– ದೂರು ನೀಡಿದ್ರೆ ಧಮ್ಕಿ ಹಾಕ್ತಾರೆ ಶಾಸಕರ ಬೆಂಬಲಿಗರು
ಕೊಪ್ಪಳ: ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಆದ್ರೆ ಗಂಗಾವತಿಯ ಶಾಸಕ ಇಕ್ಬಾಲ್ ಅನ್ಸಾರಿ ಮಾತ್ರ ಲಿಕ್ಕರ್ ಮಾಫಿಯಾ ಮೂಲಕ ಜನರನ್ನು ಹಗಲು ದರೋಡೆ ಮಾಡುತ್ತಿದ್ದಾರೆ.
ಶಾಸಕ ಇಕ್ಬಾಲ್ ಅನ್ಸಾರಿ ಅವರಿ ಗಂಗಾವತಿ ತಾಲೂಕಿನಲ್ಲಿ ಬರೋಬ್ಬರಿ 24 ಬಾರ್ಗಳನ್ನು ಹೊಂದಿದ್ದಾರೆ. ಇದರಲ್ಲಿ 22 ಬಾರ್ಗಳು ಶಾಸಕ ಅನ್ಸಾರಿ ಹಾಗೂ ಪತ್ನಿ ತಬಸುಮ್ ಅನ್ಸಾರಿ ಅವರ ಹೆಸರಲ್ಲಿದೆ. ಹೀಗಾಗಿಯೇ ಇಲ್ಲಿ ಯಾವುದೇ ಬಾರ್ಗಳಿಗೆ ಹೋದರೂ ಎಂಆರ್ಪಿ ದರಕ್ಕಿಂತ 40 ರಿಂದ 50 ರೂ. ಹೆಚ್ಚಿನ ಹಣ ಕೊಡಲೇಬೇಕು. ಇನ್ನೂ ಇವರ ಬಾರ್ಗಳಲ್ಲಿ ಸರ್ಕಾರದ ನಿಯಮದಂತೆ ಯಾವುದೇ ದರಪಟ್ಟಿ ಅಥವಾ ಎಂಆರ್ಪಿ ರೇಟ್ ಲಿಸ್ಟ್ ಕೂಡ ಹಾಕಿಲ್ಲ. ಈಗ ಇವರ ಲಿಕ್ಕರ್ ಲಾಬಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸೈಯದ್ ಅಲಿ ಎಂಬುವರು ಬೆಂಗಳೂರಿನ ಅಬಕಾರಿ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದಾರೆ.
ಕೊಪ್ಪಳದ ಗಂಗಾವತಿ ತಾಲೂಕಿನಾದ್ಯಂತ ಲಿಕ್ಕರ್ ಮಾರಾಟದಲ್ಲಿ ಮಾತ್ರ ಸ್ಪರ್ಧೆಯೇ ಇಲ್ಲ. ಬದಲಾಗಿ ಇಕ್ಬಲ್ ಅನ್ಸಾರಿ ಅವರೇ ಇಡೀ ತಾಲೂಕಿನಲ್ಲಿ ಮದ್ಯ ಮಾರಾಟದ ಮೇಲೆ ಹಿಡಿತ ಸಾಧಿಸಿದ್ದಾರೆ. ಇದರಿಂಂದ ತಾಲೂಕಿನಾದ್ಯಂತ ಮದ್ಯವನ್ನು ನಿಗದಿಗಿಂದ 40 ರಿಂದ 50 ರೂಪಾಯಿ ಹೆಚ್ಚುವರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ವಿವಿಧ ಮದ್ಯಕ್ಕೆ ಇಡೀ ರಾಜ್ಯದಲ್ಲೇ ಒಂದು ಬೆಲೆಯಾದ್ರೆ, ಗಂಗಾವತಿ ತಾಲೂಕಿನಲ್ಲೇ ಮತ್ತೊಂದು ಬೆಲೆ ನಿಗದಿಯಾಗಿದೆ. ಈ ಬಗ್ಗೆ ಕೆಲ ಸಾಮಾಜಿಕ ಕಾರ್ಯಕರ್ತ ಸೈಯದ್ ಅಲಿ ಅಬಕಾರಿ ಇಲಾಖೆಗೆ ಸಾಕಷ್ಟು ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ.
ಗಂಗಾವತಿ ತಾಲೂಕಿನಲ್ಲಿ ಒಟ್ಟು 17 ಸಿಎಲ್ 2 ಬಾರ್ಗಳಿದ್ದು ಎಲ್ಲವೂ ಶಾಸಕ ಇಕ್ಬಾಲ್ ಅನ್ಸಾರಿ ಒಡೆತನದಲ್ಲಿಯೇ ಇವೆ. ಸಾಮಾನ್ಯವಾಗಿ ಸಿಎಲ್ 2 ಮದ್ಯದಂಗಡಿಯಲ್ಲಿ ಎಂಆರ್ಪಿ ದರಕ್ಕೆ ಮದ್ಯ ಮಾರಾಟ ಮಾಡಬೇಕು. ಜೊತೆಗೆ ಅಲ್ಲಿಯೇ ನಿಂತು ಕುಡಿಯಲು ಅವಕಾಶ ಇಲ್ಲ. ಆದ್ರೆ, ಗಂಗಾವತಿಯ ಎಲ್ಲ ಸಿಎಲ್ 2 ಅಂಗಡಿಯಲ್ಲಿ ಪ್ರತಿ ಫುಲ್ ಬಾಟಲ್ ಮೇಲೆ 40 ರಿಂದ 50 ರೂಪಾಯಿ ಹೆಚ್ಚು ಹಣ ಪೀಕುತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಲಿಕರ್ ಲಾಬಿ ಎಳೆಎಳೆಯಾಗಿ ಹೊರ ಬಿದ್ದಿದೆ.
ಸರ್ಕಾರದ ನಿಯಮದಂತೆ ಗಂಗಾವತಿಯ ಯಾವುದೇ ಬಾರ್ನಲ್ಲಿ ದರಪಟ್ಟಿ ನೇತು ಹಾಕಿಲ್ಲ. ಇನ್ನು ಸಿಎಲ್ 2 ಅಂಗಡಿ ಮುಂದೆಯೇ ಕುಡುಕರು ಕುಡಿದು ಅಸಭ್ಯ ವರ್ತನೆ ಮಾಡುವುದು ಮಹಿಳೆಯರಿಗೆ ಬೇಸರ ತರಿಸಿದೆ. ಈ ಎಲ್ಲ ಅಕ್ರಮವನ್ನು ಪ್ರಶ್ನಿಸುವವರಿಗೆ ಶಾಸಕ ಅನ್ಸಾರಿ ಬೆಂಬಲಿಗರು ಧಮ್ಕಿ ಹಾಕಿ, ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.