ಕಳೆದ ವಾರ ದೇಶಾದ್ಯಂತ ಬಿಡುಗಡೆಯಾದ ‘ಕಬ್ಜ’ (Kabzaa) ಸಿನಿಮಾಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ‘ಕಬ್ಜ 2’ ಸಿನಿಮಾದ ಬಗ್ಗೆ ನಿರ್ದೇಶಕ ಆರ್.ಚಂದ್ರು (R. Chandru) ಮಾತನಾಡಿದ್ದಾರೆ. ಅತೀ ಶೀಘ್ರದಲ್ಲೇ ಕಬ್ಜ 2 ಸಿನಿಮಾದ ಕೆಲಸದಲ್ಲಿ ತೊಡಗುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ, ಪಾರ್ಟ್ 2 ಸಿನಿಮಾ ಇನ್ನೂ ದೊಡ್ಡದಾಗಿ ಬರುತ್ತದೆ ಮತ್ತು ಇನ್ನೂ ಅದ್ಧೂರಿಯಾಗಿ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಚಂದ್ರು, ‘ ಕಬ್ಜ ಸಿನಿಮಾ ಕೇವಲ ಕರ್ನಾಟಕ ಕಬ್ಜ ಮಾಡಿಲ್ಲ. ಸಾಕಷ್ಟು ದೇಶಗಳಲ್ಲಿ ಟ್ರೆಂಡ್ ಆಗ್ತಿದೆ. ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನನ್ನ ಮೊದಲ ಪ್ಯಾನ್ ಇಂಡಿಯಾ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಈ ಹಿಂದೆ ತಾಜ್ ಮಹಲ್ ರೀತಿಯ ಸಿನಿಮಾ ಕೂಡ ಮಾಡಿದ್ದೆ, ಈಗ ಕಬ್ಜ ಕೂಡ ಮಾಡಿದೀನಿ’ ಎಂದಿದ್ದಾರೆ. ಇದನ್ನೂ ಓದಿ: ಕರದಂಟು ಉದ್ಯಮಿ ಬೆನ್ನಿಗೆ ನಿಂತ ಅಶ್ವಿನಿ ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್ (Puneeth Rajkumar) ಹುಟ್ಟು ಹಬ್ಬದಂದು ತಮ್ಮ ಚಿತ್ರವನ್ನು ರಿಲೀಸ್ ಮಾಡಿದ್ದ ಚಂದ್ರು, ಈ ಸಿನಿಮಾವನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ. ಗೆಲುವು ಕೂಡ ಅಪ್ಪು ಅವರಿಗೆ ಅರ್ಪಿತವಾಗಿದ್ದು ಎಂದು ತಿಳಿಸಿರುವ ನಿರ್ದೇಶಕರು, ಅತೀ ಶೀಘ್ರದಲ್ಲೇ ಶಿವರಾಜ್ ಕುಮಾರ್ ಕಬ್ಜ ಸಿನಿಮಾ ನೋಡಲಿದ್ದಾರೆ ಎಂದು ವಿವರಿಸಿದರು. ಶಿವರಾಜ್ ಕುಮಾರ್ ಶೂಟಿಂಗ್ ನಲ್ಲಿ ಇರುವುದರಿಂದ ಸಿನಿಮಾ ನೋಡಲು ಆಗಿಲ್ಲವೆಂದರು.
ಕಬ್ಜ ಕಲೆಕ್ಷನ್ ವಿಚಾರವಾಗಿ ಗಾಂಧಿನಗರದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಚಿತ್ರತಂಡವೇ ಅಧಿಕೃತ ಮಾಹಿತಿಯನ್ನೂ ಈ ಹಿಂದೆ ಹಂಚಿಕೊಂಡಿದೆ. ಸಿನಿಮಾ ರಿಲೀಸ್ ಆದ ಎರಡನೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈವರೆಗಿನ ಒಟ್ಟು ಕಲೆಕ್ಷನ್ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುವುದಾಗಿ ಚಂದ್ರು ವಿವರ ಹಂಚಿಕೊಂಡಿದ್ದಾರೆ.