ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Loksabha Election) ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ 1 ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಲಾಗುವುದು ಎಂದು ಆಮ್ ಅದ್ಮಿ ಪಕ್ಷ ಹೇಳಿದೆ. ಇಂಡಿಯಾ ಒಕ್ಕೂಟದ (I.N.D.I.A) ಭಾಗವಾಗಿ ಸೀಟು ಹಂಚಿಕೆಯ ಮಾತುಕತೆ ನಡೆಯುತ್ತಿದ್ದು, ಈ ಹಿನ್ನೆಲೆ ದೆಹಲಿಯಲ್ಲಿ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದೆ.
ದೆಹಲಿಯಲ್ಲಿ ಹಿಂದೆ ನಡೆದ ಎಲ್ಲ ಚುನಾವಣೆಗಳಲ್ಲಿ AAPಯ ಪ್ರಬಲ ಪ್ರದರ್ಶನ ನೀಡಿದೆ. ಬಹುಪಾಲು ವಿಧಾನಸಭಾ ಸ್ಥಾನಗಳನ್ನು ಗೆದ್ದುಕೊಂಡಿದ್ದು, ಇದೇ ಕಾರಣಕ್ಕೆ ಸೀಟು ಹಂಚಿಕೆಯ ಮಾತುಕತೆಗಳಲ್ಲಿ ಹಿಡಿತ ಸಾಧಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಸತತ ಹಿನ್ನಡೆಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ರಾಜಧಾನಿ ದೆಹಲಿಯಲ್ಲಿ ತನ್ನ ನೆಲೆಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ.
ಮೆರಿಟ್ ಆಧಾರದ ಮೇಲೆ ಕಾಂಗ್ರೆಸ್ (Congress) ಪಕ್ಷವು ದೆಹಲಿಯಲ್ಲಿ ಒಂದೇ ಒಂದು ಸ್ಥಾನಕ್ಕೂ ಅರ್ಹವಾಗಿಲ್ಲ. ಆದರೆ ಮೈತ್ರಿ ಧರ್ಮವನ್ನು ಗಮನದಲ್ಲಿಟ್ಟುಕೊಂಡು ನಾವು ಅವರಿಗೆ ಒಂದು ಸ್ಥಾನವನ್ನು ನೀಡುತ್ತೇವೆ AAP ಆರು ಸ್ಥಾನಗಳಲ್ಲಿ ಹೋರಾಡಲು ಪ್ರಸ್ತಾಪಿಸುತ್ತೇವೆ ಎಂದು ಆಪ್ ಸಂಸದ ಸಂದೀಪ್ ಪಾಠಕ್ ಹೇಳಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಶೂನ್ಯ ಸ್ಥಾನಗಳನ್ನು ಹೊಂದಿದೆ. ಎಂಸಿಡಿ ಚುನಾವಣೆಯಲ್ಲಿ ಕಾಂಗ್ರೆಸ್ 250 ರಲ್ಲಿ 9 ಸ್ಥಾನಗಳನ್ನು ಗೆದ್ದಿದೆ ಎಂದು ಪಾಠಕ್ ಹೇಳಿದರು. ಇದನ್ನೂ ಓದಿ: ದೆಹಲಿ ಚಲೋ ರೈತರ ಮೇಲೆ ಅಶ್ರುವಾಯು ಪ್ರಯೋಗ – ಹಲವರು ವಶಕ್ಕೆ
ಮೂಲಗಳ ಪ್ರಕಾರ, ಆರಂಭಿಕ ಚರ್ಚೆಯಲ್ಲಿ ದೆಹಲಿಯಲ್ಲಿ 4:3 ಸೀಟು ಹಂಚಿಕೆ ಸೂತ್ರವನ್ನು ಕಾಂಗ್ರೆಸ್ ಸೂಚಿಸಿತ್ತು. ಕಾಂಗ್ರೆಸ್ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿದರೆ AAP ಮೂರು ಸ್ಥಾನಗಳನ್ನು ಸ್ಪರ್ಧಿಸಬೇಕು ಎನ್ನುವುದು ಕಾಂಗ್ರೆಸ್ ಪ್ರಸ್ತಾಪವಾಗಿತ್ತು. ಇದು ಎರಡೂ ಪಕ್ಷಗಳಿಗೆ ತೃಪ್ತಿಕರವಾದ ಒಮ್ಮತವನ್ನು ತಲುಪಲು ಪಕ್ಷಗಳು ವಿಫಲವಾಗಿವೆ ಎಂದು ತಿಳಿದುಬಂದಿದೆ.
ಈಗಾಗಲೇ ಪಂಜಾಬ್ ಮತ್ತು ಚಂಡಿಗಢದಲ್ಲಿ ಸೀಟು ಹಂಚಿಕೆ ಮಾತುಕತೆ ವಿಫಲವಾಗಿದ್ದು, 14 ಲೋಕಸಭೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಆಪ್ ಅದ್ಮಿ ಘೋಷಣೆ ಮಾಡಿದೆ. ಹರಿಯಾಣ ಮತ್ತು ಗೋವಾದಂತಹ ಇತರ ರಾಜ್ಯಗಳಲ್ಲಿ ಸೀಟುಗಳಿಗಾಗಿ ಎಎಪಿಯ ಬೇಡಿಕೆಗಳಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ. ಆಪ್ ಬೇಡಿಕೆಗಳಿಗೆ ಕಾಂಗ್ರೆಸ್ ಪ್ರತಿರೋಧ ವ್ಯಕ್ತಪಡಿಸಿದ್ದು, ಇದು ಒಕ್ಕೂಟದ ಮೇಲೆ ನರಕಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.