ಚಿಕ್ಕಮಗಳೂರು: ಅರೆ ಮಲೆನಾಡು ಪ್ರದೇಶದ ತರೀಕೆರೆ (Tarikere) ವಿಧಾನಸಭಾ ಕ್ಷೇತ್ರದ ಚುನಾವಣೆ (Election) ವಿಷಯದಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತದೆ. ಲಿಂಗಾಯುತ ಸಮುದಾಯದ ಜನರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಕುರುಬ, ಎಸ್ಸಿ ಹಾಗೂ ಎಸ್ಟಿ ಮತಗಳೇ ನಿರ್ಣಾಯಕವಾಗಿದೆ. ಒಂದು ಕಾಲದಲ್ಲಿ ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಈಗ ಕಳೆದ ಎರಡು ದಶಕಗಳಿಂದ ಬಿಜೆಪಿಯ ತೆಕ್ಕೆಯಲ್ಲಿದೆ.
1985ರಲ್ಲಿ ಜನತಾ ಪಕ್ಷದಿಂದ ನೀಲಕಂಠಪ್ಪ ಶಾಸಕರಾಗಿ ಪ್ರಥಮ ಭಾರಿ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್ (Congress) ಪಕ್ಷದಿಂದ ಮತ್ತೆ ಶಾಸಕರಾಗಿ 2 ಬಾರಿ ಗೆದ್ದಿದ್ದರು. ಹೆಚ್.ಆರ್ ರಾಜು ಕಾಂಗ್ರೆಸ್ನಿಂದ 2 ಬಾರಿ ಗೆದ್ದಿದ್ದರು. 1994ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಎಸ್.ಎಂ ನಾಗರಾಜ್ ಆಯ್ಕೆಯಾಗಿದ್ದರು. 2004ರಲ್ಲಿ ಕಾಂಗ್ರೆಸ್ಸಿನಿಂದ ಟಿ.ಹೆಚ್ ಶಿವಶಂಕರಪ್ಪ ಶಾಸಕರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಬಿಜೆಪಿ (BJP) ಅಭ್ಯರ್ಥಿ ಡಿ.ಎಸ್ ಸುರೇಶ್ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಯಡಿಯೂರಪ್ಪನವರ ಕೆಜೆಪಿ ಉಗಮದಿಂದ ಅಚ್ಚರಿ ಎಂಬಂತೆ ಜಿ.ಎಚ್ ಶ್ರೀನಿವಾಸ್ ಮೊದಲ ಬಾರಿಗೆ ಗೆದ್ದಿದ್ದರು. 2018ರಲ್ಲಿ ಮತ್ತೆ ಡಿ.ಎಸ್ ಸುರೇಶ್ ಗೆಲವು ಸಾಧಿಸಿದ್ದರು. ಆದರೆ ಈ ಬಾರಿ ತಾಲೂಕಿನ ಸಂಪೂರ್ಣ ರಾಜಕೀಯ ಚಿತ್ರಣವೇ ಬದಲಾಗಿದೆ. ಕಳೆದ ಮೂರು ಚುನಾವಣೆಯಲ್ಲಿ ಮೂರು ಪಕ್ಷದಿಂದಲೂ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿದ್ದ ಗೋಪಿಕೃಷ್ಣ ಈ ಬಾರಿ ಪಕ್ಷೇತರವಾಗಿ ಕಣಕ್ಕಿಳಿದಿದ್ದಾರೆ. ಇದನ್ನೂ ಓದಿ: ನಾನು ತಟಸ್ಥ, ಆದ್ರೆ ಪಕ್ಷ ವಿರೋಧಿ ಕೆಲಸ ಮಾಡಲ್ಲ : ಶಾಸಕ ಸುಕುಮಾರ ಶೆಟ್ಟಿ
