ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೋಡಾದ ಕುರ್ಸಾರಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಪುರಾತನ ದೇವಾಲಯಕ್ಕೆ ದೈತ್ಯ ವಿಗ್ರಹಗಳನ್ನು ಸ್ಥಳಾಂತರಿಸಲು ಹಿಂದೂಗಳಿಗೆ ಅಲ್ಲಿನ ಮುಸ್ಲಿಂ ನಿವಾಸಿಗಳು ಕೈಜೋಡಿಸಿ ಕೋಮು ಸೌಹಾರ್ದತೆಯನ್ನು ಮೆರೆದರು.
ಹಳೆಯ ವಿಗ್ರಹಗಳು ಸ್ವಲ್ಪ ವಿರೂಪಗೊಂಡಿದ್ದರಿಂದ 500 ಕೆ.ಜಿ ಮತ್ತು 700 ಕೆ.ಜಿ ತೂಕದ ಗ್ರಾನೈಟ್ನಿಂದ ಮಾಡಲಾದ 6 ವಿಗ್ರಹಗಳನ್ನು ರಾಜಸ್ಥಾನದಿಂದ ತರಿಸಲಾಗಿದೆ. ಇದನ್ನು ಭದೇರ್ವಾ-ದೋಡಾ ಹೆದ್ದಾರಿಯಿಂದ 3 ಕಿ.ಮೀ ದೂರದಲ್ಲಿರುವ ಬೆಟ್ಟದ ತುದಿಯಲ್ಲಿರುವ ಕುರ್ಸಾರಿಯ ಶಿವ ದೇವಾಲಯದಲ್ಲಿ ಸ್ಥಾಪಿಸಲಾಯಿತು.
ಆದರೆ ಇದನ್ನು ತರುವಾಗ ಸರಿಯಾದ ರಸ್ತೆ ಇಲ್ಲದ್ದರಿಂದ ತುಂಬಾ ಕಷ್ಟ ಪಡಬೇಕಾಯಿತು. ದೇವಾಲಯವು ಗುಡ್ಡದ ತುದಿಯಲ್ಲಿದ್ದರಿಂದ ವಿಗ್ರಹ ಸಾಗಿಸಲು ಹಿಂದೂಗಳು ಕಷ್ಟಪಡುತ್ತಿದ್ದುದನ್ನು ನೋಡಿದ ಕುರ್ಸರಿ ಪಂಚಾಯತ್ ಅಧ್ಯಕ್ಷ ಸಾಜಿದ್ ಮಿರ್ ಅವರು ತುರ್ತು ರಸ್ತೆ ನಿರ್ಮಾಣಕ್ಕೆ 4.6 ಲಕ್ಷ ರೂ.ವನ್ನು ಮಂಜೂರು ಮಾಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಸಮುದಾಯದ 150 ಗ್ರಾಮಸ್ಥರನ್ನು ಸೇರಿಸಿ ವಿಗ್ರಹವನ್ನು ದೇವಾಲಯಕ್ಕೆ ತಲುಪಿಸಲು ಸಹಾಯ ಮಾಡಿದರು. ಇದನ್ನೂ ಓದಿ: ರಾಜ್ಯದ ಮುಖ್ಯಮಂತ್ರಿ ಸುಳ್ಳು ಹೇಳಲ್ಲ ಎಂದು ಅಂದುಕೊಂಡಿದ್ದೇವೆ: ಯು.ಟಿ ಖಾದರ್
ಕೇವಲ 4 ದಿನಗಳಲ್ಲಿ ಎರಡೂ ಸಮುದಾಯಗಳ ಸ್ವಯಂಸೇವಕರು ಸೇರಿ ಹಗ್ಗ ಮತ್ತು ಯಂತ್ರಗಳ ಸಹಾಯದಿಂದ ರಾಜಸ್ಥಾನದಿಂದ ತಂದ ವಿಗ್ರಹಗಳನ್ನು ದೇವಸ್ಥಾನಕ್ಕೆ ತಲುಪಿಸಿದರು. ಭದೇರ್ವಾದಲ್ಲಿ ನೆಲೆಗೊಂಡಿರುವ ಸೇನೆಯ ರಾಷ್ಟ್ರೀಯ ರೈಫಲ್ಸ್ ಘಟಕವು ಗ್ರಾಮಸ್ಥರಿಗೆ ಸಹಾಯ ಮಾಡಲು ಯಂತ್ರೋಪಕರಣಗಳನ್ನು ಕಳುಹಿಸಿತ್ತು. ಇದನ್ನೂ ಓದಿ: ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಬಳಿ ನೆರೆ ಪರಿಹಾರ ಕೇಳಲಿಲ್ಲವೇಕೆ – BJP ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