ಕಿಚ್ಚ ಸುದೀಪ್ (Sudeep) ಹುಟ್ಟು ಹಬ್ಬದ ದಿನದಂದು ಅಚ್ಚರಿಯ ಸುದ್ದಿ ಕೊಟ್ಟು ಕಿಚ್ಚನ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾಗಿದ್ದಾರೆ ಖ್ಯಾತ ನಿರ್ದೇಶಕ ಆರ್.ಚಂದ್ರು (R. Chandru). ‘ಕಬ್ಜ 2’ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದ ಚಂದ್ರು, ಏಕಾಏಕಿ ಕಿಚ್ಚನ ಚಿತ್ರಕ್ಕೆ ಕೈ ಹಾಕಿದ್ದಾರೆ. ಜೊತೆಗೆ ಹೆಸರಾಂತ ಕಥೆಗಾರ, ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ (Vijendra Prasad) ಅವರನ್ನು ತಮ್ಮ ತಂಡದೊಂದಿಗೆ ಸೇರಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಬಗ್ಗೆ ಈಗಿನಿಂದಲೇ ನಿರೀಕ್ಷೆ ಹೆಚ್ಚಾಗಿದೆ.
ಚಂದ್ರು ಅವರಿಗೆ ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಿಮ್ಯಾಂಡ್ ಇದೆ. ‘ಕಬ್ಜ’ ಸಿನಿಮಾದ ನಂತರ ಬೇಡಿಕೆಯ ನಿರ್ದೇಶಕರಾಗಿದ್ದಾರೆ. ಇದನ್ನೂ ದಾಟಿಕೊಳ್ಳುವ ಮತ್ತೊಂದು ಪ್ರಾಜೆಕ್ಟ್ ಇದಾಗಿದೆ. ಹಾಗಾಗಿಯೇ ಕಿಚ್ಚ ಮತ್ತು ಚಂದ್ರು ಕಾಂಬಿನೇಷನ್ ಸಿನಿಮಾ ಗ್ಲೋಬಲ್ ಮಟ್ಟದಲ್ಲಿ ಸದ್ದು ಮಾಡಲಿದೆಯಂತೆ. ಕನ್ನಡ ಸಿನಿಮಾವೊಂದನ್ನು ಜಾಗತಿಕ ಮಟ್ಟದಲ್ಲಿ ತೆಗೆದುಕೊಂಡು ಹೋಗುವ ಪ್ಲ್ಯಾನ್ ನಿರ್ದೇಶಕರದ್ದು.
ತನ್ನ ಜೊತೆಗಿರುವವರನ್ನು ಸದಾ ಬೆಳೆಸುತ್ತಾ ಬಂದಿದ್ದಾರೆ ಚಂದ್ರು, ಹೊಸ ಹೊಸ ನಿರ್ದೇಶಕರಿಗೆ ಅವಕಾಶವನ್ನೂ ನೀಡಿದ್ದಾರೆ. ಈಗ ತಮ್ಮ ಕನಸನ್ನು ಮತ್ತಷ್ಟು ವಿಸ್ತಾರ ಮಾಡಿಕೊಂಡಿದ್ದು, ವರ್ಷಕ್ಕೆ ಮೂರ್ನಾಲ್ಕು ಚಿತ್ರ ಮಾಡುವುದಕ್ಕಾಗಿಯೇ ‘ಆರ್.ಸಿ ಸ್ಟುಡಿಯೋಸ್’ (R.C. Studios)ಬ್ಯಾನರ್ ಅನ್ನು ಶುರು ಮಾಡಿದ್ದಾರೆ. ಈ ಸ್ಟುಡಿಯೋದ ಮೊದಲ ಚಿತ್ರವಾಗಿ ಕಿಚ್ಚನ ಸಿನಿಮಾ ಘೋಷಣೆಯಾಗಿದೆ. ಇದೇ ತಿಂಗಳಲ್ಲೇ ಮತ್ತೆ ಎರಡು ಚಿತ್ರಗಳನ್ನು ಘೋಷಿಸುವುದಾಗಿ ಅವರು ಹೇಳಿದ್ದಾರೆ.
ಹಾಗಂತ ಕಬ್ಜ 2 ಕೆಲಸವನ್ನು ಅವರು ನಿಲ್ಲಿಸಿಲ್ಲವಂತೆ. ತನ್ನ ಪಾಡಿಗೆ ತಾನು ಸ್ಕ್ರಿಪ್ಟ್ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಮೂವರು ಹೆಸರಾಂತ ಸ್ಟಾರ್ ನಟರು ನಟಿಸಬೇಕಿರುವುದರಿಂದ ಮೂವರ ಡೇಟ್ ಒಟ್ಟಿಗೆ ಸಿಕ್ಕ ನಂತರ ಆ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ. ಹಾಗಾಗಿ ಕಬ್ಜ 2 ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಭರವಸೆ ನೀಡುತ್ತಾರೆ ಚಂದ್ರು.
ಕಬ್ಜ ಸಿನಿಮಾದಲ್ಲಿ ಸುದೀಪ್ ಮಹತ್ವದ ಪಾತ್ರವೊಂದನ್ನು ಮಾಡಿದ್ದರು. ಚಂದ್ರು ಮತ್ತು ಸುದೀಪ್ ಕಾಂಬಿನೇಷನ್ ಸಖತ್ ವರ್ಕ್ ಆಗಿತ್ತು. ಚಂದ್ರು ಕೆಲಸದ ಬಗ್ಗೆ ಆವತ್ತೆ ಸುದೀಪ್ ಮನಸಾರೆ ಹೊಗಳಿದ್ದರು. ಇದೀಗ ಚಂದ್ರು ಮತ್ತು ಸುದೀಪ್ ಅವರು ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನಿರೀಕ್ಷೆ ಇಮ್ಮಡಿಯಾಗಿದೆ.
Web Stories