ಬೆಂಗಳೂರು: ಕನ್ನಡ ಚಿತ್ರರಂಗ ಯಾವುದೇ ಸಂಕಷ್ಟದಲ್ಲಿದ್ದರೂ ರೆಬಲ್ ಸ್ಟಾರ್ ಅಂಬರೀಶ್ ಚಿತ್ರೋದ್ಯಮಕ್ಕೆ ಹಿರಿಯರಾಗಿ ಬಂದ ಸಮಸ್ಯೆಗಳನ್ನು ನಿವಾರಿಸುತ್ತಿದ್ದರು. ಡಾ. ರಾಜ್ಕುಮಾರ್ ನಿಧನರಾದ ನಂತರ ಕನ್ನಡ ಚಿತ್ರರಂಗಕ್ಕೆ ಅಂಬರೀಶ್ ಸಲಹೆ ಸೂಚನೆ ನೀಡುತ್ತ ಹಿರಿಯಣ್ಣನಾಗಿ, ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದರು.
ಕನ್ನಡ ಚಿತ್ರರಂಗಕ್ಕೆ ಯಾವುದೇ ಸಮಸ್ಯೆ ಎದುರಾದರೂ ಇಡೀ ಚಿತ್ರೋದ್ಯಮ ಅಂಬರೀಶ್ ಬಳಿ ಹೋಗುವುದು ಮಾಮೂಲು ಆಗಿತ್ತು. ಹೀಗಾಗಿ ರೆಬೆಲ್ ಸ್ಟಾರ್ ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ಟ್ರಬಲ್ ಶೂಟರ್ ಎಂದೇ ಹೆಸರುವಾಸಿಯಾಗಿದ್ದರು.
ಡಾ. ರಾಜ್ಕುಮಾರ್ ಅವರನ್ನು ಚಿತ್ರರಂಗ ಕಳೆದುಕೊಂಡ ನಂತರವೂ ಕನ್ನಡ ಚಿತ್ರೋದ್ಯಮ ಹಲವಾರು ಸಮಸ್ಯೆಗಳನ್ನು, ಸಂಕಷ್ಟಗಳನ್ನು, ಸವಾಲುಗಳನ್ನು ಎದುರಿಸಿತ್ತು. ಚಿತ್ರರಂಗಕ್ಕೆ ಹಿರಿಯರಾಗಿದ್ದಾರೆ ಎನ್ನುವ ಕಾರಣಕ್ಕೆ ಅಂಬರೀಶ್ ಅವರ ಮಾತಿಗೆ ಗೌರವ ನೀಡುವುದಕ್ಕಿಂತ ಅವರ ರೆಬೆಲ್ ಸ್ವಭಾವಕ್ಕೆ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರು ಮರುಮಾತನಾಡದೆ ಅವರ ತೀರ್ಮಾನಕ್ಕೆ ಓಕೆ ಎನ್ನುತ್ತಿದ್ದರು. ಈ ಕಾರಣಕ್ಕಾಗಿಯೇ ಅಂಬರೀಶ್ ಇದ್ದಲ್ಲಿ ಜಗಳವಿಲ್ಲ, ವಿವಾದವಿಲ್ಲ ಎಂದು ಚಿತ್ರರಂಗದಲ್ಲಿ ಮಾತು ಕೇಳಿ ಬಂದಿತ್ತು.
ನಟ ಅರ್ಜುನ್ ಸರ್ಜಾ ಮೇಲೆ ನಟಿ ಶೃತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ಅಂಬರೀಶ್ ಮಧ್ಯಸ್ಥಿಕೆಯಲ್ಲಿ ಇತ್ಯರ್ಥವಾಗಿರಲಿಲ್ಲ. ಸಂಧಾನ ಮಾತುಕಥೆಯಿಂದ ಇಬ್ಬರ ವಿವಾದ ಇತ್ಯರ್ಥವಾಗದೇ ಪ್ರಕರಣ ಕೋರ್ಟ್ ಮೆಟ್ಟಿಲು ಏರಿದಾಗ, `ನಾನೇನು ಸುಪ್ರೀಂ ಅಲ್ಲ. ನನಗೂ ವಯಸ್ಸಾಯ್ತು’ ಎಂದು ನಗುಮುಖದಿಂದಲೇ ಉತ್ತರಿಸಿ ಅಸಹಾಯಕತೆಯನ್ನು ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv