ನಗರಸಭೆ ಕರ ವಸೂಲಾತಿಯ ಲಕ್ಷಾಂತರ ರೂ. ದುರುಪಯೋಗ- ಸಿಬ್ಬಂದಿ ಆಸ್ತಿ ಮುಟ್ಟುಗೋಲು ಹಾಕಲು ಮುಂದಾದ ಅಧಿಕಾರಿಗಳು

Public TV
2 Min Read
kodagu madikeri

ಮಡಿಕೇರಿ: ನಗರಸಭೆಯ ವಿವಿಧ ಕರ ವಸೂಲಾತಿಯಲ್ಲಿ 60 ಲಕ್ಷ ರೂಪಾಯಿಗೂ ಹೆಚ್ಚು ಹಣ ದುರುಪಯೋಗವಾಗಿರುವುದು ಸಾಬೀತಾಗಿ, ಅದನ್ನು ವಸೂಲಿ ಮಾಡುವಂತೆ ಪೌರಾಡಳಿತ ಇಲಾಖೆಯಿಂದ ನಿರ್ದೇಶನ ಬಂದು ಮೂರು ತಿಂಗಳೇ ಕಳೆದಿದೆ. ಆದರೆ ಇಂದಿಗೂ ನಯಾಪೈಸೆ ವಸೂಲಾಗಿಲ್ಲ. ಹೀಗಾಗಿ ಸಿಬ್ಬಂದಿ ಅಷ್ಟೂ ಹಣ ವಾಪಸ್ ಮಾಡದಿದ್ದರೆ ಅದೇ ಮೌಲ್ಯದ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಮಡಿಕೇರಿ ನಗರಸಭೆಗೆ ನಿರ್ದೇಶಿಸಲಾಗಿದೆ.

kodagu madikeri Municipality 1

ಮಡಿಕೇರಿ ನಗರಸಭೆಯಲ್ಲಿ 2015 ರಿಂದ 2017 ರವರೆಗೆ ಕರ ವಸೂಲಾತಿಯಲ್ಲಿ ಬರೋಬ್ಬರಿ ಒಂದು ಕೋಟಿಗೂ ಹೆಚ್ಚು ಹಣ ಅಂದಿನ ಕರವಸೂಲಾತಿ ಸಿಬ್ಬಂದಿಯಾದ ಸಜೀತ್ ಮತ್ತು ಸ್ವಾಮಿ ಇಬ್ಬರಿಂದ ದುರ್ಬಳಕೆಯಾಗಿತ್ತು. ಬಳಿಕ ಸ್ಥಳೀಯ ಲೆಕ್ಕ ಪರಿಶೋಧನೆಯಲ್ಲಿ 60,56,860 ರೂಪಾಯಿ ಅವ್ಯವಹಾರ ನಡೆದಿರುವುದು ಸಾಬೀತಾಗಿತ್ತು. ಈ ಕುರಿತು ತನಿಖೆ ನಡೆಸಿದ್ದ ಪೌರಾಡಳಿತ ಇಲಾಖೆ, ಇಬ್ಬರಿಂದ ಅಷ್ಟೂ ಹಣದ ಜೊತೆಗೆ ಇದುವರೆಗೆ ಶೇ.8ರ ಬಡ್ಡಿಯಂತೆ ಎಷ್ಟು ಹಣವಾಗುತ್ತದೆಯೋ ಅಷ್ಟನ್ನು ವಾಪಸ್ ಪಡೆದುಕೊಳ್ಳಬೇಕು. ಅಷ್ಟು ಹಣ ವಾಪಸ್ ಮಾಡದಿದ್ದರೆ ಅದೇ ಮೌಲ್ಯದ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಮಡಿಕೇರಿ ನಗರಸಭೆಗೆ ನಿರ್ದೇಶನ ನೀಡಿ ಮೂರು ತಿಂಗಳು ಕಳೆದಿದೆ. ಇಂದಿಗೂ ಒಂದೇ ಒಂದು ರೂಪಾಯಿ ವಾಪಸ್ ಸಂಗ್ರಹವಾಗಿಲ್ಲ. ಅಥವಾ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ. ಇದನ್ನೂ ಓದಿ: ಹುಟ್ಟಿದಾಗಿನಿಂದಲೂ ಶಾಲಾ-ಕಾಲೇಜು ಮೆಟ್ಟಿಲು ಹತ್ತದ ಯುವತಿ ಪಿಯುಸಿ ಪಾಸ್

kodagu madikeri Municipality 3

ಈ ಕುರಿತು ಮಡಿಕೇರಿ ನಗರಸಭೆ ಆಯುಕ್ತ ರಾಮದಾಸ್ ಅವರನ್ನು ಕೇಳಿದರೆ ಅವ್ಯವಹಾರ ನಡೆಸಿದ್ದ ಇಬ್ಬರಿಗೂ ಎರಡು ನೋಟಿಸ್ ನೀಡಿ ಒಂದು ವಾರವಾಗಿದೆ. ಆದರೆ ಇಂದಿಗೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮತ್ತೊಂದು ನೋಟಿಸ್ ನೀಡಿ, ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.

kodagu madikeri Municipality 4

ನಗರಸಭೆ ಸದಸ್ಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ಕೋಟಿಗೂ ಹೆಚ್ಚು ಹಣ ದುರ್ಬಳಕೆ ಆಗಿತ್ತು. ಅದನ್ನು ಸ್ಥಳೀಯ ಲೆಕ್ಕ ಪರಿಶೋಧನೆ ಮಾಡಿಸಿ ಕೇವಲ 60,56,860 ರೂಪಾಯಿ ಅವ್ಯವಹಾರ ಆಗಿದೆ ಎಂಬುದಾಗಿ ವರದಿ ನೀಡಲಾಗಿದೆ. ಅಲ್ಲದೆ ನಗರಸಭೆಯ ಇತರೆ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದು, ಅವರನ್ನೂ ತನಿಖೆಗೆ ಒಳಪಡಿಸಬೇಕು. ಆ ಕೆಲಸ ಮಾಡದೆ ಅವ್ಯವಹಾರದಲ್ಲಿ ಭಾಗಿಯಾದವರನ್ನೇ ತನಿಖಾ ಸಮಿತಿಯಲ್ಲಿ ಸದಸ್ಯರನ್ನಾಗಿ ಮಾಡಿ ಅವರನ್ನೆಲ್ಲಾ ರಕ್ಷಿಸಲಾಗಿದೆ. ಕೇವಲ ಕರ ವಸೂಲುಗಾರರನ್ನು ತಪ್ಪಿಸ್ಥರೆಂದು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರಗಳು ಜಿಎಸ್‍ಟಿಗೆ ಸೇರಿಸಲು ಒಪ್ಪದ ಹೊರತು ಪೆಟ್ರೋಲ್ ಬೆಲೆ ಇಳಿಯಲ್ಲ: ಹರ್ದೀಪ್ ಸಿಂಗ್ ಪುರಿ

ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ಅಲ್ಲಿಯಾದರೂ ಎಲ್ಲಾ ಹಗರಣಗಳು ಬೆಳಕಿಗೆ ಬರಲಿ ಎನ್ನೋದು ನಗರಸಭೆ ಸದಸ್ಯರ ಆಗ್ರಹ. ನಗರಸಭೆಯಲ್ಲಿ ನಡೆದ ಅವ್ಯವಾರದ ಹಣ ವಸೂಲಿ ಮಾಡಲು ಅಧಿಕಾರಿಗಳು ಇಂದಿಗೂ ಮನಸ್ಸು ಮಾಡಿಲ್ಲ. ಇತ್ತ ತಪ್ಪು ಮಾಡಿದ ನಗರಸಭೆಯ ಸಿಬ್ಬಂದಿಗೂ ಯಾವುದೇ ಶಿಕ್ಷೆ ಅಗದೇ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಹೇಳುವವರು, ಕೇಳುವವರು ಯಾರೂ ಇಲ್ಲ ಎಂಬ ಪರಿಸ್ಥಿತಿ ನಗರಸಭೆಯದು ಎಂದು ಸಾರ್ವನಿಕರು ಪ್ರಶ್ನೆ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *