ಶಿವಮೊಗ್ಗ: ಅಯೋಧ್ಯೆಯ (Ayodhya) ಪ್ರಾಣಪ್ರತಿಷ್ಠಾಪನೆ ಸಮಾರಂಭದ ಸಲುವಾಗಿ ಬಿಜೆಪಿ ನಾಯಕರು ಸಿಹಿ ಹಂಚುವ ವೇಳೆ ಮುಸ್ಲಿಂ ಮಹಿಳೆಯೋರ್ವಳು ಅಲ್ಲಾಹು ಅಕ್ಬರ್ ಎಂದು ಕೂಗಿದ ವಿಚಾರವಾಗಿ ತನಿಖೆ ನಡೆಸಬೇಕೆಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಆಗ್ರಹಿಸಿದ್ದಾರೆ.
ನಗರದಲ್ಲಿ (Shivamogga) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸಿಎಂ, ಗೃಹ ಸಚಿವರು ಗಮನ ಹರಿಸಬೇಕು. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಇದರ ಹಿಂದೆ ಯಾರಿದ್ದಾರೆ? ಯಾರು ಕುಮ್ಮಕ್ಕು ಕೊಟ್ಟಿದ್ದಾರೆ ಎಲ್ಲವೂ ತನಿಖೆಯಿಂದ ಹೊರಗೆ ಬರಬೇಕು. ಆ ಮಹಿಳೆ ಶಿವಮೊಗ್ಗದಲ್ಲಿ ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ದಾಳೆ. ಅಯೋಧ್ಯೆಯ ಸಂಭ್ರಮದಲ್ಲಿ ಇರುವಾಗ ಇದ್ದಕ್ಕಿದ್ದಂತೆ ಗಲಾಟೆ ನಡೆಸುವ ಪ್ರಯತ್ನ ಮಾಡಿರುವುದು ಬೇಸರ ತರಿಸಿದೆ ಎಂದಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ: ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠೆ ಸಂಭ್ರಮದ ವೇಳೆ ಅಲ್ಲಾಹು ಅಕ್ಬರ್ ಎಂದು ಕೂಗಿದ ಮುಸ್ಲಿಂ ಮಹಿಳೆ
ಬುರ್ಕಾ ಹಾಕಿಕೊಂಡು ಬಂದು ಮೋದಿಗೆ ಅಪಮಾನ ಮಾಡಿದ್ದಾಳೆ. ಆಕೆ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಆಕೆಯನ್ನು ಬಂಧಿಸುವಂತೆ ಹೇಳಿದ್ದೇನೆ. ಈ ವಿಚಾರದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ಆಕೆ ಹುಚ್ಚಿ ಆಗಿದ್ದರೆ ಅಲ್ಲಾಹು ಅಕ್ಬರ್ ಅಂತಾ ಹೇಗೆ ಕೂಗಿದಳು? ಮೋದಿಗೆ ಧಿಕ್ಕಾರ ಏಕೆ ಕೂಗಿದಳು? ಸಂಭ್ರಮದ ಕಾರ್ಯಕ್ರಮದ ವೇಳೆ ಷಡ್ಯಂತ್ರ ನಡೆಸುವ ಕೆಲಸ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ದೇಶದ ಹಿಂದೂಗಳ 500 ವರ್ಷದ ಕನಸು ನನಸಾಗಿದೆ. ಯಾವನೋ ಆಕ್ರಮಣಕಾರಿ ಬಾಬರ್ ದೇವಸ್ಥಾನ ಕೆಡವಿ ಮಸೀದಿ ಕಟ್ಟಿದ್ದ. ಈಗ ಒಬ್ಬಳು ಮಹಿಳೆ ಅಲ್ಲಾಹು ಅಕ್ಬರ್ ಎಂದು ಕೂಗಿದ್ದಾಳೆ ಎಂದಿದ್ದಾರೆ.
ಇಂದು ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ನಡೆದಿದೆ. ಈ ಸುದಿನ ನಮ್ಮೆಲ್ಲರಿಗೂ ಸಂತೋಷದ ದಿನ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆಗಿದೆ. ಮುಂದಿನ ದಿನಗಳಲ್ಲಿ ಕಾಶಿ ಮಥುರಾದಲ್ಲಿ ದೇವಾಲಯ ನಿರ್ಮಾಣ ಆಗಬೇಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಖಳನಾಯಕ. ರಾಜ್ಯದಲ್ಲಿ ಸಿದ್ದರಾಮಯ್ಯ ಖಳನಾಯಕನ ರೀತಿ ವರ್ತಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರಾಜ್ಯ ಸರ್ಕಾರ ಬಿದ್ದು ಹೋಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮನಿಗೆ ಮೋದಿ ಸಾಷ್ಟಾಂಗ ನಮಸ್ಕಾರ