ಮಂಡ್ಯ: ಅಪಾರ ಜನಸಾಗರದ ಕಣ್ಣೀರ ವಿದಾಯದೊಂದಿಗೆ ಹುತಾತ್ಮ ಯೋಧ ಗುರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಗುರು ಇಲ್ಲದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ.
ಗುರು ಮನೆ, ರಸ್ತೆಗಳು ಬಿಕೋ ಅಂತಿದೆ. ಆ ಗ್ರಾಮದ ಜನರಲ್ಲೂ ಏನೋ ಒಂದನ್ನು ಕಳೆದುಕೊಂಡ ಭಾವನೆ ಕಾಡ್ತಿದೆ. ಅಂತ್ಯಕ್ರಿಯೆ ಬಳಿಕ ಅತ್ತೆ, ಮಾವ ಅಂದ್ರೆ ಕಲಾವತಿ ತಂದೆ-ತಾಯಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥ ಅತ್ತೆ ಜಯಮ್ಮ, ಮಾವ ಶಿವಣ್ಣಗೆ ಮದ್ದೂರಿನ ಕೆಎಂ ದೊಡ್ಡಿಯಲ್ಲಿರುವ ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. 3 ದಿನಗಳಿಂದ ರೋಧಿಸಿ ಕಂಗಾಲಾಗಿದ್ದ ಕಲಾವತಿ, ನಿದ್ದೆಯಲ್ಲೂ ಪತಿಯನ್ನೇ ಕನವರಿಸ್ತಿದ್ದಾರೆ.
ಶನಿವಾರ ರಾತ್ರಿ ಗುರು ಅಮರ್ ರಹೇ.. ಗುರು ಅಮರ್ ರಹೇ ಎಂಬ ಘೋಷಣೆಗಳೊಂದಿಗೆ ಯೋಧನ ಅಂತಿಮ ವಿಧಿ ವಿಧಾನ ನಡೆಸಲು ಸಿದ್ಧತೆ ಆರಂಭವಾಗುತ್ತಿದಂತೆ ಗುರು ಅವರ ಪತ್ನಿ ಕಲಾವತಿ ಅವರಿಗೆ ಅಂತಿಮ ವಂದನೆ ಸಲ್ಲಿಸಲು ಅವಕಾಶ ನೀಡಲಾಯಿತು. ಈ ವೇಳೆ ಪತಿಯ ಚಿತೆಯ ಮುಂದೆ ನಿಂತ ಅವರು ಸೆಲ್ಯೂಟ್ ಮಾಡಿ ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗುವಾಗ ಅಲ್ಲಿದ್ದ ಜನರ ಕಣ್ಣಲ್ಲಿ ನೀರು ಜಿನುಗಿತು.
ಸರ್ಕಾರದ ಸಕಲ ಗೌರವ ವಂದನೆ ಸಲ್ಲಿಸಿದ ಬಳಿಕ ಸಿಎಂ ಕುಮಾರಸ್ವಾಮಿ ಅವರು ಗುರು ಪಾರ್ಥಿವ ಶರೀರದ ಮೇಲಿದ್ದ ತ್ರಿವರ್ಣ ಧ್ವಜವನ್ನು ಪತ್ನಿಗೆ ಹಸ್ತಾಂತರಿಸಿದರು. ಇದೇ ವೇಳೆ ಸರ್ಕಾರದಿಂದ ಘೋಷಣೆ ಮಾಡಿದ್ದ 25 ಲಕ್ಷ ರೂ. ಚೆಕನ್ನು ನೀಡಿ ಸಾಂತ್ವನ ಹೇಳಿದರು.
ಗುರು ಸಹೋದರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದಾಗ ನೆರೆದಿದ್ದ ಜನಸಾಗರ ಭೋಲೋ ಭಾರತ್ ಮಾತಾಕೀ ಜೈ, ವೀರ ಯೋಧ ಗುರುಗೆ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗಿ ಅಂತಿಮ ನಮನ ಸಲ್ಲಿಸಿದರು. ನೆರೆದಿದ್ದ ಜನರಲ್ಲಿ ದೇಶ ಪ್ರೇಮ ಉಕ್ಕಿ ಹರಿದಿತ್ತು. ಇದೇ ವೇಳೆ ಜನ ಸಾಗರವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಇದಕ್ಕೂ ಮುನ್ನ ಬೆಂಗಳೂರಿನಿಂದ ಯೋಧರ ಹುಟ್ಟೂರಿನ ವರೆಗೂ ಕೂಡ ಸಾವಿರಾರರು ಜನರು ರಸ್ತೆಯಲ್ಲಿ ನಿಂತು ದರ್ಶನ ಪಡೆದರು. ಇದನ್ನೂ ಓದಿ: ಛಿದ್ರ ಛಿದ್ರವಾದ ಆ ಬಸ್ಸಿನಲ್ಲಿದ್ದ 40 ವೀರ ಯೋಧರ ರೋಚಕ ಕಥೆ ನಿಮಗೆ ತಿಳಿದಿರಲೇಬೇಕು
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv