ರಾಯಚೂರು: ವರ್ಷದ ಮೊದಲನೇ ಹಬ್ಬ ಮಕರ ಸಂಕ್ರಾಂತಿಯನ್ನ ರಾಯಚೂರಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿ ದಡದಲ್ಲಿ ಜನ ಪುಣ್ಯಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಇನ್ನೂ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಮಂತ್ರಾಲಯ ಮಠದಲ್ಲೂ ಸಂಕ್ರಾಂತಿ ಸಂಭ್ರಮ ಜೋರಾಗಿದೆ.
ಮಂತ್ರಾಲಯದಲ್ಲಿ ತುಂಗಸ್ನಾನಕ್ಕಾಗಿ ರಾಜ್ಯದ ಮೂಲೆ ಮೂಲೆಯಿಂದ ಭಕ್ತರ ದಂಡು ಹರಿದು ಬಂದಿದೆ. ತುಂಗಭದ್ರೆಗೆ ಪೂಜೆಯನ್ನ ಸಲ್ಲಿಸಿ ಭಕ್ತರು ಪಾವನರಾಗುತ್ತಿದ್ದಾರೆ. ನದಿಯಲ್ಲಿ ದೀಪಗಳನ್ನ ಹಚ್ಚಿ ತೇಲಿಬಿಡುವ ಮೂಲಕ ಭಕ್ತಿ ಸಮರ್ಪಿಸುತ್ತಿದ್ದಾರೆ. ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಈ ದಿನ ಪುಣ್ಯ ಸ್ನಾನ ಮಾಡಿದರೆ ಪಾಪಕರ್ಮಗಳೆಲ್ಲಾ ಕರಗಿ ಹೋಗುತ್ತವೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿ ತುಂಗಭದ್ರಾ ಸ್ನಾನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದು, ಭಕ್ತರು ಸ್ನಾನಕ್ಕಾಗಿ ಪರದಾಡುವ ಪರಸ್ಥಿತಿಯೂ ನಿರ್ಮಾಣವಾಗಿದೆ. ಆದರೂ ನಿಂತ ನೀರಿನಲ್ಲೆ ಅರಗೋಲಿನಲ್ಲಿ ತೆರಳಿ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ. ಹಬ್ಬದ ವಿಶೇಷ ಖಾದ್ಯಗಳನ್ನ ತಂದು ನದಿದಡದಲ್ಲಿ ಮನೆ ಮಂದಿಯಲ್ಲಾ ಕುಳಿತು ಊಟ ಮಾಡುತ್ತ ಸಂಕ್ರಾಂತಿ ಹಬ್ಬದ ಸವಿ ಸವಿಯುತ್ತಿದ್ದಾರೆ.