ಮಣಿಪುರ ಸಿಎಂ ನಿವಾಸದ ಬಳಿಯ ಕಾಂಪ್ಲೆಕ್ಸ್‌ನಲ್ಲಿ ಭಾರೀ ಅಗ್ನಿ ದುರಂತ

Public TV
2 Min Read
Major Fire Near Manipur Secretariat Close To Chief Ministers Bungalow

ಇಂಫಾಲ್: ಮಣಿಪುರದ (Manipur) ರಾಜಧಾನಿ ಇಂಫಾಲ್‍ನಲ್ಲಿರುವ ಸಿಎಂ ಎನ್.ಬಿರೇನ್ ಸಿಂಗ್ (N. Biren Singh) ನಿವಾಸದ ಬಳಿಯ ಹೈ ಸೆಕ್ಯುರಿಟಿ ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್ ಬಳಿ ಇರುವ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ (Fire Accident) ಸಂಭವಿಸಿದೆ.

ಈ ಕಟ್ಟಡವು ಬಿರೇನ್ ಸಿಂಗ್ ಅವರ ಅಧಿಕೃತ ಬಂಗಲೆಯಿಂದ ಕೇವಲ 100 ಮೀಟರ್ ದೂರದಲ್ಲಿದೆ. ನಾಲ್ಕು ಅಗ್ನಿಶಾಮಕ ವಾಹನಗಳ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ. ಘಟನೆಯಲ್ಲಿ ಸಾವು ನೋವುಗಳ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಸಿಎಂ ಬೆಂಗಾವಲು ಪಡೆ ಮೇಲೆ ಬಂಡುಕೋರರಿಂದ ಗುಂಡಿನ ದಾಳಿ!

ಇತ್ತೀಚೆಗೆ (ಸೋಮವಾರ) ಮಣಿಪುರದ ಹಿಂಸಾಚಾರ ಪೀಡಿತ ಜಿರಿಬಾಮ್ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಎನ್.ಬಿರೇನ್ ಸಿಂಗ್ ಅವರ ಬೆಂಗಾವಲು ಪಡೆ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಕಾಂಗ್‍ಫೋಕ್ಪಿ ಜಿಲ್ಲೆಯಲ್ಲಿ ಸಿಎಂ ಬಿರೇನ್ ಸಿಂಗ್ ಅವರ ಬೆಂಗಾವಲು ವಾಹನದ ಮೇಲೆ ಶಂಕಿತ ಉಗ್ರರು ಹೊಂಚುದಾಳಿ ನಡೆಸಿದ್ದರು. ಗುಂಡಿನ ದಾಳಿಯಲ್ಲಿ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದರು. ಬೆಂಗಾವಲು ಪಡೆ ಹಿಂಸಾಚಾರ ಪೀಡಿತ ಜಿರಿಬಾಮ್ ಜಿಲ್ಲೆಗೆ ತೆರಳುತ್ತಿತ್ತು.

ಭದ್ರತಾ ಪಡೆ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದಾಗ ಮುಖ್ಯಮಂತ್ರಿಗಳು ಇರಲಿಲ್ಲ. ತಕ್ಷಣವೇ ಬೆಂಗಾವಲು ಪಡೆ ಸಹ ಪ್ರತಿದಾಳಿ ನಡೆಸಿತ್ತು. ರಾಷ್ಟ್ರೀಯ ಹೆದ್ದಾರಿ -53ರ ಉದ್ದಕ್ಕೂ ಕೋಟ್ಲೆನ್ ಗ್ರಾಮದ ಬಳಿ ಇನ್ನೂ ಶೂಟೌಟ್ ನಡೆಯುತ್ತಿದೆ. ದಾಳಿಯ ವೇಳೆ ಕನಿಷ್ಠ ಒಬ್ಬ ಸಿಬ್ಬಂದಿಗೆ ಗುಂಡು ತಗುಲಿ ಗಾಯಗೊಂಡಿದ್ದರು.

ದೆಹಲಿಯಿಂದ ಇಂಫಾಲ್‍ಗೆ ತೆರಳುತ್ತಿದ್ದ ಸಿಎಂ ಬಿರೇನ್ ಸಿಂಗ್, ಜಿಲ್ಲೆಯ ಪರಿಸ್ಥಿತಿಯನ್ನು ಪರಿಶೀಲಿಸಲು ಜಿರಿಬಾಮ್‍ಗೆ ಭೇಟಿ ನೀಡಲು ಯೋಜಿಸಿದ್ದರು. ಏಕೆಂದರೆ ಶಂಕಿತ ಉಗ್ರರು ಕಳೆದ ಶನಿವಾರ ಜಿರಿಬಾಮ್‍ನಲ್ಲಿ ಎರಡು ಪೊಲೀಸ್ ಔಟ್‍ಪೋಸ್ಟ್ ಮತ್ತು ಕನಿಷ್ಠ 70 ಮನೆಗಳಿಗೆ ಬೆಂಕಿ ಹಚ್ಚಿದ್ದರು ಎಂದು ತಿಳಿದುಬಂದಿದೆ.

ಹಿಂಸಾಚಾರ ಪೀಡಿತ ಜಿರಬಾಮ್ ಜಿಲ್ಲೆಯು ರಾಜ್ಯ ರಾಜಧಾನಿ ಇಂಫಾಲ್‍ನಿಂದ 220 ಕಿಮೀ ದೂರದಲ್ಲಿದೆ. ಇದು ಅಸ್ಸಾಂ ಗಡಿ ಪ್ರದೇಶಕ್ಕೆ ಸಮೀಪದಲ್ಲಿದೆ. ಕುಕಿ ಸಮುದಾಯದ ಬಹುಪಾಲು ಜನ ಇಲ್ಲಿ ನೆಲೆಸಿದ್ದಾರೆ. ಇದನ್ನೂ ಓದಿ: ಕೊಲೆ ಕೇಸ್‌ನಲ್ಲಿ ಬಂಧನ: ಹೃದಯಾಘಾತದಿಂದ ಸಾವನ್ನಪ್ಪಿದ್ದ ತಂದೆ ಅಂತ್ಯಕ್ರಿಯೆಗೆ ಹೊರಟ ಮಗ

Share This Article