ಬೆಂಗಳೂರು: ಬಿಜೆಪಿಗೆ ನಿಮ್ಮನ್ನು ಕರೆತಂದವರು ಯಡಿಯೂರಪ್ಪ. ಅನಗತ್ಯವಾಗಿ ಬಿಎಸ್ವೈ ಅವರನ್ನು ಟೀಕೆ ಮಾಡಿದರೆ ನಾವು ಸಹಿಸಲ್ಲ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ (M.P.Renukaswamy) ಗುಡುಗಿದ್ದಾರೆ.
ಇನ್ಮುಂದೆ ಯಡಿಯೂರಪ್ಪ ಬಗ್ಗೆ ಅನಾವಶ್ಯಕ ಮಾತಾಡಿದರೆ ತಕ್ಕ ಪಾಠ ಕಲಿಸ್ತೇವೆ. ರಮೇಶ್ ಜಾರಕಿಹೊಳಿ ಅವರೇ ಎರಡು ಪಕ್ಷ ಸುತ್ತಿ ಬಿಜೆಪಿಗೆ ಬಂದಿದ್ದೀರ. ಯಡಿಯೂರಪ್ಪ ಬಗ್ಗೆ ಹಗುರವಾಗಿ ಮಾತಾಡಿರೋದು ನಮಗೆ, ಕಾರ್ಯಕರ್ತರಿಗೆ ನೋವು ತಂದಿದೆ. ನಿಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ ಇರಬೇಕು. ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಅಲ್ಲ. ಹೈಕಮಾಂಡ್ಗೂ ಭೇಟಿ ಮಾಡಿ ತಿಳಿಸ್ತೇವೆ. ಮುಂದಿನ ವಾರ ಮತ್ತೊಂದು ಸಭೆ ನಡೆಸಿ ಒಂದು ತೀರ್ಮಾನ ಮಾಡ್ತೇವೆ ಎಂದು ಎಚ್ಚರಿಸಿದ್ದಾರೆ.
ಪಕ್ಷ ಕಟ್ಟಿದ ಮಹಾನ್ ನಾಯಕ ಯಡಿಯೂರಪ್ಪ. ಅಂಬಾಸಿಡರ್ ಕಾರ್, ಕೆಎಸ್ಆರ್ಟಿಸಿ ಬಸ್, ಸೈಕಲ್ನಲ್ಲಿ ಓಡಾಡಿ ಪಕ್ಷ ಕಟ್ಟಿದ್ರು. 46 ನೇ ವಯಸ್ಸಿನಲ್ಲಿ ಯಡಿಯೂರಪ್ಪ ಅಧ್ಯಕ್ಷ ಆಗಿದ್ರು. ಒಬ್ಬರೇ ಶಾಸಕರಿದ್ದರೂ ಪಕ್ಷ ಕಟ್ಟಲು ಓಡಾಡಿದ್ರು. ಯಡಿಯೂರಪ್ಪ, ಅನಂತಕುಮಾರ್ ನಡುವೆ ಮನಸ್ತಾಪ ಇತ್ತು. ಅದನ್ನ ಪಕ್ಷದೊಳಗೆ ಚರ್ಚೆ ಮಾಡ್ತಿದ್ರು. ಯಡಿಯೂರಪ್ಪ ಪ್ರಶ್ನಾತೀತ ನಾಯಕ, ರಾಜ್ಯದ ಜನ ಬಯಸಿ ಸಿಎಂ ಮಾಡಿದ್ರು ಎಂದು ತಿಳಿಸಿದ್ದಾರೆ.
ಬಿಜೆಪಿ, ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಬೇಕಿತ್ತು. ಯಡಿಯೂರಪ್ಪ ವಿರುದ್ಧ ಕೆಲವರು ಮಾತಾಡ್ತಿದ್ದಾರೆ. ಸಂಘಪರಿವಾರದ ಅಭಿಪ್ರಾಯದ ಮೇಲೆ ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ. ವಿಜಯೇಂದ್ರ ಸಾಮರ್ಥ್ಯ ನೋಡಿ ರಾಷ್ಟ್ರೀಯ ನಾಯಕರು ಅವಕಾಶ ನೀಡಿದ್ದಾರೆ. ಇವರು ಮಾತಾಡೋದು ವಿಜಯೇಂದ್ರ ವಿರುದ್ಧ ಅಲ್ಲ, ಮೋದಿ ವಿರುದ್ಧ, ರಾಷ್ಟ್ರೀಯ ನಾಯಕರ ವಿರುದ್ಧ. ಯಡಿಯೂರಪ್ಪ ಅವರನ್ನ ಟೀಕಿಸೋದು ಒಂದೇ, ರಾಷ್ಟ್ರೀಯ ನಾಯಕರನ್ನ ಟೀಕಿಸೋದು ಒಂದೆ ಎಂದು ಗರಂ ಆಗಿದ್ದಾರೆ.
ಅನಿವಾರ್ಯವಾಗಿ ನಾವು ಮಾತಾಡುತ್ತಿದ್ದೇವೆ. ಯತ್ನಾಳ್ ಹೇಳ್ತಾರೆ 17 ಜನ ಕರೆ ಮಾಡಿದ್ರು ಅಂತ. ಯಾರು ಕರೆ ಮಾಡಿದ್ರು ಹೇಳಿ. ಸೋತವರ, ಗೆದ್ದವರ ಸಭೆ ಮಾಡಲು ವಿಜಯೇಂದ್ರಗೆ ಹಕ್ಕಿದೆ. ಅಧ್ಯಕ್ಷರು ಸಮರ್ಥರಿದ್ದಾರೆ, ದುರ್ಬಲರಿಲ್ಲ. ರಮೇಶ್ ನನ್ನ ಸ್ನೇಹಿತ, ಆದರೆ ಅನಗತ್ಯವಾಗಿ ಯಾಕೆ ಯಡಿಯೂರಪ್ಪ ಬಗ್ಗೆ ಟೀಕೆ? ಯತ್ನಾಳ್ ಕೂಡ ನನ್ನ ಸ್ನೇಹಿತ. ಯಾಕೆ ವಿನಾಕಾರಣ ಟೀಕೆ? ಪಕ್ಷಕ್ಕೆ, ಹೈ ನಾಯಕರಿಗೆ ಅಪಮಾನ ಮಾಡ್ತೀರಾ? ಪಕ್ಷದ ನಿಯಮದಂತೆ ವಿಜಯೇಂದ್ರ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದು ತಿಳಿಸಿದ್ದಾರೆ.