ಹಾಸನ: ತಿಥಿ ಮಾಡಿದ ಎರಡು ದಿನದ ಬಳಿಕ ವ್ಯಕ್ತಿಯೊಬ್ಬ ಮನೆಗೆ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ ಘಟನೆ ಹಾಸನ ತಾಲೂಕು ಶಂಖ ಗ್ರಾಮದಲ್ಲಿ ನಡೆದಿತ್ತು. ತನ್ನದೇ ಪತಿಯ ಮೃತದೇಹ ಎಂದು ತಿಳಿದು ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಆತನ ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ ಈಗ ಮೃತ ವ್ಯಕ್ತಿಯ ಪತ್ನಿ ಹಾಗೂ ಮಗ ಅಂತಿಮ ದರ್ಶನ ಪಡೆಯುವುದಕ್ಕೆ ಆಗಲಿಲ್ಲ ಎಂದು ಸಮಾಧಿ ಮುಂದೆ ಕಣ್ಣೀರು ಹಾಕಿದ್ದಾರೆ.
ರಾಜಣ್ಣ (60) ಮೃತ ವ್ಯಕ್ತಿ. ರಾಜಣ್ಣ ಚಿಕ್ಕಮಗಳೂರು ಜಿಲ್ಲೆಯ ಭೈರಾಪುರ ಗ್ರಾಮದವರಾಗಿದ್ದು, ಅವರ ಶರ್ಟ್ ನಿಂದ ಪುತ್ರ ಹಾಗೂ ಪತ್ನಿ ಅವರ ಗುರುತು ಪತ್ತೆ ಹಚ್ಚಿದ್ದಾರೆ. ರಾಜಣ್ಣ ಅವರ ಪುತ್ರ ಮತ್ತು ಪತ್ನಿ ತಮ್ಮ ಸಂಬಂದಿಕರೊಂದಿಗೆ ಶಂಖ ಗ್ರಾಮಕ್ಕೆ ಬಂದಿದ್ದರು. ತನ್ನ ಪತಿಯನ್ನು ಕೊನೆ ಸಮಯದಲ್ಲಿ ದರ್ಶನ ಮಾಡಲು ಸಾಧ್ಯವಾಗದೇ ಅಂತಿಮ ವಿಧಿವಿಧಾನವನ್ನು ಮಾಡಲಾಗದೆ ಅಸಹಾಯಕರಾಗಿ ಸಮಾಧಿ ಮುಂದೆ ಕಣ್ಣೀರು ಹಾಕಿದರು. ಶವವನ್ನು ಹೊರಕ್ಕೆ ತೆಗೆದುಕೊಂಡು ಹೋಗಲು ಕೂಡ ಸಾಧ್ಯವಾಗದೇ ಅದೇ ಸಮಾಧಿಯ ಮಣ್ಣನ್ನು ತೆಗೆದುಕೊಂಡು ವಾಪಸಾಗಿದ್ದಾರೆ.
ನಡೆದಿದ್ದೇನು?
ಶಿವಣ್ಣ ಎಂಬವರು ಪತ್ನಿಯೊಂದಿಗೆ ಜಗಳ ಮಾಡಿಕೊಂಡು ನಾಪತ್ತೆಯಾಗಿದ್ದರು. ಶಿವಣ್ಣ ಮನೆಗೆ ಬರದೇ ಇರುವುದರಿಂದ ಕುಟುಂಬಸ್ಥರು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿದ್ದರು. ಕುಟುಂಬಸ್ಥರು ಶಿವಣ್ಣನ ಮಿಸ್ಸಿಂಗ್ ಕೇಸ್ ದಾಖಲಿಸಿದ 2 ದಿನಗಳ ಬಳಿಕ ಹಾಸನದ ಹೊಸ ಬಸ್ ನಿಲ್ದಾಣ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಸಿಕ್ಕಿತ್ತು. ಈ ಮೃತದೇಹ ನೋಡಲು ಮೇಲ್ನೋಟಕ್ಕೆ ಶಿವಣ್ಣನ ರೀತಿ ಹೋಲುತ್ತಿತ್ತು. ಹಾಗಾಗಿ ಕುಟುಂಬಸ್ಥರು ಇದು ಶಿವಣ್ಣದೇ ಮೃತದೇಹ ಎಂದು ಭಾವಿಸಿದ್ದರು.
ಕುಟುಂಬದ ಸದಸ್ಯರು ಶಿವಣ್ಣನ ಮೃತದೇಹ ಎಂದು ಮನೆಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಿದ್ದರು. ಅಲ್ಲದೆ ಶವ ಸಂಸ್ಕಾರ ಮಾಡಿ ತಿಥಿ ಕೂಡ ಮಾಡಿದ್ದರು. ಆದರೆ ತಿಥಿ ಮಾಡಿದ ಎರಡು ದಿನದ ಬಳಿಕ ಶಿವಣ್ಣ ತನ್ನ ಮನೆಗೆ ಹಿಂದಿರುಗಿದ್ದರು. ಶಿವಣ್ಣ ದಿಢೀರ್ ಎಂದು ಮನೆಯಲ್ಲಿ ಪ್ರತ್ಯಕ್ಷ ಆಗಿರುವುದು ನೋಡಿ ಜನರಲ್ಲಿ ಅಚ್ಚರಿ ಮೂಡಿತ್ತು. ಶಿವಣ್ಣ ಬದುಕಿದ್ದಾರೆ ಎಂಬ ವಿಷಯ ತಿಳಿದು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.