– ರೈಲ್ವೇ ಚಿಲ್ಡ್ರನ್ ಚಿತ್ರದ ಅಭಿನಯಕ್ಕೆ ಮನೋಹರ್ಗೆ ಪ್ರಶಸ್ತಿ
ದೊಡ್ಡಬಳ್ಳಾಪುರ: ಇತ್ತೀಚೆಗಷ್ಟೇ 64 ನೇ ರಾಷ್ಟ್ರೀಯ ಮಟ್ಟದ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ಅದರಲ್ಲಿ ಶ್ರೇಷ್ಠ ಬಾಲ ನಟ ಪ್ರಶಸ್ತಿ ಕನ್ನಡಿಗನ ಪಾಲಾಗಿದೆ. ಕುಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಬಾಲಕ ಕೆ ಮನೋಹರ್ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪಡೆಯುವ ಮೂಲಕ ಕನ್ನಡಿಗರ ಖುಷಿಗೆ ಕಾರಣವಾಗಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೋಡಲಬಂಡೆ ಗ್ರಾಮದ ಮನೋಹರ್, ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಕೃಷ್ಣಪ್ಪ ಗಾಯತ್ರಿ ದಂಪತಿಯ ಪುತ್ರ. ಬಡ ಕುಟುಂಬದಲ್ಲಿ ಜನಿಸಿರುವ ಈ ಬಾಲಕನ ಕಲಾ ಪ್ರತಿಭೆಗೆ ಇದೀಗ ರಾಷ್ಟ್ರ ಮಟ್ಟದ ಅತ್ಯುನ್ನತ ಬಾಲ ನಟ ಪ್ರಶಸ್ತಿ ಒಲಿದು ಬಂದಿದೆ.
`ರೈಲ್ವೆ ಚಿಲ್ಡ್ರನ್’ ಎಂಬ ಸಿನಿಮಾದಲ್ಲಿ ನಟನೆ ಮಾಡಿರುವ ಮನೋಹರ್ನ ಮನೋಜ್ಞ ಆಭಿನಯಕ್ಕೆ ಈ ಪ್ರಶಸ್ತಿ ಬಂದಿದೆ. ಈತ ಯಲಹಂಕ ಬಳಿಯ ಜಕ್ಕೂರು ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುವಾಗ `ರೈಲ್ವೆ ಚಿಲ್ಡ್ರನ್’ ಸಿನಿಮಾದ ನಿರ್ದೇಶಕ ಪೃಥ್ವಿ ಕೊಕನೂರು ಶಾಲೆಗೆ ಭೇಟಿ ನೀಡಿದ್ರು. ತನ್ನ ಸಿನಿಮಾಕ್ಕೆ ಕೆಲ ಬಾಲಕರನ್ನ ಆಯ್ದುಕೊಂಡು ಆಡಿಷನ್ ಮಾಡಿದ್ರು. ಅಗ ಅಂತಿಮ ಸುತ್ತಿನಲ್ಲಿ ಮನೋಹರ್ ಆಯ್ಕೆಯಾಗಿದ್ದ.
ನಟನೆಯ ಗಂಧ-ಗಾಳಿಯೇ ಗೊತ್ತಿಲ್ಲದ ಮನೋಹರ್ಗೆ ಸಿನಿಮಾದಲ್ಲಿ ನಟನೆ ಮಾಡೋದು ದೊಡ್ಡ ಸವಾಲಿನ ಕೆಲಸವಾಗಿತ್ತು. ಆದ್ರೆ ಚಿತ್ರತಂಡ ಮತ್ತು ಡಾನ್ ಬಾಸ್ಕೊ ಸಂಸ್ಥೆ ಕೊಟ್ಟ ತರಬೇತಿಯಿಂದ ನಟನೆ ಮಾಡೋದು ಸುಲಭವಾಯ್ತಂತೆ. ಸದ್ಯ ಮನೋಹರ್ ದೊಡ್ಡಬಳ್ಳಾಪುರ ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮುಗಿಸಿದ್ದು ಮುಂದಿನ ಶೈಕ್ಷಣಿಕ ಸಾಲಿನಿಂದ 10 ನೇ ತರಗತಿಗೆ ಸೇರಲಿದ್ದಾನೆ.
ಶಾಲೆಯ ಪಕ್ಕದಲ್ಲಿರುವ ಹಾಸ್ಟೆಲ್ ನಲ್ಲಿ ನೆಲೆಸಿ ವಿದ್ಯಾಭ್ಯಾಸ ಮಾಡುತ್ತಿರೋ ಮನೋಹರ್, ಸಿನಿಮಾದಲ್ಲಿ ನಟನೆ ಮಾಡಿ ಎರಡು ವರ್ಷಗಳೇ ಕಳೆದು ಹೋಗಿತ್ತು. ಕನಸಿನಲ್ಲೂ ತನಗೆ ಪ್ರಶಸ್ತಿ ಬರುತ್ತೆ ಅಂತ ಅಂದುಕೊಂಡಿರಲಿಲ್ಲ. ಇದೀಗ ರಾಷ್ಟ್ರ ಮಟ್ಟದ ಪ್ರಶಸ್ತಿ ಬಂದಿರೋದು ತನ್ನ ಖುಷಿಗೆ ಕಾರಣವಾಗಿದೆ ಅಂತಾನೆ.
ಒಟ್ಟಿನಲ್ಲಿ ಮನೋಹರ್ನ ಈ ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಬೆಟ್ಟದ ಹೂವು ಸಿನಿಮಾಗೆ ಪುನೀತ್ ರಾಜ್ ಕುಮಾರ್ ರಾಷ್ಟ್ರ ಮಟ್ಟದ ಬಾಲ ನಟ ಪ್ರಶಸ್ತಿ ಪಡೆದಿದ್ದರು. ಅದೇ ರೀತಿ ಇಂದು ಮನೋಹರ್ ರಾಷ್ಟ್ರ ಮಟ್ಟದ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದು ಕರುನಾಡ ಕೀರ್ತಿ ಪತಾಕೆಯನ್ನ ಹಾರಿಸಿದ್ದಾನೆ.