ತುಮಕೂರು: ಜಿಲ್ಲೆಯ ಕೊರಟಗೆರೆ ಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಸಮಾರಂಭದಲ್ಲಿ ನೆರೆದಿದ್ದ ಜನರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.
ಸಮಾರಂಭದಲ್ಲಿ ಮಹಿಳೆಯರ ದಿನನಿತ್ಯದ ಕಾರ್ಯಕ್ರಮಗಳಲ್ಲಿ ಶ್ರಮವಹಿಸುವ ಕುರಿತು ಮತನಾಡಿದ ಅವರು, ನಾವು ಮಹಿಳೆಯರು ಇಲ್ಲದೆ ಇದ್ರೆ ಏನೂ ಆಗಲ್ಲ. ಪುರುಷರಿಗೆ ನಾವೂ ಸೆಕ್ಯೂರಿಟಿ ಇದ್ದ ಹಾಗೆ. ಬೆಳಗ್ಗೆ ಬ್ರೆಷ್, ಟೂತ್ ಪೇಸ್ಟ್ ಕೊಡುವುದರಿಂದ ಹಿಡಿದು ನಾವು ಪುರುಷರ ಸೇವೆ ಆರಂಭಿಸಬೇಕು. ಒಂದು ದಿನ ನಮ್ಮನ್ನು ಬಿಟ್ಟು ನೀವು ನಿಮ್ಮ ಕೆಲಸ ಮಾಡಿಕೊಳ್ಳಿ ಅಣ್ಣ ಎಂದು ವೇದಿಕೆ ಮೇಲಿದ್ದ ಜಿ.ಪರಮೇಶ್ವರ್, ಸಚಿವ ಟಿಬಿ ಜಯಚಂದ್ರರತ್ತ ನೋಡಿ ಹೇಳಿದರು. ಉಮಾಶ್ರೀ ಅವರ ಮಾತಿನಿಂದ ಏನು ಹೇಳಲು ಆಗದೇ ವೇದಿಕೆ ಮೇಲಿದ್ದ ಎಲ್ಲರೂ ನಗೆಗಡಲಲ್ಲಿ ತೇಲಿದರು.
ಇದೇ ವೇಳೆ ಮಾಜಿ ಪ್ರಧಾನಿ ದೇವೆಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇವೇಗೌಡರು ಅನ್ನ ಭಾಗ್ಯ ರದ್ದು ಮಾಡಲು ಹೋರಟಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆಯನ್ನು ರದ್ದು ಪಡಿಸುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ಬಡವರ ತಲೆ ಮೇಲೆ ಚಪ್ಪಡಿ ಕಲ್ಲು ಇಡಲು ಹೊರಟಿದ್ದಾರೆ. ಅನ್ನ ನೀಡುವ ಕೈಗೆ ಕನ್ನ ಹಾಕಲು ಜೆಡಿಎಸ್ ಹೊರಟಿದೆ ಎಂದು ಆರೋಪಿಸಿದರು.