ಮಂಡ್ಯ: ಕನಗನಮರಡಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸ್ ಚಾಲಕನನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಆದರೆ ಬಸ್ ಚಾಲಕ ಶಿವಣ್ಣನಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ.
ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದಲ್ಲಿ ನವೆಂಬರ್ 24 ರಂದು ಖಾಸಗಿ ಬಸ್ ನಾಲೆಗೆ ಬಿದ್ದು 30 ಮಂದಿ ಜಲಸಮಾಧಿಯಾಗಿದ್ದ ಪ್ರಕರಣ ನಡೆದಿತ್ತು. ಬಸ್ ದುರಂತದ ನಂತರ ತಲೆ ಮರೆಸಿಕೊಂಡಿದ್ದ ಚಾಲಕನನ್ನು ಭಾನುವಾರವಷ್ಟೇ ಪೊಲೀಸರು ಬಂಧಿಸಿದ್ದು, ಸೋಮವಾರ ಆರೋಪಿಯನ್ನು ಕೋರ್ಟ್ ಗೆ ಹಾಜರು ಪಡಿಸಲಾಗಿತ್ತು. ವಿಚಾರಣೆಯ ಬಳಿಕ ಪಾಂಡವಪುರ ಪಟ್ಟಣದ ಸಿವಿಲ್ ನ್ಯಾಯಾಲಯ ಚಾಲಕನಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಚಾಲಕ ಹೇಳಿದ್ದು ಏನು?
ಕನಗನಮರಡಿ ನಾಲೆಯ ಬಳಿ ಬರುತ್ತಿದ್ದಾಗ ಬಸ್ ನನ್ನ ನಿಯಂತ್ರಣ ತಪ್ಪಿತು. ಆಗ ಬಸ್ ನಾಲೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುತ್ತಿತ್ತು. ನಾನು ಅದನ್ನು ತಪ್ಪಿಸಲು ಪ್ರಯತ್ನಿಸಿದೆ. ಆದರೆ ದುರದೃಷ್ಟಾವಶಾತ್ ಬಸ್ ನಾಲೆಗೆ ಉರುಳಿಬಿತ್ತು ಎಂದು ವಿಚಾರಣೆ ವೇಳೆ ತಿಳಿಸಿದ್ದನು.
ಪಾರಾಗಿದ್ದು ಹೇಗೆ?
ಬಸ್ ಅಪಘಾತದಲ್ಲಿ ತಾನು ಬದುಕುಳಿದ ಬಗ್ಗೆ ಚಾಲಕ ಮಾಹಿತಿ ನೀಡಿದ್ದಾನೆ. ನನಗೂ ಈಜು ಬರುತ್ತಿರಲಿಲ್ಲ. ಸ್ಥಳೀಯರಾದ ಅಂಕೇಗೌಡ ಎಂಬವವರು ನನ್ನನ್ನು ರಕ್ಷಿಸಿದ್ದರು. ಸುಸ್ತಾಗಿದ್ದ ನನ್ನನ್ನು ಜಮೀನಿನ ಬಳಿ ಕೂರಿಸಿದ್ದರು. ಈ ವೇಳೆ ನಡೆದುಕೊಂಡೇ ಬಸರಾಳು ಗ್ರಾಮಕ್ಕೆ ಹೋಗಿ ಅಲ್ಲಿಂದ ಬೆಂಗಳೂರಿಗೆ ಹೋಗಿ ತಲೆಮರೆಸಿಕೊಂಡಿದ್ದಾಗಿ ಚಾಲಕ ಶಿವಣ್ಣ ತಿಳಿಸಿದ್ದನು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv