ಬೆಂಗಳೂರು: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮಗಳ ಪಾತ್ರ ಏನು ಇಲ್ಲ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದ್ದಾರೆ.
ಸೋಮಶೇಖರ್ ಪುತ್ರ ನಿಶಾಂತ್ಗೆ ನಕಲಿ ವೀಡಿಯೋ ಸೃಷ್ಟಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಪ್ರಕರಣ ಕುರಿತಂತೆ ಯಶವಂತರಾಯಗೌಡ ಪಾಟೀಲ್ ಅವರು ಇಂದು ಬೆಳಗ್ಗೆ ಶಾಸಕರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ರಾಜಕಾರಣ ಮಾಡುವವರು ನೇರವಾಗಿ ನನ್ನ ವಿರುದ್ಧ ರಾಜಕಾರಣ ಮಾಡಲಿ. ಮನೆಯವರು, ಮಕ್ಕಳನ್ನು ಇದರಲ್ಲಿ ಯಾಕೆ ತರುತ್ತಾರೆ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಸೋಂಕಿಗೆ ತುತ್ತಾದವರಲ್ಲಿ ಯುವಕರದ್ದೇ ಸಿಂಹ ಪಾಲು!
ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಏನು?
ನನ್ನ ಸುಪುತ್ರಿ ಮೇಲೆ ಆಪಾದನೆಯೊಂದು ಬಂದಿದೆ. ನನ್ನ ಮಗಳು ಇಂಗ್ಲೆಂಡ್ಗೆ ಎಂಎಸ್ ಕಲಿಯಲು ಹೋಗಿದ್ದಾರೆ. ಡಿಸೆಂಬರ್ 25ಕ್ಕೆ ಆಕೆ ತನ್ನ ಸ್ನೇಹಿತ ರಾಕೇಶ್ ಅಣ್ಣಪ್ಪಗೆ ಒಂದು ಬಿಸಿನೆಸ್ ಕಾಂಟ್ಯಾಕ್ಟ್ಗೆ ಒಂದು ಒಟಿಪಿ ಕೊಟ್ಟಿದಾಳೆ. ಈ ಪ್ರಕರಣ ಕುರಿತಂತೆ ಸಿಸಿಬಿ ಅವರು ರಾಕೇಶ್ ವಿಚಾರಣೆ ನಡೆಸಿದಾಗ, ರಾಕೇಶ್ ಬೆಂಗಳೂರಿನಲ್ಲಿರುವ ರಾಹುಲ್ ಭಟ್ಗೆ ಸಿಮ್ ಒಟಿಪಿ ಕೊಟ್ಟಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: S.T. ಸೋಮಶೇಖರ್ ಪುತ್ರನಿಗೆ ನಕಲಿ ಅಶ್ಲೀಲ ವೀಡಿಯೋ ಬ್ಲ್ಯಾಕ್ಮೇಲ್
ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ನಾನೂ ಉತ್ತಮ ಸ್ನೇಹಿತರು. ನಾವಿಬ್ಬರೂ ಸಿಎಂರನ್ನು ಭೇಟಿ ಮಾಡಿ ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದೇವೆ. ಏನೋ ತಪ್ಪಾಗಿ ಹೀಗೆಲ್ಲಾ ಆಗಿದೆ. ಪ್ರಕರಣದ ಹಿಂದೆ ಇರುವವರನ್ನು ಬಯಲಿಗೆಳೆಯಲಿ. ನನ್ನ ಮಗಳ ಹೆಸರು ಯಾಕೆ ತಂದಿದ್ದಾರೆ ಅಂತ ಗೊತ್ತಿಲ್ಲ. ನನ್ನ ಮಗಳು ಸಹ ಇದೇ 7 ರಂದು ಬಂದಿದ್ದಾಳೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು.
ರಾಜಕಾರಣ ಮಾಡುವವರು ನೇರವಾಗಿ ನನ್ನ ವಿರುದ್ಧ ರಾಜಕಾರಣ ಮಾಡಲಿ. ಮನೆಯವರು, ಮಕ್ಕಳನ್ನು ಇದರಲ್ಲಿ ಯಾಕೆ ತರುತ್ತಾರೆ? ನಿಶಾಂತ್ ಮತ್ತು ನನ್ನ ಮಗಳು ಕ್ಲಾಸ್ ಮೇಟ್ಸ್ ಅಲ್ಲ. ಇಬ್ಬರಿಗೂ ಕನೆಕ್ಷನ್ ಇಲ್ಲ. ರಾಕೇಶ್ ಅಪ್ಪಣ್ಣನವರ್ ನನ್ನ ಮಗಳಿಗೆ ಪರಿಚಯ. ಆತನಿಗೆ ಸಿಮ್ ಕೊಟ್ಟಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಸಿಮ್ ದುರ್ಬಳಕೆ ಆಗುತ್ತದೆ ಅಂತ ಗೊತ್ತಿರಲಿಲ್ಲ. ಇದನ್ನೂ ಓದಿ: ಸಚಿವರ ಪುತ್ರನಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪಿ ಅಂದರ್
ಸಿಮ್ ನನ್ನ ಮಗಳ ಬಳಿಯೇ ಇದೆ. ಒಟಿಪಿ ಮಾತ್ರ ರಾಕೇಶ್ಗೆ ನನ್ನ ಮಗಳು ಕೊಟ್ಟಿದಾಳೆ. ಒಟಿಪಿಯನ್ನು ವಾಟ್ಸಪ್ಗೆ ಬಳಸಿದ್ದಾರೋ ಇಲ್ಲವೋ ಅಂತ ಗೊತ್ತಿಲ್ಲ. ನನ್ನ ಮಗಳು ಸಣ್ಣವಳು, ಒಟಿಪಿ ಶೇರ್ ಬಗ್ಗೆ ಏನ್ ಗೊತ್ತಾಗುತ್ತದೆ. ನನ್ನ ಮಗಳ ಜೊತೆ ಈಗಾಗಲೇ ಪೊಲೀಸರು ಫೋನಿನಲ್ಲಿ ಮಾತನಾಡಿದ್ದಾರೆ. ಈಗ ಆಕೆಯೇ ಯುಕೆಯಿಂದ ಬಂದಿದ್ದಾಳೆ. ಪೊಲೀಸರು ಆಕೆಯನ್ನೂ ಸಹ ವಿಚಾರಣೆ ನಡೆಸಲಿ. ಇದರಲ್ಲಿ ನನ್ನ ಮಗಳ ಪಾತ್ರ ಏನು ಇಲ್ಲ. ಸದ್ಯ ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದೆ. ನನಗೆ ಯಾರ ಮೇಲೂ ಅನುಮಾನ ಇಲ್ಲ. ಆದರೆ ತನಿಖೆಯ ನಂತರ ಸತ್ಯ ಹೊರಬೀಳಲಿದೆ.