ರಾಯಚೂರು: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಆದರೆ ಲಾಕ್ ಡೌನ್ ಆಗಲು ಬಿಡಬೇಡಿ ಎಂದು ಜನರಿಗೆ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಮನವಿ ಮಾಡಿದರು.
ಸರ್ಕಾರದ ನಿರ್ಧಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಓಮಿಕ್ರಾನ್ ಎಲ್ಲೆಡೆ ಹರಡುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಜನತೆಯ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಜನ ಸರ್ಕಾರದ ನಿಯಮಗಳನ್ನು ಪಾಲಿಸದೇ ಹೋದರೆ ಮುಂದೆ ಲಾಕ್ ಡೌನ್ ಸಹ ಆಗಬಹುದು. ಅದಕ್ಕೆ ಅವಕಾಶ ಕೊಡದಂತೆ ಎಚ್ಚರಿಕೆಯಿಂದ ಇರಬೇಕು ಎಂದು ಸಂದೇಶ ನೀಡಿದರು. ಇದನ್ನೂ ಓದಿ: ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಕೋವಿಡ್-19 ಕೇಸ್!
ಸರ್ಕಾರದ ನಿಯಮಗಳನ್ನ ಎಲ್ಲರೂ ಪಾಲಿಸದಿದ್ದರೆ ವೈರಸ್ ಹರಡುವಿಕೆ ಹೆಚ್ಚಾಗಿ ಮತ್ತೆ ಲಾಕ್ ಡೌನ್ ಸಾಧ್ಯತೆಯಿದೆ. ಈಗಿನಿಂದಲೇ ಮುನ್ನೆಚ್ಚರಿಕೆ ತೆಗೆದುಕೊಂಡು ಜನಸಂದಣಿ, ಪ್ರಯಾಣ ಕಡಿಮೆ ಮಾಡಬೇಕು. ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜನ ಸರ್ಕಾರಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸ್ ನಿಯಮ ಎಲ್ಲರೂ ಪಾಲಿಸಬೇಕು. ಮಂತ್ರಾಲಯಕ್ಕೆ ಬರುವ ಭಕ್ತರೆಲ್ಲಾ ವೈಯಕ್ತಿಕ ಜವಾಬ್ದಾರಿಯನ್ನು ತೆಗೆದುಕೊಂಡು ರಾಯರ ದರ್ಶನ ಪಡೆಯಬೇಕು. ಕೋವಿಡ್ ನಿಯಂತ್ರಣ ಸರ್ಕಾರದ ಜೊತೆಗೆ ಜನರ ಕೈಯಲ್ಲಿದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಕೊರೊನಾ ಸೋಂಕಿತರು 7 ದಿನದಲ್ಲಿ ರಿಕವರಿ ಹೊಂದಿದ್ರೂ, 14 ದಿನ ಕ್ವಾರಂಟೈನ್ ಕಡ್ಡಾಯ: WHO