ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿಯ ಕವಿ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳಿಗೆ ತೀರ್ಥಹಳ್ಳಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಪದ್ಮವಿಭೂಷಣ ಪದಕ ಸೇರಿದಂತೆ ಇತರೆ ಅಮೂಲ್ಯ ವಸ್ತುಗಳನ್ನು ಖದೀಮರು ಕಳ್ಳತನ ಮಾಡಿದ್ದರು. ಈ ಪ್ರಕರಣದ ಅಪರಾಧಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಐದು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಮೊದಲ ಅಪರಾಧಿ ದಾವಣಗೆರೆ ಜಿಲ್ಲೆಯ ತುರಚಘಟ್ಟದ ಬೆಳಂದೂರಿನ ರೇವಣಸಿದ್ದಪ್ಪ ಈಗಾಗಲೇ ವಿಚಾರಣಾ ಹಂತದಲ್ಲೇ ಮೃತಪಟ್ಟಿದ್ದಾನೆ. ಇನ್ನು ಮೊದಲ ಅಪರಾಧಿ ರೇವಣಸಿದ್ದಪ್ಪಗೆ ಪದಕ ಕಳ್ಳತನಕ್ಕೆ ಪ್ರೇರೇಪಿಸಿದ ಕವಿ ಮನೆಯ ಮಾರ್ಗದರ್ಶಕ ಆಂಜನಪ್ಪ ಎರಡನೇ ಅಪರಾಧಿಯಾಗಿದ್ದು, ಕಳ್ಳತನದ ಮಾಲೆಂದು ಗೊತ್ತಿದ್ದರೂ ಅವುಗಳನ್ನು ಖರೀದಿ ಮಾಡಿದ್ದ ಸವಳಂಗದ ಪ್ರಕಾಶ್ ಮೂರನೇ ಅಪರಾಧಿಯಾಗಿದ್ದಾನೆ.
ಎರಡು ಮತ್ತು ಮೂರನೇ ಅಪರಾಧಿಗಳಿಗೆ ನ್ಯಾಯಾಲಯವು ತಲಾ ಎರಡು ವರ್ಷ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿದೆ. ಒಂದು ವೇಳೆ ದಂಡದ ಹಣ ಕಟ್ಟಲು ವಿಫಲವಾದರೆ, ಮತ್ತೆ ಆರು ತಿಂಗಳ ಕಾಲ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಿದೆ.
ಈ ಪ್ರಕರಣ 2015ರ ನವಂಬರ್ 23ರಂದು ನಡೆದಿತ್ತು. ಕವಿ ಮನೆಗೆ ನುಗ್ಗಿದ ಖದೀಮರು ಕುವೆಂಪು ಅವರಿಗೆ ಮೈಸೂರು ವಿವಿ ನೀಡಿದ್ದ ಎರಡು ಪದಕ, ಕೇಂದ್ರ ಸರ್ಕಾರ ನೀಡಿದ್ದ ಪದ್ಮವಿಭೂಷಣ ಪದಕ, ಒಂದು ಸಾವಿರ ರೂ ನಗದು ಕಳ್ಳತನ ಆಗಿತ್ತು. ಈ ಬಗ್ಗೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಖಜಾಂಚಿ ಮನುದೇವ್ ತೀರ್ಥಹಳ್ಳಿ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡಿದ್ದ ಪೊಲೀಸರು ಅಂದಿನ ಪಿಎಸ್ಐ ಭರತ್ ಕುಮಾರ್ ಹಾಗೂ ಸಿಪಿಐ ಎಚ್.ಎಂ ಮಂಜುನಾಥ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿದ್ದರು. ಕಳ್ಳತನ ಮಾಡಿದ್ದ ಎಲ್ಲಾ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಪದ್ಮವಿಭೂಷಣ ಪದಕ ಮಾತ್ರ ಪತ್ತೆಯಾಗಿಲ್ಲ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಡಿ. ಬಿನು ಅವರು ವಾದ ಮಂಡಿಸಿದ್ದರು.