ತರೀಕೆರೆಯಲ್ಲಿ ನಿರ್ಣಾಯಕ ಪಾತ್ರವಹಿಸಿರುವ ಕುರುಬರು 30 ಸಾವಿರದಷ್ಟು ಜನಸಂಖ್ಯೆ ಇದೆ. ಆದರೆ ಕುರುಬ ಸಮುದಾಯ ಸಂಘದ ಹಣವನ್ನ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪದಿಂದ ಶ್ರೀನಿವಾಸ್ ಬಿಟ್ಟು ಬೇರೆ ಯಾರಿಗಾದರೂ ಟಿಕೆಟ್ ಕೊಡಿ ಎಂದು ಕುರುಬ ಸಮುದಾಯದ ಪ್ರಮುಖರು ಲಾಬಿ ಮಾಡಿದ್ದರು. ಕುರುಬ ಸಮುದಾಯ ಹಾಗೂ ನೊಣಬ ಲಿಂಗಾಯುತ ಸಮುದಾಯ ಗೋಪಿಕೃಷ್ಣ ಪರ ಬ್ಯಾಟಿಂಗ್ ಮಾಡಿದ್ದರು. ಗೋಪಿಕೃಷ್ಣ ಅವರನ್ನು ಬೇಕಾದಂತೆ ಬಳಸಿಕೊಂಡ ಕಾಂಗ್ರೆಸ್ ಪ್ರಮುಖ ಸಮುದಾಯಗಳ ಪ್ರಮುಖರ ವಿರೋಧದ ನಡುವೆಯೂ ಶ್ರೀನಿವಾಸ್ ಅವರಿಗೆ ಟಿಕೆಟ್ ಕೊಟ್ಟಿದೆ. ಕಳೆದ ಬಾರಿ ನೊಣಬ ಸಮುದಾಯದ ಮಾಜಿ ಶಾಸಕ ಎಸ್.ಎಂ ನಾಗರಾಜ್ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದರು. ಆಗ ಟಿಕೆಟ್ ಸಿಗದೇ ಮಾಜಿ ಶಾಸಕ ಹಾಗೂ ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಜಿ.ಎಚ್ ಶ್ರೀನಿವಾಸ್ ಪಕ್ಷೇತರವಾಗಿ ನಿಂತು ಸೋತಿದ್ದರು. ಅಲ್ಲದೆ ಕಾಂಗ್ರೆಸ್ ಪಕ್ಷವನ್ನೂ ಸೋಲಿಸಿದ್ದರು. ಇದು ನೊಣಬ ಸಮುದಾಯದ ಮುಖಂಡರ ಕಣ್ಣನ್ನ ಕೆಂಪಾಗಿಸಿತ್ತು.
ಈ ಕಾರಣಕ್ಕೆ ಈ ಬಾರಿ, ಜಿ.ಎಚ್ ಶ್ರೀನಿವಾಸ್ (G.H Srinivas) ವಿರೋಧಿ ಗುಂಪು ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ (Gopikrishna) ಪರ ಇದೆ. ಆದರೆ, ಅವರಿಗೆ ಜಾತಿ ಬೆಂಬಲ ಇಲ್ಲ. ಮಡಿವಾಳರ ಮತಗಳು ತರೀಕೆರೆಯಲ್ಲಿ ಹೆಚ್ಚೆಂದರೆ 3000 ಇದೆ. ಆದರೆ, ಕಳೆದ 15 ವರ್ಷದಿಂದ ಕ್ಷೇತ್ರದಲ್ಲಿ ಕೋಟ್ಯಂತರ ರೂ. ಸೇವೆ ನೀಡಿದ್ದಾರೆ. ಇದರಿಂದಾಗಿ ಅವರ ಪರ ಮತದಾರರ ಒಲವಿದೆ. ಕಾಂಗ್ರೆಸ್ ಪಕ್ಷೇತರ ಅಭ್ಯರ್ಥಿಗಳ ಜಗಳದಲ್ಲಿ ಬಿಜೆಪಿಗೆ ಇದು ಪ್ಲಸ್ ಪಾಯಿಂಟ್ ಆದರೂ ಆಶ್ಚರ್ಯವಿಲ್ಲ. ಆದರೆ, ತರೀಕೆರೆಯಲ್ಲಿ 1952ನೇ ಇಸವಿಯಿಂದ ಈವರೆಗೆ ಯಾರೂ ಸರಣಿಯಾಗಿ 2ನೇ ಸಲ ಗೆದ್ದಿಲ್ಲ. ಎಲ್ಲರೂ ಒಂದು ಸಲ ಬಿಟ್ಟು ಮತ್ತೊಮ್ಮೆ ಗೆದ್ದವರೇ ಆಗಿದ್ದಾರೆ. ಆದರೆ, ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಜನ ಯಾರಿಗೆ ಮಣೆ ಹಾಕುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮೋದಿ ಬೃಹತ್ ರೋಡ್ ಶೋ – ರೇಷ್ಮೆಯ ಮೈಸೂರು ಪೇಟಾದಲ್ಲಿ ಕಂಗೊಳಿಸುತ್ತಿರುವ ಪಿಎಂ
ಯಾವ್ಯಾವ ಜಾತಿಯಲ್ಲಿ ಎಷ್ಟೆಷ್ಟು ಮತ?
ಲಿಂಗಾಯತ : 41,950
ಎಸ್.ಎಸ್ಟಿ : 45,910
ಕುರುಬ : 27,715
ಮುಸ್ಲಿಂ : 15,807
ಉಪ್ಪಾರ : 10,579
ಒಕ್ಕಲಿಗ : 8,150
ಕ್ರಿಶ್ಚಿಯನ್ : 5,150
ಬ್ರಾಹ್ಮಣರು : 1,961
ತಮಿಳ್ ಗೌಂಡರ್ : 6,595
ಇತರೆ : 23,109