ದರ್ಶನ್ ನಟನೆಯ ಕಾಟೇರ ಅದ್ಭುತವಾಗಿ ಯಶಸ್ಸು ಕಂಡ ಬೆನ್ನಲ್ಲೇ ನಿರ್ದೇಶಕ ತರುಣ್ ಸುಧೀರ್ ಆದಿಸ್ಥಳ ಸ್ವಾಮಿ ಕೊರಗಜ್ಜ ಸನ್ನಿಧಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ. ಚಿತ್ರ ಯಶಸ್ಸುಗಳಿಸಿದ್ದಕ್ಕಾಗಿ ಅವರು ಪೂಜೆ ಸಲ್ಲಿಸಿದ್ದಾರೆ.
ಕೇವಲ ಮಂಗಳೂರಿನಲ್ಲಿರುವ ಕೊರಗಜ್ಜನ ದೇವಸ್ಥಾನಕ್ಕೆ ಮಾತ್ರವಲ್ಲ, ಧರ್ಮಸ್ಥಳದ ಮಂಜುನಾಥ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿದ್ದಾರೆ. ಮುಂದಿನ ತಮ್ಮ ಕಾರ್ಯಗಳಿಗೆ ಯಶಸ್ಸು ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.
ಕಾಟೇರ ಸಿನಿಮಾ ವರ್ಷದ ಹಿಟ್ ಚಿತ್ರಗಳ ಸಾಲಿನಲ್ಲಿದೆ. ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡುವ ಕೆಲಸವನ್ನೂ ಮಾಡಲಾಗುತ್ತಿದೆ. ಈ ಮಧ್ಯೆ ತರುಣ್ ಮತ್ತ್ಯಾವ ಚಿತ್ರ ಮಾಡಲಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ. ಅವರು ಮಾಡಿದ್ದೇ ಮೂರು ಸಿನಿಮಾಗಳು. ಮೂರು ಹಿಟ್ ಆಗಿವೆ. ಹಾಗಾಗಿ ಇವರ ಚಿತ್ರಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.