ಡೆಹ್ರಾಡೂನ್: ಅಗ್ನಿವೀರ್ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗದ ಹಿನ್ನೆಲೆಯಲ್ಲಿ ಸೇನಾ ಆಕಾಂಕ್ಷಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಮೃತರನ್ನು ಪೌರಿ ಗರ್ವಾಲ್ ಜಿಲ್ಲೆಯ ನೌಗಾಂವ್ ಕಮಂದ ಗ್ರಾಮದ ನಿವಾಸಿ ಸುಮಿತ್ ಕುಮಾರ್(23) ಎಂದು ಗುರುತಿಸಲಾಗಿದೆ. ಅಗ್ನಿವೀರ್ ನೇಮಕಾತಿ ಆಯ್ಕೆಯಲ್ಲಿ ಪಾಲ್ಗೊಳ್ಳಲು ಕೋಟ್ದ್ವಾರಕ್ಕೆ ತೆರಳಿದ್ದರು. ಆದರೆ ಅಲ್ಲಿ ವಿಫಲರಾದರು. ಮುಂದಿನ ಬಾರಿ ವಯಸ್ಸಿನ ಕಾರಣದಿಂದ ಮತ್ತೆ ಅವಕಾಶವನ್ನು ಪಡೆಯಲು ಸಾಧ್ಯವಿಲ್ಲ ಎಂದು ಸುಮಿತ್ ಮನನೊಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಮನೆಗೆ ಬಂದ ಸುಮಿತ್ ಯಾರೊಂದಿಗೂ ಮಾತನಾಡದೇ ತನ್ನ ಕೋಣೆಗೆ ಹೋಗಿ ಬಾಗಿಲನ್ನು ಹಾಕಿಕೊಂಡಿದ್ದರು. ಮನೆಯ ಸದಸ್ಯರು ಆಯ್ಕೆ ಆಗದಿದ್ದಕ್ಕೆ ಬೇಸರ ಮಾಡಿಕೊಂಡಿರಬೇಕು. ಸ್ವಲ್ಪ ಸಮಯದ ನಂತರ ಸರಿ ಹೋಗುತ್ತಾನೆ ಎಂದುಕೊಂಡಿದ್ದಾರೆ. ಇದನ್ನೂ ಓದಿ: ಮಕ್ಕಳ ಬುದ್ಧಿ ಕೆಡಿಸಿ ದೂರು: ಮುರುಘಾ ಮಠದ ವಕೀಲ ವಿಶ್ವನಾಥಯ್ಯ
ಆದರೆ ಮಾರನೇ ದಿನವಾದರೂ ಬಾಗಿಲು ತೆಗೆಯದಿದ್ದನ್ನು ಗಮನಿಸಿದ ಕುಟುಂಬಸ್ಥರು ಸುಮಿತ್ ರೂಮ್ನ ಬಾಗಿಲನ್ನು ಒಡೆದಿದ್ದಾರೆ. ಆಗ ಸುಮಿತ್ನ ಮೃತದೇಹ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಅಗ್ನಿಪಥ್ ಯೋಜನೆಯಡಿ ಗರ್ವಾಲ್ ರೈಫಲ್ಸ್ ಅಗ್ನಿವೀರ್ ಆರ್ಮಿ ನೇಮಕಾತಿ ಪ್ರಕ್ರಿಯೆ ಆ. 19 ರಿಂದ ಆ. 31 ರವರೆಗೆ ಕೋಟ್ದ್ವಾರದಲ್ಲಿ ನಡೆಯುತ್ತಿದೆ. ಗರ್ವಾಲ್ ವಿಭಾಗದ ಏಳು ಜಿಲ್ಲೆಗಳಿಂದ 63,000ಕ್ಕೂ ಹೆಚ್ಚು ಸೇನಾ ಆಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದಾರೆ. ಇದನ್ನೂ ಓದಿ: 54 ವರ್ಷ, ಮಾಡಿರೋದು 164 + ಕಳ್ಳತನ – ಭೂಪನಿಗಿದ್ದಾರೆ ಮೂವರು ಹೆಂಡ್ತಿರು, 7 ಮಕ್ಳು