರಂಟಿ ಯೋಜನೆ ಕೊಡೋಕೆ ಆಗ್ತಿತ್ತಾ? ಅಭಿವೃದ್ಧಿಗೂ ಹಣ ಕೇಂದ್ರ ಕೊಡಬೇಕಲ್ಲವೇ? 15ನೇ ಹಣಕಾಸು ಆಯೋಗದ ಹಣ ನಮಗೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ.
62 ಸಾವಿರ ಕೋಟಿ ರೂ. ಹಣ ಕೇಂದ್ರದಿಂದ ಬರಬೇಕು. 4.5 ಲಕ್ಷ ಕೋಟಿ ರೂ. ನಾವು ತೆರಿಗೆ ಕಟ್ಟುತ್ತೇವೆ, ಆದರೆ ನಮಗೆ ಕೇಂದ್ರ ಕೊಡ್ತಿರೋದು ಎಷ್ಟು? ದೆಹಲಿಯಲ್ಲಿ ಸಿಎಂ ಮಾತಾಡಿರೋದೆ ಶ್ವೇತಪತ್ರವೇ. ಆದಾಗಿಯೂ ಕೂಡಾ ನಾವು ಶ್ವೇತ ಪತ್ರ ಹೊರಡಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ಮಾತು ಕೇಳಿದರೆ ದೊಡ್ಡ ಅನಾಹುತಕ್ಕೆ ಹೋಗುತ್ತದೆ: ಎಂ.ಬಿ ಪಾಟೀಲ್