ಕೊಪ್ಪಳ: ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜ್ಯ ರಾಜಕಾರಣಕ್ಕೆ ರೀಎಂಟ್ರಿ ಕೊಡುವ ಸಾಧ್ಯತೆ ನಿಚ್ಚಳವಾಗಿದೆ. ಇದಕ್ಕೆ ಪೂರಕ ಎನ್ನುವಂತೆ ರೆಡ್ಡಿ ಬಳ್ಳಾರಿ ಜಿಲ್ಲೆ ಗಡಿಭಾಗದ ಹಳ್ಳಿಗಳಲ್ಲಿ ವಾಸ್ತವ್ಯಕ್ಕೆ ಮನೆ ಶೋಧ ನಡೆಸಿದ್ದಾರೆ.
ಈಗಾಗಲೇ ಮೂರ್ನಾಲ್ಕು ಕಡೆ ಮನೆ ನೋಡಿರುವ ಜನಾರ್ದನ ರೆಡ್ಡಿ ಕೊಪ್ಪಳದ ಗಂಗಾವತಿಯ ಆನೆಗೊಂದಿಯಲ್ಲೂ ಮನೆ ಪರಿಶೀಲಿಸಿ ಹೋಗಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಬಳ್ಳಾರಿ, ಅನಂತಪುರ ಮತ್ತು ಕಡಪ ಜಿಲ್ಲೆಗೆ ಪ್ರವೇಶ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶವಿರುವ ಹಿನ್ನೆಲೆಯಲ್ಲಿ ರೆಡ್ಡಿ ಗಡಿ ಜಿಲ್ಲೆಯ ಹಳ್ಳಿಗಳಲ್ಲಿ ವಾಸ್ತವ್ಯದ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
- Advertisement 2
- Advertisement 3
ಈಗಾಗಲೇ ಆನೆಗೊಂದಿಯ ಪ್ರವೀಣ್ ಎಂಬವರಿಗೆ ಸೇರಿದ ಸಿಂಗಲ್ ಬೆಡ್ ರೂಮ್ ಮನೆ ನೋಡಿಕೊಂಡು ಹೋಗಿರುವ ರೆಡ್ಡಿ ಸರಳತೆಗೆ ಒತ್ತು ಕೊಟ್ಟಂತೆ ಕಾಣುತ್ತಿದೆ. ತುಂಬಾ ಸಿಂಪಲ್ ಆಗಿರೋ ಈ ಮನೆಯಲ್ಲಿ ಒಂದು ಬೆಡ್ ರೂಮ್, ಒಂದು ಕಿಚನ್, ಒಂದು ಹಾಲ್ ಮತ್ತು ಚಿಕ್ಕದಾದ ದೇವರ ಕೋಣೆ ಇದೆ. ಒಟ್ಟು 60 ಅಡಿ ಉದ್ದ 15 ಅಡಿ ಅಗಲವಿದ್ದು, ಈ ಮನೆಗೆ ಇನ್ನೇನು ರೆಡ್ಡಿ ಕುಟುಂಬ ಬರುವುದೊಂದೇ ಬಾಕಿ ಇದೆ. ಇದನ್ನೂ ಓದಿ: ರಾಹುಲ್ ಗಾಂಧಿ ಕಾಲಿಟ್ಟಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಸುಟ್ಟು ಭಸ್ಮವಾಗಲಿದೆ: ಜನಾರ್ದನ ರೆಡ್ಡಿ
- Advertisement 4
ಈ ಮನೆಯಲ್ಲಿ ರೆಡ್ಡಿ ಬಾಡಿಗೆಗೆ ಇರ್ತಾರಾ ಅಥವಾ ಸ್ವಂತಕ್ಕೆ ತಗೆದುಕೊಳ್ಳುತ್ತಾರಾ ಅಂತ ಪ್ರಶ್ನಿಸಿದ್ರೆ, ಜನಾರ್ದನ ರೆಡ್ಡಿ ಬರೋದೇ ನಮಗೆ ಖುಷಿಯ ವಿಚಾರ, ಅವರು ಇರ್ತೀನಿ ಅಂದ್ರೆ ನಾವು ಫ್ರೀ ಆಗಿ ಕೊಡೋಕು ಸಿದ್ಧ ಅಂತಾರೆ ಮನೆಯ ಒಡೆಯ ಪ್ರವೀಣ್.
ಬಳ್ಳಾರಿ ರಾಜಕಾರಣವನ್ನು ಹೀಗೆ ಹತ್ತಿರದಲ್ಲಿದ್ದುಕೊಂಡು ನಿಯಂತ್ರಿಸುವ ಇರಾದೆಯನ್ನು ಜನಾರ್ದನರೆಡ್ಡಿ ಹೊಂದಿದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಅವರ ರಾಜಕೀಯ ಭವಿಷ್ಯವನ್ನೂ ನಿರ್ಧರಿಸುತ್ತದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸುಪ್ರೀಂ ಕೋರ್ಟ್ ಸೇರು ಅಂದ್ರೆ ಜನಾರ್ದನ ರೆಡ್ಡಿ ಸವಾಸೇರು ಎಂಬಂತೆ 3 ಜಿಲ್ಲೆಗಳ ರಾಜಕೀಯವನ್ನು ಹತ್ತಿರದಲ್ಲಿ ಇದ್ದುಕೊಂಡೇ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ತಂತ್ರ ಹೂಡಿದ್ದಾರೆ.