ಬೆಂಗಳೂರು: ಹಲವರ ಅಸಮಾಧಾನ, ಬಂಡಾಯದ ನಡುವೆ ಸಂಪುಟ ಪುನಾರಚನೆಯಾಗಿದ್ದು, ರಾಜಭವನದ ಗಾಜಿನಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾಂಗ್ರೆಸ್ನ 8 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರ ಬೆನ್ನಲ್ಲೇ ಯಾರಿಗೆ ಯಾವ ಖಾತೆ ಹಂಚಿಕೆ ಎಂಬಂತೆ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ಆರಂಭವಾಗಿದೆ.
ಪ್ರಮುಖವಾಗಿ ಕಾಂಗ್ರೆಸ್ ಪಕ್ಷ ಮುಖಂಡರಾಗಿರುವ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರಿಗೆ ಡಿಸಿಎಂ ಪರಮೇಶ್ವರ್ ಅವರ ಬಳಿ ಇರುವ ಗೃಹ ಖಾತೆ ಲಭಿಸುವ ಸಾಧ್ಯತೆ ಇದ್ದು, ಶಾಸಕ ಎಂಟಿಬಿ ನಾಗರಾಜ್ ಅವರಿಗೆ ನಗರಭಿವೃದ್ಧಿ ಖಾತೆ ನೀಡುವ ಸಾಧ್ಯತೆ ಇದೆ.
ಉಳಿದಂತೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಶಂಕರ್ ಅವರ ಬಳಿ ಇದ್ದ ಅರಣ್ಯ ಖಾತೆ, ಸಂಡೂರು ಶಾಸಕ ತುಕಾರಂ ಅವರಿಗೆ ಯುವಜನ ಸೇವೆ ಖಾತೆ, ಪಿಟಿ ಪರಮೇಶ್ವರ್ ನಾಯ್ಕ್ ಅವರಿಗೆ ಮೂಲ ಸೌಕರ್ಯ ಮತ್ತು ಕೌಶಲ್ಯಾಭಿವೃದ್ಧಿ ಖಾತೆ, ಆರ್.ಬಿ ತಿಮ್ಮಾಪುರ ಪಾಲಿಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡುವ ಸಾಧ್ಯತೆ ಇದೆ.
ರಮೇಶ್ ಜಾರಕಿಹೊಳಿ ಅವರ ಬಳಿ ಇದ್ದ ಪೌರಾಡಳಿತ ಖಾತೆ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಿಎಸ್ ಪುಟ್ಟರಾಜು ಹಾಗೂ ಜಮೀರ್ ಅಹ್ಮದ್ ಬಳಿ ಇದ್ದ ಅಲ್ಪ ಸಂಖ್ಯಾತ ವ್ಯವಹಾರಗಳ ಖಾತೆಯನ್ನು ರಹೀಂ ಖಾನ್ ಅವರಿಗೆ ಲಭಿಸಲಿದೆ ಎಂಬ ಮಾಹಿತಿ ಇದೆ. ಈ ಸಂಪುಟ ವಿಸ್ತರಣೆಯಿಂದ ಸಿಎಂ ಕುಮಾರಸ್ವಾಮಿ ಸಂಪುಟದ ಗಾತ್ರ 32ಕ್ಕೆ ಹೆಚ್ಚಳವಾಗಿದ್ದು, ಇನ್ನು ಜೆಡಿಎಸ್ ಪಕ್ಷ 2 ಸಚಿವ ಸ್ಥಾನಗಳು ಖಾಳಿ ಉಳಿದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv