ಬೆಂಗಳೂರು: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆ (Harsha Murder) ತನಿಖೆ ಚುರುಕಾಗಿ ನಡೆಯುತ್ತಿದೆ. ಇದರ ಬೆನ್ನಲ್ಲೆ ಪೊಲೀಸರ ಲೋಪದ ಬಗ್ಗೆಯೂ ತನಿಖೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಆದೇಶ ಮಾಡಿದ್ದಾರೆ. ಶಿವಮೊಗ್ಗದ ಕೋಟೆ (Kote Police Station) ಮತ್ತು ದೊಡ್ಡಪೇಟೆ ಪೊಲೀಸ್ ಠಾಣೆ (Doddapete Police Station) ಮೇಲೆ ಕ್ರೈಂ ಆಡಿಟ್ಗೆ (Crime Audit) ಸಚಿವರು ಆದೇಶ ಮಾಡಿದ್ದು, ಡಿಜಿ-ಐಜಿಗೆ ಪತ್ರ ಬರೆದು ತನಿಖೆಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ, ಶಿವಮೊಗ್ಗ (Shivamogga) ಶಾಂತಿಯುತವಾಗಿತ್ತು. ಇಲ್ಲಿ ಸಮಾಜಘಾತುಕ ಶಕ್ತಿಗಳು ಹೇಗೆ ಕೆಲಸ ಮಾಡಿವೆ, ಅದಕ್ಕೆ ಪೊಲೀಸರ ಸಹಕಾರ ಇದೆಯೇ ಎಂಬ ಕುರಿತು ತನಿಖೆ ಮಾಡಿಸೋದಾಗಿ ತಿಳಿಸಿದರು. ಕೋಟೆ ಮತ್ತು ದೊಡ್ಡ ಪೇಟೆ ಪೊಲೀಸ್ ಠಾಣೆ ವಿರುದ್ದ ಕ್ರೈಂ ಆಡಿಟ್ಗೆ ಆದೇಶ ಮಾಡಲಾಗಿದೆ. ಡಿಜಿ-ಐಜಿಗೆ ಪತ್ರ ಬರೆದು ತನಿಖೆಗೆ ಸೂಚನೆ ನೀಡಿದ್ದೇನೆ. ಕಳೆದ 5 ವರ್ಷಗಳಲ್ಲಿ ಇಲ್ಲಿ ಇದ್ದ ಅಧಿಕಾರಿಗಳು ಯಾರು? ಆರೋಪಿಗಳ ಮೇಲೆ ಕೇಸ್ ಇದ್ದರು ಏನ್ ಕ್ರಮ ಆಗಿದೆ? ಆರೋಪಿಗಳ ವಿರುದ್ಧ ಹೇಗೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ ಅನ್ನೋ ಕುರಿತು ಸಂಪೂರ್ಣ ತನಿಖೆ ಮಾಡಲಾಗುತ್ತೆ. ಪೊಲೀಸರು ತಪ್ಪು ಮಾಡಿದ್ರೆ ಅವ್ರ ಮೇಲೆ ಕ್ರಮ ತಗೋತೀವಿ ಅಂತ ಸಚಿವರು ತಿಳಿಸಿದರು.
ಬಂಧನ ಆಗಿರೋ ಅರೋಪಿಗಳ ಮೇಲೆ ಅನೇಕ ಪ್ರಕರಣಗಳು ದಾಖಲಾಗಿವೆ. ಹೀಗಿದ್ದರೂ ಕಳೆದ ವರ್ಷಗಳಿಂದ ಆರೋಪಿಗಳ ಮೇಲೆ ಏನು ಕ್ರಮ ಆಗಿದೆ ಅನ್ನೋ ಮಾಹಿತಿ ಬೇಕು. ಐದು ವರ್ಷ ಇಲ್ಲಿ ಇದ್ದ ಅಧಿಕಾರಿಗಳು ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ ಅನ್ನೋ ಮಾಹಿತಿ ಕೂಡಾ ಸಂಗ್ರಹ ಮಾಡಲಾಗುತ್ತದೆ. ಆರೋಪಿಗಳ ಚಲನವಲನಗಳನ್ನು ಕಂಟ್ರೋಲ್ ಮಾಡಲು ತೆಗೆದುಕೊಂಡ ಕ್ರಮಗಳು ತನಿಖೆ ಆಗಲಿವೆ. ಒಂದು ವೇಳೆ ಪೊಲೀಸರು ಲೋಪ ಎಸಗಿರೋದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳೋದಾಗಿ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.