ಬೆಂಗಳೂರು: ಇಡೀ ದೇಶದಲ್ಲಿ ಕರ್ನಾಟಕ ಕರಪ್ಟ್ ರಾಜ್ಯವಾಗಿ ಹೊರ ಹೊಮ್ಮುತ್ತಿದೆ. ಸರ್ಕಾರ ಸಂಪೂರ್ಣವಾಗಿ ಶಾಮೀಲಾಗಿ ಉಪ್ಪಿನ ಅಂಗಡಿ ತೆರೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಇಡೀ ಭಾರತದ ಇತಿಹಾಸದಲ್ಲಿ ಕರ್ನಾಟಕ ಆಡಳಿತಕ್ಕೆ ಇಂದು ಕಪ್ಪು ಚುಕ್ಕಿ ಬಂದಿದೆ. ಆ ಕಪ್ಪು ಚುಕ್ಕಿ ಸಣ್ಣದಾಗಿ ಕಾಣುತ್ತಿರಬಹುದು. ಆದರೆ ಕರ್ನಾಟಕದ ಆಡಳಿತಕ್ಕೆ ಮಸಿಯನ್ನೇ ಬಳಿಯಲಾಗಿದೆ ಎಂದು ಹೇಳಿಕೆ ನೀಡಿದರು.
ಸರ್ಕಾರ ಸಂಪೂರ್ಣವಾಗಿ ಶಾಮೀಲಾಗಿ ಉಪ್ಪಿನ ಅಂಗಡಿ ತೆರೆದಿದೆ. ಆಗ ಉಪ್ಪು ಕೊಳ್ಳಲು ಜನ ಹೋಗಿದ್ದಾರೆ. ಉಪ್ಪು ಕೊಂಡವರನ್ನು ಮಾತ್ರ ಈಗ ಬಂಧಿಸುತ್ತಿದ್ದಾರೆ. ಅಂಗಡಿ ತೆರೆದವರು ಯಾರು ಎಂಬುದು ಬಹಿರಂಗವಾಗಬೇಕಿದೆ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಪಾಪುವಿನಂತೆ ರಾಹುಲ್ ಗಾಂಧಿಯನ್ನು ಮುದ್ದು ಮಾಡಿದ ಅಜ್ಜಿ
ನ್ಯಾಯಾಲಯ ಸಾಮಾನ್ಯ ಜನರ ರಕ್ಷಣೆ ಮಾಡುತ್ತದೆ. ಇದಕ್ಕಾಗಿ ಪಕ್ಷ ಜನತೆಯ ಪರವಾಗಿ ನ್ಯಾಯಾಲಯಕ್ಕೆ ಸಾಷ್ಟಾಂಗ ಪ್ರಣಾಮ ಅರ್ಪಿಸುತ್ತೇನೆ. ಆದರೆ ಇದೀಗ ನ್ಯಾಯಾಂಗಕ್ಕೂ ರಕ್ಷಣೆ ಇಲ್ಲದಂತಾಗಿದೆ. ಜಡ್ಜ್ ಸ್ಥಾನಕ್ಕೆ ಕಂಟಕ ಬರುವ ರೀತಿ ಅವರ ಸಂಕಟ, ನೋವನ್ನು ಹೇಳಿಕೊಂಡಿದ್ದಾರೆ. ನಿನ್ನೆ ನ್ಯಾಯಾಲಯದ ಆದೇಶದ ಮೇರೆಗೆ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಒಬ್ಬ ಅಧಿಕಾರಿಯನ್ನು ಅರ್ಧ ಗಂಟೆಯಲ್ಲಿ ಡಾಕ್ಟರ್ ಹತ್ರ ಕರೆದುಕೊಂಡು ಹೋಗಿರುವುದಕ್ಕೆ ನಿಮಗೆ ನಾಚಿಕೆ ಆಗಬೇಕು. ಹಿಂದೆ ಅಲೋಕ್ ಕುಮಾರ್ ಪ್ರಕರಣ ಆದಾಗ ದಿನವಿಡೀ ಕಾಯಿಸಿದ್ದರು. ನಮ್ಮನ್ನು ಬೇರೆ ಬೇರೆ ವಿಚಾರಣೆಯಲ್ಲಿ ಗಂಟೆಗಟ್ಟಲೆ ಕಾಯಿಸಿದ್ದಾರೆ. ರಾಹುಲ್ ಗಾಂಧಿಯವರನ್ನು 52 ಗಂಟೆ ತನಿಖೆ ನಡೆಸಿದ್ದಾರೆ. ಆದರೆ ಒಬ್ಬ ಅಧಿಕಾರಿಯನ್ನು ಅರ್ಧ ಗಂಟೆಯಲ್ಲಿ ಡಾಕ್ಟರ್ ಹತ್ತಿರ ಕರೆದೊಯ್ದು ವಿಚಾರಣೆಗೆ ವಶಕ್ಕೆ ಪಡೆದಿದ್ದೇವೆ ಎನ್ನುತ್ತಾರೆ ಎಂದರೆ ಏನಿದು ಪೊಲೀಸ್ ವ್ಯವಸ್ಥೆ ಎಂದು ಪ್ರಶ್ನಿಸಿದರು.
ಗೃಹ ಸಚಿವ ಆರಗ ಜ್ಞಾನೆಂದ್ರ ಅವರು ಸದನದಲ್ಲಿ 5-6 ಬಾರಿ ಮಿಸ್ ಲೀಡ್ ಮಾಡಿದ್ದಾರೆ. ಹಗರಣ ನಡೆದೇ ಇಲ್ಲ ಎನ್ನುತ್ತಿದ್ದು, ಈಗ ಅವರ ಮೇಲೂ ಕೇಸ್ ಹಾಕಬೇಕು. ಸಿಎಂ ಜವಾಬ್ದಾರಿ ತಗೆದುಕೊಂಡು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಇದ್ದರೆ, ಪಿಎಸ್ಐ ಕೇಸ್ ಅನ್ನೇ ಮುಚ್ಚಿ ಹಾಕ್ತಿದ್ರು: ಸಿಎಂ ಬೊಮ್ಮಾಯಿ
ಇದು ದೇಶದ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಕರ್ನಾಟಕ ಇಡೀ ದೇಶದಲ್ಲಿ ಮೋಸ್ಟ್ ಕರಪ್ಟ್ ಸ್ಟೇಟ್. ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ, ಜನಾಭಿಪ್ರಾಯ ಮೂಡಿಸುತ್ತೇವೆ. ರಾಜ್ಯಪಾಲರು ಕೂಡಲೆ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.