ಚಿಕ್ಕೋಡಿ: ಇನ್ನೇನೂ ಕೆಲವೇ ದಿನಗಳಲ್ಲಿ ರಾಜ್ಯ ಸಂಪುಟ ವಿಸ್ತರಣೆ ಆಗುತ್ತದೆ ಎನ್ನುವ ಸುದ್ದಿಗಳ ಮಧ್ಯೆಯೇ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳು ಲಾಬಿ ನಡೆಸಲು ಮುಂದಾಗಿದ್ದಾರೆ.
ಅದರಲ್ಲೂ ಕಾಂಗ್ರೆಸ್ ತೊರೆದು ಸರ್ಕಾರ ರಚಿಸಲು ಪ್ರಮುಖ ಪಾತ್ರ ವಹಿಸಿ ಬಿಜೆಪಿ ಸೇರಿರುವ ಸಚಿವ ಸ್ಥಾನ ವಂಚಿತ ವಲಸಿಗ ಶಾಸಕರು ಈಗಿನಿಂದಲೇ ಫೀಲ್ಡಿಗಿಳಿದು ನಮಗೂ ಸಚಿವ ಸ್ಥಾನ ನೀಡಿ ಎಂದು ಹಠಕ್ಕೆ ಬಿದ್ದಿದ್ದಾರೆ. ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗುತ್ತೆ ಎನ್ನುವ ಊಹಾಪೋಹಗಳ ನಡುವೆಯೇ ಬೆಳಗಾವಿ ಜಿಲ್ಲೆಯ ವಲಸಿಗ ಶಾಸಕರು ಫುಲ್ ಆ್ಯಕ್ಟಿವ್ ಆಗಿದ್ದು ಸಚಿವ ಸ್ಥಾನಕ್ಕೆ ತೆರೆ ಮರೆಯ ಕಸರತ್ತು ಆರಂಭಿಸಿದ್ದಾರೆ. ಇದನ್ನೂ ಓದಿ: 15 ದುರಂಹಕಾರಿ ಸಚಿವರನ್ನ ವಜಾ ಮಾಡಿ: ರೇಣುಕಾಚಾರ್ಯ ಗುಡುಗು
ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನಮಗೆ ಸಚಿವ ಸ್ಥಾನ ಸಿಗಬೇಕು ಎನ್ನುವ ಇಂಗಿತವನ್ನು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮಗೆ ಈ ಬಾರಿಯ ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನ ಸಿಕ್ಕೆ ಸಿಗುತ್ತದೆ ಎನ್ನುವ ಭರವಸೆಯನ್ನು ಶ್ರೀಮಂತ ಪಾಟೀಲ್ ಮಾಧ್ಯಮಗಳ ಮೂಲಕ ಹೈ ಕಮಾಂಡ್ಗೆ ತಮ್ಮ ವರ್ಚಸ್ಸಿನ ಬಗ್ಗೆ ಉತ್ತಮ ಅಭಿಪ್ರಾಯ ರವಾನಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಒಂದು ಕಡೆ ಮಾಧ್ಯಮಗಳ ಮೂಲಕ ಸಚಿವ ಸ್ಥಾನದ ಲಾಬಿ ಮಾಡುತ್ತಿರುವ ಶಾಸಕರ ನಡುವೆ ಸಿಡಿ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಆರ್ಎಸ್ಎಸ್ ಮೂಲಕ ಲಾಬಿ ನಡೆಸಿದ್ದಾರೆ. ಸಚಿವ ಸ್ಥಾನಕ್ಕೆ ಆರ್ಎಸ್ಎಸ್ ಪ್ರಮುಖರ ಮನೆ ಕದ ತಟ್ಟುತ್ತಿದ್ದು, ತಿಂಗಳಿಗೆ ಎರಡೇರಡು ಬಾರಿ ಅಥಣಿ ಪಟ್ಟಣಕ್ಕೆ ತೆರಳಿ ಆರ್ಎಸ್ಎಸ್ ಉತ್ತರ ವಲಯ ಪ್ರಾಂತ ಪ್ರಮುಖ ಅರವಿಂದ ದೇಶಪಾಂಡೆ ಅವರ ಮನೆಗೆ ಭೇಟಿ ನೀಡಿ ಪ್ರಮುಖ ಸ್ಥಾನ ದೊರಕಿಸುವಂತೆ ದುಂಬಾಲು ಬಿದ್ದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ನಿಂದ ಹೊರಬಂದಿದ್ದೇನೆ ಮತ್ತೆ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ ಎಂದು ಶಾಪ ಹಾಕಿದ: ಇಬ್ರಾಹಿಂ
ಜಾರಕಿಹೊಳಿ ಅಲ್ಲದೇ ತಮ್ಮ ಸಹಚರ ಮಹೇಶ್ ಕುಮಟಳ್ಳಿ ಅವರಿಗೂ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ವಲಸಿಗ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ್ ಈ ಮೂವರು ತೆರೆಮರೆಯಲ್ಲಿ ಸಚಿವ ಸ್ಥಾನಕ್ಕೆ ಕಸರತ್ತು ನಡೆಸಿದ್ದು, ಮುಂದಿನ ಸಂಪುಟ ವಿಸ್ತರಣೆಯಲ್ಲಿ ಈ ಮೂವರಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಕಾದು ನೋಡಬೇಕಿದೆ.