ಬೆಂಗಳೂರು: ಮೈಸೂರು ದಸರಾ (Mysuru Dasara) ವೇಳೆ ಚಾಮುಂಡೇಶ್ವರಿಯನ್ನು ಹೊತ್ತಿದ್ದ ಅರ್ಜುನ (Arjuna) ಆನೆಯ ಸಾವಿನ ಸುತ್ತ ಉತ್ತರವಿಲ್ಲದ ಪ್ರಶ್ನೆಗಳ ದೊಡ್ಡ ಹುತ್ತವೇ ಬೆಳೆದಿದೆ.
ಅರ್ಜುನ ಕಾಲಿಗೆ ಗುಂಡು ತಾಗಿತ್ತು ಎಂದು ಮಾವುತರು ಆರೋಪಿಸಿದ್ದರು. ಆದರೆ ಅರ್ಜುನ ಆನೆಯ ಮೃತದೇಹವನ್ನು ವಿಸ್ತೃತ ಮರಣೋತ್ತರ ಪರೀಕ್ಷೆಗೆ ಒಳಪಡಿಸದ ಅರಣ್ಯಾಧಿಕಾರಿಗಳು ಹಾಗೆಯೇ ಅಂತ್ಯಕ್ರಿಯೆ ಮುಗಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಅರ್ಜುನನ ಸಾವಿನ ಸತ್ಯ ಸಮಾಧಿಯಾಯ್ತಾ ಎಂಬ ಪ್ರಶ್ನೆಗಳೆದ್ದಿವೆ. ಅರ್ಜುನ ಆನೆಯ ಮರಣೋತ್ತರ ಪರೀಕ್ಷೆಗೆ ಒತ್ತಾಯ ಕೇಳಿಬಂದಿದೆ. ಅರ್ಜುನನ ಸಾವಿಗೆ ನ್ಯಾಯ ಕೋರಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಗಳು ಆರಂಭವಾಗಿದೆ. ಇದನ್ನೂ ಓದಿ: ಜೀವ ಬೆದರಿಕೆ ಇದ್ದರೂ ಗೆಹ್ಲೋಟ್, ಪೊಲೀಸರು ಭದ್ರತೆ ನೀಡಲಿಲ್ಲ: ಕರ್ಣಿ ಸೇನಾ ಮುಖ್ಯಸ್ಥನ ಪತ್ನಿ ಆರೋಪ
ಉತ್ತರವಿಲ್ಲದ ಪ್ರಶ್ನೆಗಳು
* ಆನೆ ಸಾವಿನ ಬಗ್ಗೆ ಮಾವುತನೇ ಅನುಮಾನ ವ್ಯಕ್ತಪಡಿಸಿದರೂ ಸ್ಪಂದಿಸಲಿಲ್ಲ ಏಕೆ?
* ಕೇವಲ ಬಾಹ್ಯ ಮರಣೋತ್ತರ ಪರೀಕ್ಷೆ ನಡೆಸಿ ಕೈತೊಳೆದುಕೊಂಡಿದ್ದೇಕೆ?
* ಅರ್ಜುನ ಆನೆಯ ವಿಸ್ತೃತ ಮರಣೋತ್ತರ ಪರೀಕ್ಷೆ ಮಾಡಿಲ್ಲ ಏಕೆ?
* ಆನೆ ಮೃತದೇಹಕ್ಕೆ ಮೆಟಲ್ ಡಿಟೆಕ್ಟರ್ ಟೆಸ್ಟ್ ಏಕೆ ಮಾಡಿಲ್ಲ?
* ಕನಿಷ್ಠ ಅರ್ಜನನ ಮೃತದೇಹದ ಮತ್ತೊಂದು ಭಾಗ ನೋಡದೇ ಮಣ್ಣು ಮುಚ್ಚಿದ್ದೇಕೆ?
* ಅರ್ಜುನ ಮೃತಪಟ್ಟು ಬಿದ್ದ ಸ್ಥಿತಿಯಂತೆಯೇ ಮೃತದೇಹವನ್ನು ಗುಂಡಿಗಿಳಿಸಿದ್ದೇಕೆ?
* ಅರ್ಜುನನ ಬಲ ಭಾಗವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಯ್ತಾ?
ಕಾನೂನು ಏನು ಹೇಳುತ್ತೆ?
ಪ್ರಾಣಿ ಸಾವಿನ ಬಗ್ಗೆ ಅನುಮಾನವಿದ್ದಾಗ ಮರಣೋತ್ತರ ಪರೀಕ್ಷೆ ನಡೆಸಬೇಕು. ಮರಣೋತ್ತರ ಪರೀಕ್ಷೆಯಲ್ಲಿ ಗುಂಡೇಟಿನ ಸತ್ಯ ಸಂಪೂರ್ಣವಾಗಿ ತಿಳಿಯುವುದಿಲ್ಲ. ಸಾಮಾನ್ಯವಾಗಿ ದೊಡ್ಡ ಪ್ರಾಣಿಗಳಿಗೆ ಮೆಟಲ್ ಡಿಟೆಕ್ಟರ್ ಟೆಸ್ಟ್ ಮಾಡುತ್ತಾರೆ. ಮರಣೋತ್ತರ ಪರೀಕ್ಷೆಗೂ ಮುನ್ನ ಮೆಟಲ್ ಡಿಟೆಕ್ಟರ್ ಟೆಸ್ಟ್ ನಡೆಸಬೇಕು. ಇದಕ್ಕಾಗಿ ಅರಣ್ಯ ಇಲಾಖೆಯಲ್ಲಿ ಪ್ರತ್ಯೇಕ ಮಾರ್ಗಸೂಚಿಯೇ ಇದೆ. ಅರ್ಜುನ ಆನೆ ಸಾವಿನ ವಿಚಾರದಲ್ಲಿ ಇದ್ಯಾವುದು ಕೂಡ ಪಾಲನೆ ಮಾಡಿಲ್ಲ.