ಭುವನೇಶ್ವರ್: ವ್ಯಕ್ತಿಯೊಬ್ಬರು 500 ಕಿ.ಮೀ ಸಂಚರಿಸಿ ರಕ್ತದಾನ ಮಾಡುವ ಮೂಲಕ ಮಹಿಳೆಯ ಪ್ರಾಣ ಉಳಿಸಿದ ಅಪರೂಪದ ಘಟನೆ ಒಡಿಶಾದಲ್ಲಿ ನಡೆದಿದೆ.
ಸಬೀತಾ ಬ್ರಹ್ಮಪುರ್ ಎಂಬವರು ಎಂಕೆಸಿಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸಬೀತಾ ಮಗುವಿಗೆ ಜನ್ಮ ನೀಡಿದ್ದು, ಅವರ ದೇಹದಲ್ಲಿ ರಕ್ತ ಕಡಿಮೆ ಆಗಿತ್ತು. ಸಬೀತಾ ಅವರದ್ದು ಅಪರೂಪದ ಬಾಂಬೆ ಬ್ಲಡ್ ಗೂಪ್ ಆಗಿದ್ದು, ಇದು ಭಾರತದಲ್ಲಿ ಕೇವಲ ಎರಡೂವರೆ ಲಕ್ಷ ಜನರಿಗೆ ಮಾತ್ರ ಈ ರಕ್ತದ ಗುಂಪು ಇದೆ.
ಸಿಸೇರಿಯನ್ ಮೂಲಕ ಸಬೀತಾ ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ ಬಳಿಕ ಸಬೀತಾ ದೇಹದಲ್ಲಿ ರಕ್ತ ಕಡಿಮೆ ಆಗಿತ್ತು. ವೈದ್ಯರು ಆ ರಕ್ತದ ಗುಂಪನ್ನು ಹುಡುಕಿದ್ದಾರೆ. ಆದರೆ ಎಲ್ಲಿಯೂ ಸಿಗಲಿಲ್ಲ. ಸಬೀತಾಗೆ ರಕ್ತ ಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಜನರ ಬಳಿ ಸಹಾಯ ಕೇಳಿದ್ದರು.
ರಕ್ತದಾನ ಮಾಡಿದ ದಿಲೀಪ್ಗೆ ಈ ವಿಷಯ ವಾಟ್ಸಾಪ್ ಮೂಲಕ ತಿಳಿಯಿತು. ಆಗ ತಕ್ಷಣ ಅವರು ಭುವನೇಶ್ವರ್ ದಿಂದ 500 ಕಿ.ಮೀ ಸಂಚರಿಸಿ ರಕ್ತದಾನ ಮಾಡಿದ್ದಾರೆ. ದಿಲೀಪ್ ಸರಿಯಾದ ಸಮಯಕ್ಕೆ ರಕ್ತ ನೀಡಿದ್ದರಿಂದ ಮಹಿಳೆಯ ಪ್ರಾಣ ಉಳಿದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ದಿಲೀಪ್, ನನಗೆ ಜನರಿಗೆ ಸಹಾಯ ಮಾಡುವುದರಿಂದ ಖುಷಿ ಸಿಗುತ್ತದೆ. ನಾನು ಈವರೆಗೂ ನಾಲ್ಕು ಬಾರಿ ರಕ್ತದಾನ ಮಾಡಿದ್ದೇನೆ ಎಂದು ಹೇಳಿದ್ದಾರೆ.