ಮುಂಬೈ: ಸರ್ಕಾರ ರಚನೆಗೆ ಭಾರೀ ಉತ್ಸುಕವಾಗಿದ್ದ ಶಿವಸೇನೆಗೆ ಕೇವಲ ಒಂದು ಕಾಲ್ನಿಂದ ಭಾರೀ ಹಿನ್ನಡೆಯಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಎನ್ಸಿಪಿ ಮುಖ್ಯಸ್ಥ ಶರತ್ ಪವಾರ್ ಅವರ ಮಧ್ಯೆ ನಡೆದ ಫೋನ್ ಸಂಭಾಷಣೆಯಿಂದಾಗಿ ಶಿವಸೇನೆಯ ಪ್ಲ್ಯಾನ್ ಬುಡಮೇಲಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಉಳಿವಿಗಾಗಿ ಹಾಗೂ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಶಿವಸೇನೆಗೆ ಬೆಂಬಲ ನೀಡದಿರಲು ನಿರ್ಧರಿಸಿದ್ದರು. ಆದರೆ ಸರ್ಕಾರ ರಚನೆಗೆ ರಾಜ್ಯಪಾಲರು ಮಂಗಳವಾರ ಸಂಜೆಯವರೆಗೆ ಅಂತಿಮ ಗಡುವು ನೀಡಿದ್ದರು. ಹೀಗಾಗಿ ಸೋನಿಯಾ ಗಾಂಧಿ ಮೃದುಧೋರಣೆ ತಾಳಿ, ಬೆಂಬಲ ನೀಡಲು ಮುಂದಾಗಿದ್ದರು. ಇತ್ತ ಶರದ್ ಪವಾರ್ ಅವರು ಸಂಜೆ ಸೋನಿಯಾ ಗಾಂಧಿಗೆ ಫೋನ್ ಮಾಡಿದ ಪರಿಣಾಮ ಶಿವಸೇನೆಯ ಸರ್ಕಾರ ರಚಿಸುವ ಕನಸು ತಲೆ ಕೆಳಗಾಯಿತು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಶಿವಸೇನೆಗೆ ಸಂಕಷ್ಟ: 50-50 ಸರ್ಕಾರಕ್ಕೆ ಎನ್ಸಿಪಿ ಪಟ್ಟು, ಕಾಂಗ್ರೆಸ್ನಿಂದ ಭಾರೀ ಬೇಡಿಕೆ
ಮಹಾರಾಷ್ಟ್ರ ಕಾಂಗ್ರೆಸ್ ನಾಯಕರಾದ ಸುಶೀಲ್ ಕುಮಾರ್ ಶಿಂಧೆ, ಅಶೋಕ್ ಚವಾನ್, ಪೃಥ್ವಿರಾಜ್ ಚವಾನ್ ಮತ್ತು ಬಾಲಾಸಾಹೇಬ್ ಥೋರತ್ ಅವರು ಶಿವಸೇನೆಗೆ ಬೆಂಬಲ ನೀಡಿ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಯೋಚಿಸಿದ್ದರು. ಈ ನಿಟ್ಟಿನಲ್ಲಿ ಎನ್ಸಿಪಿ ಜೊತೆಗೆ ಸೇರಿ ಶಿವಸೇನೆಗೆ ಬೆಂಬಲ ನೀಡಲು ಮುಂದಾಗಿದ್ದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ – 3 ಕಾರಣಗಳಿಂದಾಗಿ ರಾಜ್ಯಪಾಲರಿಂದ ಶಿಫಾರಸು
ಸಂಜೆ ಆಗಿದ್ದೇನು?:
ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಇದೇ ಮೊದಲ ಬಾರಿಗೆ ಮಂಗಳವಾರ ಸಂಜೆ 5 ಗಂಟೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕರೆ ಮಾಡಿ, ಸರ್ಕಾರ ರಚನೆಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಸೋನಿಯಾ ಗಾಂಧಿ ಪಕ್ಷದ ಮುಖಂಡರ ಜೊತೆಗೆ ಸಮಾಲೋಚನೆ ನಡೆಸಿ, ತಿಳಿಸುತ್ತೇನೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಆಡಳಿತಕ್ಕೆ ವಿರೋಧ – ಮೈತ್ರಿ ಬಗ್ಗೆ ತುಟಿ ಬಿಚ್ಚದ ಎನ್ಸಿಪಿ, ಕಾಂಗ್ರೆಸ್
ಉದ್ಧವ್ ಠಾಕ್ರೆ ಅವರ ಬೆನ್ನಲ್ಲೇ ಸಂಜೆ 6 ಗಂಟೆಗೆ ಕರೆ ಮಾಡಿದ ಶರತ್ ಪವಾರ್ ಅವರು ಶಿವಸೇನೆಗೆ ಬೆಂಬಲ ನೀಡಲು ಹಿಂದೇಟು ಹಾಕಿದ್ದಾರೆ. ನಾವು ಈಗ ಬೆಂಬಲ ನೀಡುವುದು ಸರಿಯಲ್ಲ. ಅಧಿಕಾರ ಹಂಚಿಕೆಯ ಹಲವು ಅಂಶಗಳ ಬಗ್ಗೆ ಇನ್ನೂ ಮಾತುಕತೆ ನಡೆಸಬೇಕಿದೆ. ಹೀಗಾಗಿ ಶಿವಸೇನೆಗೆ ಬೆಂಬಲ ಪತ್ರವನ್ನು ನೀಡಿಲ್ಲ ಎಂದು ಸೋನಿಯಾ ಗಾಂಧಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಬಹುಮುಖ್ಯವಾಗಿ ನಮ್ಮ ಪಕ್ಷಕ್ಕೆ ಶಿವಸೇನೆಗಿಂತ ಎರಡು ಸ್ಥಾನ ಕಡಿಮೆ ಇದೆ. ಹಾಗಾದರೆ ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನೆಗೆ ಬಿಟ್ಟುಕೊಡಬೇಕೆ ಎಂದು ಪವಾರ್, ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ. ಶರದ್ ಪವಾರ್ ಅವರ ಮಾತಿನಿಂದ ಕಾಂಗ್ರೆಸ್ ನಾಯಕಿ ಆಶ್ಚರ್ಯಚಕಿತರಾಗಿದ್ದಾರೆ. ಈ ಎಲ್ಲ ಬೆಳವಣಿಗೆಯಿಂದಾಗಿ ಶಿವಸೇನೆಗೆ ಬೆಂಬಲ ನೀಡಲು ಎನ್ಸಿಪಿ ಹಿಂದೇಟು ಹಾಕಿದೆ ಎಂದು ವರದಿಯಾಗಿದೆ.
ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರ ಹಾಕಿದ ಎನ್ಸಿಪಿ ಮುಖಂಡ ಅಜಿತ್ ಪವಾರ್, ಸೋಮವಾರ ಬೆಳಗ್ಗೆ 10ರಿಂದ ಸಂಜೆ 7:30ಕ್ಕೆ ಶರದ್ ಪವಾರ್, ಪ್ರಫುಲ್ ಪಟೇಲ್ ಸೇರಿದಂತೆ ನಮ್ಮ ನಾಯಕರು ಬೆಂಬಲ ಪತ್ರಕ್ಕಾಗಿ ಕಾಯುತ್ತಿದ್ದರು. ಶಿವಸೇನೆ ಮಂಗಳವಾರ ಸಂಜೆ 7ರೊಳಗೆ ಪತ್ರವನ್ನು ಸಲ್ಲಿಸಬೇಕಾಗಿತ್ತು. ಆದರೆ ಕಾಂಗ್ರೆಸ್ ತನ್ನ ಬೆಂಬಲ ಪತ್ರವನ್ನು ಕಳುಹಿಸಲಿಲ್ಲ. ನಾವು ಮಾತ್ರ ಬೆಂಬಲ ಪತ್ರ ಹೇಗೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.