ಭೋಪಾಲ್: ಮಾವನಿಂದ ಅತ್ಯಾಚಾರಕ್ಕೆ ಒಳಗಾದ ನವ ವಿವಾಹಿತೆ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಮಧ್ಯಪ್ರದೇಶದ ಬಜಾರಿಯಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಕುರಿತು ಮೃತ ಮಹಿಳೆಯ ಪೋಷಕರು ಬಜಾರಿಯಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅತ್ಯಾಚಾರ ಎಸಗಿದ್ದ ಮಾವ ಹಾಗೂ ಮಹಿಳೆಯ ಮೇಲೆ ಹಲ್ಲೆ ಮಾಡಿ, ಮಾನಸಿಕವಾಗಿ ಹಿಂಸೆ ನೀಡಿದ್ದ ಅತ್ತೆ ಹಾಗೂ ಪತಿಯನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?:
ನರಸಿಂಗಾಪುರದ 20 ವರ್ಷದ ಮಹಿಳೆ ಬಜಾರಿಯಾ ಮೂಲದ ಯುವಕನೊಬ್ಬನನ್ನು ಜೂನ್ ತಿಂಗಳಲ್ಲಿ ವಿವಾಹವಾಗಿದ್ದಳು. ಮದುವೆಯಾಗಿ ಮನೆಗೆ ಬಂದಿದ್ದ ಸೊಸೆಯ ಜೊತೆಗೆ ಮಾವ ಅಸಭ್ಯವಾಗಿ ವರ್ತಿಸುತ್ತಿದ್ದನು. ಒಂದು ದಿನ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ್ದ ಕಾಮುಕ ಮಾವ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳೆ ನಡೆದ ಘಟನೆಯನ್ನು ಪತಿ ಹಾಗೂ ಅತ್ತೆಯ ಬಳಿ ಹೇಳಿಕೊಂಡಿದ್ದಾಳೆ.
ಈ ವೇಳೆ ಅವರು ತಪ್ಪನ್ನು ಸರಿಪಡಿಸದೆ ಈ ವಿಷಯನ್ನು ಯಾರಿಗೂ ಹೇಳದಂತೆ ಎಚ್ಚರಿಕೆ ನೀಡಿದ್ದಾರೆ. ಪತಿ ಕೂಡ ಪತ್ನಿಯ ಬೆಂಬಲಕ್ಕೆ ನಿಲ್ಲದೆ ಅಮಾನವೀಯತೆ ಮೆರೆದಿದ್ದಾನೆ. ಇದರಿಂದಾಗಿ ಮನನೊಂದ ಮಹಿಳೆ ತಾಯಿಗೆ ಫೋನ್ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾಳೆ. ಪತ್ನಿ ಫೋನ್ನಲ್ಲಿ ಮಾತನಾಡಿದ್ದನ್ನು ಕೇಳಿಸಿಕೊಂಡ ಪತಿ, ಮೊಬೈಲ್ ಒಡೆದು ಹಾಕಿ, ಹಲ್ಲೆ ಮಾಡಿದ್ದಾನೆ. ಪತಿಯ ಕ್ರೂರ ವರ್ತನೆ, ಮಾವನ ಕೃತ್ಯ ಹಾಗೂ ಅತ್ತೆಯ ಬೆದರಿಕೆಗೆ ಒಳಗಾದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಕುರಿತು ಮೃತ ಮಹಿಳೆಯ ಪೋಷಕರು ನರಸಿಂಗಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೃತರ ಮಾವ, ಪತಿ ಮತ್ತು ಅತ್ತೆಯನ್ನು ಬಂಧಿಸಿದ್ದಾರೆ. ಸದ್ಯ ಈ ಪ್ರಕರಣವನ್ನು ಬಜಾರಿಯಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv