ಮಂಡ್ಯ: ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದ ಕನಕದಾಸ ಜಯಂತಿ ಹೆಸರಿಗೆ ಅಷ್ಟೇ ಜಯಂತಿ ಆಗಿತ್ತು ಅಷ್ಟೇ. ಅಲ್ಲಿ ನಿಜವಾಗಿ ನಡೆದಿದ್ದು, ಕಾಂಗ್ರೆಸ್ನಿಂದ (Congress) ಮುಂದಿನ ಸಿಎಂ ಸಿದ್ದರಾಮಯ್ಯ (Siddaramaiah) ಎಂಬ ಘೋಷಣೆಯ ಕಾರ್ಯಕ್ರಮವಾಗಿತ್ತು.
ಕೆ.ಆರ್.ಪೇಟೆಯಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದ ಉದ್ದಕ್ಕೂ ಸಿದ್ದರಾಮಯ್ಯ ಆಪ್ತರು ಹಾಗೂ ಕುರುಬ ಸಮಾಜದ ಮುಖಂಡರು ಸಿದ್ದರಾಮಯ್ಯರನ್ನು ಹಾಡಿ ಹೊಗಳಿದರು. ಇದಲ್ಲದೇ ರಾಜ್ಯದ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಪ್ರತಿಯೊಬ್ಬರು ತಮ್ಮ ಭಾಷಣದಲ್ಲಿ ಹೇಳುವ ಮೂಲಕ ಕಾಂಗ್ರೆಸ್ನಲ್ಲಿ ಸಿಎಂ ವಿವಾದಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಮತ್ತೆ ನಾಂದಿಯಾಗಿದೆ.
ಕಾರ್ಯಕ್ರಮಕ್ಕೂ ಮೊದಲು ಮಾತನಾಡಿದ ಕುರುಬ ಸಮಾಜದ ಮಂಡ್ಯ ಜಿಲ್ಲಾಧ್ಯಕ್ಷ ಸುರೇಶ್, ಕುರುಬ ಸಮಾಜ ಸಿದ್ದರಾಮಯ್ಯರನ್ನು ಬೆಂಬಲಿಸಿದರೆ ಮುಂದೆ ಸಿದ್ದರಾಮಯ್ಯಗೆ ಮತ್ತೊಮ್ಮೆ ಸಿಎಂ ಆಗುವ ಅವಕಾಶ ಇದೆ. ಸಿದ್ದರಾಮಯ್ಯ ಹೇಳಿದವರಿಗೆ ಮತ ಹಾಕಿ. ಸಿದ್ದರಾಮಯ್ಯ ಅವರನ್ನು ನಾವು ಬೆಂಬಲಿಸಬೇಕು. ಇದರಿಂದ ಸಮುದಾಯಕ್ಕೆ ಮತ್ತಷ್ಟು ಕೊಡುಗೆ ಸಿಗುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಆಪ್ತ ಹಾಗೂ ಶಾಸಕ ಭೈರತಿ ಸುರೇಶ್ (Byrathi Suresh) ರಾಜ್ಯದಲ್ಲಿ 45 MLAಗಳು ಸಿದ್ದರಾಮಯ್ಯ ಹೆಸರಲ್ಲಿ ಗೆಲ್ಲುತ್ತಾರೆ. ಕೆಆರ್ಪೇಟೆಯಲ್ಲೂ ಸಿದ್ದರಾಮಯ್ಯ ಹೆಸರೆ ಸಾಕು ಗೆಲ್ಲೋಕೆ. ಇನ್ನೂ 5 ತಿಂಗಳು ಚುನಾವಣೆ ಇದೆ ಅಷ್ಟೇ. ಸಿದ್ದರಾಮಯ್ಯ ಅವರಿಗೆ ಈ ಬಾರಿಯೂ ಸಿಎಂ ಆಗುವ ಅವಕಾಶ ಇದೆ. ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಎಲ್ಲಾ ಜನಾಂಗ ಅಂದುಕೊಂಡಿದೆ. ಎಲ್ಲರೂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ. ಮಂಡ್ಯದ 7 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.
ಭಾಷಣದಲ್ಲಿ ಮಾಜಿ ಸಚಿವ ಹೆಚ್.ಎಂ ರೇವಣ್ಣ (HM Revanna) ಮಾತನಾಡಿ, 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಂಡಿತ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಸಿಎಂ ಆಗಬೇಕೆಂಬುದು ಎಲ್ಲರ ಆಶಯವಾಗಿದೆ. ಹೊಟ್ಟೆ ಕಿಚ್ಚಿನಿಂದ ವೈಯಕ್ತಿಕವಾಗಿ ಟೀಕೆ ಮಾಡುತ್ತಾರೆ. ಕೆಲಸಗಳ ಬಗ್ಗೆ ಮಾತನಾಡಿ ಅಂದರೆ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಬಿಜೆಪಿಯವರದ್ದು, 40 ಪರ್ಸೆಂಟ್ ಸರ್ಕಾರ. ಬಿಜೆಪಿಯವರು ಅದು ಸಾಲದು ಅಂತಾ ಮತಚೀಟಿ ಕದಿಯಲು ಶುರು ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದರು.
ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, ಈ ಹಿಂದೆ ದೇವೇಗೌಡರು ಸಿದ್ದರಾಮಯ್ಯ ವ್ಯಕ್ತಿ ಅಲ್ಲ ಶಕ್ತಿ ಅಂದಿದ್ದರು. ಆಗ ನನಗೆ ದೇವೇಗೌಡರ ಮಾತು ಅರ್ಥ ಆಗಲಿಲ್ಲ. ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯೋತ್ಸವದಲ್ಲಿ ಅರ್ಥ ಆಯ್ತು. ದಾವಣಗೆರೆಗೆ ಕನಕದಾಸ ಜಯಂತಿ ಮಾಡಲು ಜನ ಬಂದಿರಲಿಲ್ಲ. ಜನ ಅವರ ಆಡಳಿತ ನೋಡಿ ಬಂದಿದ್ದರು. ಜನ ಯಾರಿಗೆ ಮತ ನೀಡಿದ್ರು, ಸಿದ್ದರಾಮಯ್ಯ ಆಡಳಿತ ಎಲ್ಲಾ ಕಾಲಕ್ಕೂ ಶೇಷ್ಠ ಅಂತಾರೆ. ಈಗ ಧರ್ಮ, ಜಾತಿಯ ಆಡಳಿತ ಮಾಡುತ್ತಿದ್ದಾರೆ ಬಿಜೆಪಿಯವರು ಎಂದು ಕಿಡಿಕಾರಿದರು. ಇದನ್ನೂ ಓದಿ: 2024ರೊಳಗೆ Air India ಜೊತೆ ವಿಸ್ತಾರಾ ವಿಲೀನ – 2 ಸಾವಿರ ಕೋಟಿ ಹೂಡಿಕೆಗೆ ಟಾಟಾ ಚಿಂತನೆ
ಸಿದ್ದರಾಮಯ್ಯ ಅವರ 5 ವರ್ಷದ ಆಡಳಿತವನ್ನು ಜನ ನೆನೆಯುತ್ತಿದ್ದಾರೆ. ಸಿದ್ದರಾಮಯ್ಯ ಅನ್ನ ಭಾಗ್ಯ ಕೊಡಲಿಲ್ಲ ಅಂದ್ರೆ ಕೊರೊನಾ ವೇಳೆ ಜನರ ಬದುಕು ಏನು ಆಗುತ್ತಿತ್ತು. ಸಿದ್ದರಾಮಯ್ಯ ಅವರನ್ನು ಎಲ್ಲರೂ ಬೆಂಬಲಿಸಿ ಎಂದು ಸಿದ್ದರಾಮಯ್ಯ ಪರ ಮಹದೇವಪ್ಪ ಬ್ಯಾಟಿಂಗ್ ಮಾಡಿದರು. ಇದನ್ನೂ ಓದಿ: ಸಾಮೂಹಿಕ ಪ್ರಾರ್ಥನೆ ಹೆಸರಲ್ಲಿ ಮತಾಂತರ ಆರೋಪ- ಗ್ರಾಮಸ್ಥರಿಂದ ದೂರು