ಬೆಂಗಳೂರು: ಸ್ಯಾಂಡಲ್ವುಡ್ನ ನಟರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದು, ಇದೊಂದು ಒಳ್ಳೆಯ ಬೆಳವಣಿಗೆಯಾಗಿದೆ. ಇತ್ತೀಚೆಗೆ ಕಿಚ್ಚ ಸುದೀಪ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿ ಅವರ ಕೊನೆಯ ಆಸೆಯನ್ನು ನೆರವೇರಿಸಿದ್ದರು. ಈಗ ಮತ್ತೆ ರೈತರಿಗೆ ಸಹಾಯ ಮಾಡಲು ಮುಂದಾಗಿದ್ದು, ಬಡವರಿಗೆ ಆಶಾಕಿರಣರಾಗುತ್ತಾರೆ ಎಂಬುದನ್ನು ನಿರೂಪಿಸಿದ್ದಾರೆ.
‘ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್’ ರೈತ ಸ್ನೇಹಿ ಯೋಜನೆಯ ಲಾಂಛನ ಲೋಕಾರ್ಪಣೆ ಹಾಗೂ ಸಾರ್ಥಕ ನೇಗಿಲ ಯೋಗಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನ ಡಿಸೆಂಬರ್ 13 ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ಭಾಗಿಯಾಗಿ ‘ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್’ ನ ಲೋಗೋವನ್ನ ಬಿಡುಗಡೆ ಮಾಡಿದ್ರು.
ಈ ಸಂದರ್ಭದಲ್ಲಿ ರೈತರ ಬಗ್ಗೆ ಮಾತನಾಡಿದ ಸುದೀಪ್, ಸಾಮಾನ್ಯವಾಗಿ ಕಲಾವಿದರಾದ ನಾವು ಇಂತಹ ಕಾರ್ಯಕ್ರಮಕ್ಕೆ ಅಥಿತಿಗಳಂತೆ ಬಂದು ಹೋಗುತ್ತೇವೆ. ಆದರೆ ರೈತರ ಕಷ್ಟ ಮಾತ್ರ ಹಾಗೆಯೇ ಇರುತ್ತದೆ. ನನಗೆ ರೈತರಿಗೆ ಹೇಗೆ ಸಹಾಯ ಮಾಡಬೇಕೆಂದು ತಿಳಿಯುತ್ತಿಲ್ಲ. ಆದರೆ ನನ್ನ ಬಳಿ ಕೆಲವು ಕಾರುಗಳಿವೆ. ಅದರಲ್ಲಿ ನನಗೆ ಇಷ್ಟವಾದ ಬಿಎಂಡಬ್ಲ್ಯೂ ಕಾರನ್ನ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಈ ಟ್ರಸ್ಟ್ ಗೆ ನೀಡುತ್ತೇನೆ” ಎಂದು ಹೇಳಿದ್ದಾರೆ.
ಟ್ರಸ್ಟಿನವರು ಈ ಸಂದರ್ಭದಲ್ಲಿ ಸುದೀಪ್ಗೆ ಸನ್ಮಾನ ಮಾಡಲು ನಿರ್ಧರಿಸಿದ್ದರು. ಆದರೆ ಕಿಚ್ಚ ಅದನ್ನು ಸ್ವೀಕರಿಸಲು ನಿರಾಕರಿಸಿದ್ರು. ನಾನು ಭಾಷಣ ಮಾಡಲು ರಾಜಕೀಯ ವ್ಯಕ್ತಿ ಅಲ್ಲ. ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ್ರು.