ಬೆಂಗಳೂರು: ಆಗ ನಮ್ಮ ದೇಶದ 130 ಟನ್ ಚಿನ್ನವನ್ನು ಅಡ ಇಟ್ಟಿದ್ದ ಭೀಕರ ಪರಿಸ್ಥಿತಿಯಲ್ಲಿ ಹಣಕಾಸು ಮಂತ್ರಿಯಾಗಿ ಮನಮೋಹನ್ ಸಿಂಗ್ (Manmohan Singh) ಅವರು ದೇಶಕ್ಕಾಗಿ ಕೆಲಸ ಮಾಡಿದ್ದರು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಸ್ಮರಿಸಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ ಜೆಡಿಎಸ್ ಕಚೇರಿಯಲ್ಲಿ ಸಂತಾಪ ಸೂಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೆಚ್ಡಿಡಿ ಮಾತನಾಡಿದರು. ಇವತ್ತು ಅತ್ಯಂತ ದುಃಖದ ದಿವಸ. ಮನಮೋಹನ್ ಸಿಂಗ್ ಅವರನ್ನು ನಾನು ನೋಡಿದ್ದು ಲೋಕಸಭೆಯಲ್ಲಿ. 1991 ರಲ್ಲಿ ನಾನು ಕರ್ನಾಟಕದಿಂದ ಮೊದಲ ಬಾರಿಗೆ ಲೋಕಸಭೆಗೆ ಹೋದಾಗಿ ನೋಡಿದ್ದೆ. ಅವರು ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಮಂತ್ರಿ ಆಗಿದ್ರು. ಅದಕ್ಕೂ ಮುಂಚೆ ಹಲವಾರು ಹುದ್ದೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸರಿಪಡಿಸಲು ಪ್ರಯತ್ನ ಮಾಡಿದ್ದಾರೆ ಎಂದು ನೆನೆದರು. ಇದನ್ನೂ ಓದಿ: ಅಮೆರಿಕದಲ್ಲಿ ಅವಮಾನ – ಸಿಂಗ್ ಬೆಂಬಲಿಸಿ ಪಾಕ್ ಪ್ರಧಾನಿ ಷರೀಫ್ ವಿರುದ್ಧ ಗುಡುಗಿದ್ದ ಮೋದಿ
ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದರು. ವಿಶ್ವಸಂಸ್ಥೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ರು. ಅವರ ತಂದೆ ಪಾಕಿಸ್ತಾನದಿಂದ ಬಂದವರು. ಸಿಂಗ್ ಅವರು ಆರ್ಥಿಕವಾಗಿ ತುಂಬಾ ಬುದ್ದಿವಂತರು. ಅವರಿಗೆ ಬಹಳ ಅನುಭವ ಆರ್ಥಿಕ ವಿಚಾರದಲ್ಲಿ ಇತ್ತು. ನರಸಿಂಹ ರಾವ್ ಪ್ರಧಾನಿ ಆದಾಗ ದೇಶದ ಸ್ಥಿತಿ ತುಂಬಾ ಹದಗೆಟ್ಟಿತ್ತು. ಆಗ ನಮ್ಮ ದೇಶದ 130 ಟನ್ ಚಿನ್ನವನ್ನ ಅಡ ಇಡುತ್ತಾರೆ. ಅಂತಹ ಭೀಕರ ಪರಿಸ್ಥಿತಿ ಅವತ್ತು ಇತ್ತು. ಅಂತಹ ಸನ್ನಿವೇಶದಲ್ಲಿ ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿದ್ರು. ಈ ದೇಶವನ್ನ, ದೇಶದ ಗೌರವ ಉಳಿಸಲು ಆರ್ಥಿಕ ತಜ್ಞರಾಗಿ ತಮ್ಮ ಪ್ರಯತ್ನ ಪ್ರಾರಂಭ ಮಾಡಿದ್ರು ಎಂದು ನೆನಪಿಸಿಕೊಂಡರು.
ನಾನು ತುಂಬಾ ಕ್ರಿಟಿಸೈಸ್ ಮಾಡಿದ್ದೇನೆ. ಉದಾರೀಕರಣ, ಖಾಸಗೀಕರಣ, ಎಫ್ಡಿಐ ನೀತಿ ಮಾರ್ಪಾಡು ಹೀಗೆ ಅನೇಕ ಸುಧಾರಣೆಗಳನ್ನ ಅವರು ತಂದರು. ನಾನು ಆಗ ನಡೆದ ಬೇರೆ ಬೇರೆ ಘಟನೆ ಹೇಳೊಲ್ಲ. ಇವತ್ತು ಅವೆಲ್ಲ ಹೇಳಬಾರದು. ಅವರು ನಮ್ಮನ್ನ ಅಗಲಿ ಹೋಗಿದ್ದಾರೆ. ಹೀಗಾಗಿ ಅವರ ಕಾಲದಲ್ಲಿ ಅವರು ನಮ್ಮ ಸ್ಥಿತಿ ಹೇಗಿತ್ತು. ಅದನ್ನ ಸರಿ ಮಾಡೋಕೆ ಸರ್ವ ಪ್ರಯತ್ನ ಸಿಂಗ್ ಮಾಡಿದ್ರು. ಪ್ರತಿಯೊಬ್ಬರು ಹೇಳೋದು ಈ ದೇಶ ಸಂಕಷ್ಟದಲ್ಲಿ ಇದ್ದಾಗ ಹಲವಾರು ಕ್ರಮ ತೆಗೆದುಕೊಂಡರು ಅಂತ. ಅನೇಕ ಸುಧಾರಣೆ ಕ್ರಮ ತೆಗೆದುಕೊಂಡರು. ಅದಾದ ಮೇಲೆ ಅವರೇ ಪ್ರಧಾನಿ ಆದ್ರು. 10 ವರ್ಷ ಪ್ರಧಾನಿ ಆಗಿ ದೇಶ ಆಳಿದ್ರು. ನೆಹರೂ, ಇಂದಿರಾ ಗಾಂಧಿ ಬಿಟ್ಟರೆ ಅವರೇ 10 ವರ್ಷ ಪ್ರಧಾನಿ ಆಗಿದ್ದರು. ಸರಳ, ಸಜ್ಜನ, ಪ್ರಾಮಾಣಿಕ ವ್ಯಕ್ತಿ ಎಂದು ಮಾತನಾಡಿದರು. ಇದನ್ನೂ ಓದಿ: ಮನಮೋಹನ್ ಸಿಂಗ್ಗೆ ಅಂತಿಮ ನಮನ ಸಲ್ಲಿಸಿದ ರಾಹುಲ್, ಸೋನಿಯಾ ಗಾಂಧಿ
ಅವರೊಬ್ಬ ದೇಶದ ಪ್ರಧಾನಿ ಆಗಿದ್ದವರು. ಕುಮಾರಸ್ವಾಮಿ ಅವರು ದೆಹಲಿಗೆ ಹೋಗಿ ಪಕ್ಷದ ಪರವಾಗಿ, ವಯಕ್ತಿಕವಾಗಿ ಗೌರವ ಸಲ್ಲಿಸಿದ್ದಾರೆ. ಇವತ್ತು ನಮ್ಮ ಪಕ್ಷದ ಸಂಘಟನೆ ಸಭೆ ಇತ್ತು. ಇದೊಂದು ಶೋಕ ದಿನ. 7 ದಿನ ಶೋಕಾಚರಣೆ ಮಾಡಲಾಗ್ತಿದೆ. ಸಿಂಗ್ ಅವರ ಗೌರವಾರ್ಥವಾಗಿ ಯಾವುದೇ ಸರ್ಕಾರಿ ಕೆಲಸ ಮಾಡಬಾರದು. ಭಾರತದ ಬಾವುಟ ಅರ್ಧಕ್ಕೆ ಇಳಿಸಬೇಕು. 10 ವರ್ಷ ಪ್ರಧಾನಿ, 5 ವರ್ಷ ಹಣಕಾಸು ಮಂತ್ರಿಯಾಗಿ, ಆರ್ಬಿಐ ಗವರ್ನರ್ ಆಗಿ ದೇಶಕ್ಕೆ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಅವರು ನಮ್ಮನ್ನ ಅಗಲಿ ಹೋಗಿದ್ದಾರೆ. ಸಿಂಗ್ ಅವರ ಬಗ್ಗೆ ವೈಯಕ್ತಿಕವಾಗಿ ಗೌರವ ಇದೆ. ಅವರ ಆತ್ಮಕ್ಕೆ ಭಗವಂತ ಮೋಕ್ಷ ಕೊಡಲಿ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ದೇವರು ಕೊಡಲಿ. ಈ ದೇಶದ ಆರ್ಥಿಕತೆಗೆ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಅವರೊಬ್ಬ ಉತ್ತಮ ಆರ್ಥಿಕ ತಜ್ಞ. ಅವರು ಮಾಡಿರೋ ಸೇವೆ ನಾವು ಸ್ಮರಣೆ ಮಾಡಿಕೊಳ್ಳಬೇಕು. ಅವರ ಆತ್ಮಕ್ಕೆ ಚಿರಶಾಂತಿ ದೇವರು ಕೊಡಲಿ ಎಂದು ಪ್ರಾರ್ಥಿಸಿದರು.