ನವದೆಹಲಿ: ಕಳೆದ ಬಾರಿ ಪರಿಷತ್ ಚುನಾವಣೆಯಲ್ಲಿ ಸೋಲನ್ನಪ್ಪಿದ್ದ ಕಾಂಗ್ರೆಸ್ ನಾಯಕ ಯೂಸುಫ್ ಷರಿಫ್ ಅಲಿಯಾಸ್ ಕೆಜಿಎಫ್ ಬಾಬು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಾಯಕರ ಗಮನ ಸೆಳೆಯುವ ಮೂಲಕ ಟಿಕೆಟ್ ಪಡೆಯಲು ಹೊಸ ತಂತ್ರ ಮಾಡಿದ್ದಾರೆ.
2023ರ ವಿಧಾನಸಭೆ ಚುನಾವಣೆಗೆ ಚಿಕ್ಕಪೇಟೆಯಿಂದ ಸ್ಪರ್ಧಿಸಲು ಕೆಜಿಎಫ್ ಬಾಬು ತಯಾರಿ ಆರಂಭಿಸಿದ್ದಾರೆ. ಇದಕ್ಕಾಗಿ 350 ಕೋಟಿ ಹಣವನ್ನು ಕ್ಷೇತ್ರಕ್ಕೆ ಖರ್ಚು ಮಾಡಲು ನಿರ್ಧರಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಬೈಕ್, ಉಚಿತ ಮನೆ, ಕ್ಷೇತ್ರದಲ್ಲಿನ ಪ್ರತಿ ಕುಟುಂಬಕ್ಕೆ 5,000 ರೂಪಾಯಿ ಚೆಕ್ ವಿತರಣೆ ಮಾಡಲು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ದಲಿತನಿಗೆ ಚಪ್ಪಲಿಯಿಂದ ಥಳಿಸಿದ ಗ್ರಾಮದ ಮುಖ್ಯಸ್ಥ – ಬಂಧನ
ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿರುವ ಅವರಿಗೆ ಚಿಕ್ಕಪೇಟೆಯಿಂದ ಟಿಕೆಟ್ ಸಿಗುವುದು ಇನ್ನು ಖಚಿತವಾಗಿಲ್ಲ. ರಾಜ್ಯ ನಾಯಕರ ಮುಂದೆ ಟಿಕೆಟ್ಗಾಗಿ ಮನವಿ ಮಾಡಿದ್ದು ಕೆಲವು ನಾಯಕರಿಂದ ಭರವಸೆ ಸಿಕ್ಕಿದೆ ಎನ್ನಲಾಗಿದೆ. ಈ ಭರವಸೆಯನ್ನೇ ನಂಬಿ ಕೂರದ ಕೆಜಿಎಫ್ ಬಾಬು ಈಗ ಹೈಕಮಾಂಡ್ ಗಮನ ಸೆಳೆಯಲು ಪ್ಲ್ಯಾನ್ ಮಾಡಿದ್ದಾರೆ.
ಕೆಜಿಎಫ್ ಬಾಬು ಈಗ ತಾವು ಚಿಕ್ಕಪೇಟೆ ಕ್ಷೇತ್ರಕ್ಕೆ ಮಾಡುತ್ತಿರುವ ಕೆಲಸಗಳನ್ನು ವಿವರಿಸುವ ಫ್ಲೆಕ್ಸ್ಗಳನ್ನು ದೆಹಲಿಯ ಎಐಸಿಸಿ ಕಚೇರಿಯ ಮುಂಭಾಗದಲ್ಲಿ ಅಳವಡಿಸಿದ್ದಾರೆ. ಕಾಂಗ್ರೆಸ್ ಕಚೇರಿಯ ಕಾಂಪೌಂಡ್ಗೆ ಎರಡು ಹಾಗೂ ಕಚೇರಿಯ ಮುಖ್ಯದ್ವಾರಕ್ಕೆ ಅಭಿಮುಖವಾಗಿ ಮತ್ತೊಂದು ದೊಡ್ಡ ಫ್ಲೆಕ್ಸ್ ಹಾಕುವ ಮೂಲಕ ದೆಹಲಿ ನಾಯಕರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಮಧ್ಯಾಹ್ನ ಮಾಂಸಾಹಾರ ತಿಂದು ಸಂಜೆ ದೇವಸ್ಥಾನಕ್ಕೆ ಹೋಗಬಾರದಾ : ಸಿದ್ದರಾಮಯ್ಯ ಪ್ರಶ್ನೆ
ದೆಹಲಿಯಲ್ಲಿರುವ ಎಐಸಿಸಿ ಕಚೇರಿಗೆ ನಿತ್ಯ ಹಲವು ಪ್ರಮುಖ ನಾಯಕರು ಆಗಮಿಸುತ್ತಾರೆ. ಈ ಫ್ಲೆಕ್ಸ್ಗಳನ್ನು ಇಲ್ಲಿ ಅಳವಡಿಸುವುದರಿಂದ ತಮ್ಮ ಸೇವೆ ದೆಹಲಿ ನಾಯಕರವರೆಗೂ ತಲುಪಬಹುದು ಎಂದು ಅವರು ಲೆಕ್ಕಚಾರ ಹಾಕಿಕೊಂಡಿದ್ದಾರೆ.