ಚಿತ್ರದುರ್ಗ: ಬದಾಮಿಯಲ್ಲಿ ಸೋಮವಾರ ರಾತ್ರಿ ಕಾಂಗ್ರೆಸ್ ಗೆ ಶಾಕ್ ಕೊಟ್ಟಿದ್ದ ಐಟಿ ಅಧಿಕಾರಿಗಳು ಇದೀಗ ಬಿಜೆಪಿಯವರಿಗೂ ಶಾಕ್ ನೀಡಿದ್ದಾರೆ.
ಸಂಸದ ಶ್ರೀರಾಮುಲು ಬದಾಮಿಗೆ ಹೋದಾಗಲೆಲ್ಲಾ ವಾಸ್ತವ್ಯ ಹೂಡುತ್ತಿದ್ದ ಕೋರ್ಟ್ ಹೋಟೆಲ್ಗೆ ಐಟಿ ಅಧಿಕಾರಿಗಳು ಮಂಗಳವಾರ ತಡರಾತ್ರಿ ದಿಢೀರ್ ದಾಳಿ ನಡೆಸಿ ರೂಂ ಗಳನ್ನ ಜಾಲಾಡಿದ್ದಾರೆ. ಹೋಟೆಲ್ ರಿಜಿಸ್ಟರ್ ಪುಸ್ತಕವನ್ನ ಪರಿಶೀಲಿಸಿದ್ದಾರೆ.
ಇದಕ್ಕೂ ಮುನ್ನ ಚುನಾವಣಾ ಅಕ್ರಮ ಮಾಹಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳು ರಾಮುಲು ಆಪ್ತ ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ಟಿ.ರೇವಣ್ಣ ಅವರ ಕೊಂಡ್ಲಹಳ್ಳಿ ತೋಟದ ಮನೆ ಹಾಗೂ ಧನಂಜಯ ರೆಡ್ಡಿ ಅವರ ದೊಡ್ಡ ಉಳ್ಳಾರ್ತಿ ಮನೆ ಮೇಲೂ ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೇ ದಾವಣಗೆರೆಯ ಮಾಡಾಳು ಗ್ರಾಮ ಚನ್ನಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಡಾಳ್ ವಿರೂಪಾಕ್ಷಪ್ಪ ನಿವಾಸದ ಮೇಲೂ ರೇಡ್ ಮಾಡಿದ್ದಾರೆ. ಮೂರು ಜನ ಅಧಿಕಾರಿಗಳ ತಂಡದಿಂದ ಮಹತ್ವ ಪ್ರಮಾಣದ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬದಾಮಿ ಕಾಂಗ್ರೆಸ್ಗೆ ಮಿಡ್ನೈಟ್ ಐಟಿ ಶಾಕ್!
ಈ ವಿಚಾರ ತಿಳಿಯುತ್ತಿದ್ದಂತೆ ವಿರೂಪಾಕ್ಷಪ್ಪ ಮನೆ ಮುಂಭಾಗ ಅಪಾರ ಪ್ರಮಾಣದಲ್ಲಿ ಬೆಂಬಲಿಗರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ, ವಿರೂಪಾಕ್ಷಪ್ಪ, ಇದೆಲ್ಲಾ ವಿಪಕ್ಷದವರ ಕುತಂತ್ರ. ನನ್ನ ಜನಪ್ರಿಯತೆ ಸಹಿಸಲಾರದೆ ದೂರು ನೀಡಿದ್ದಾರೆ. ಯಾರು ಏನೇ ಮಾಡಿದರೂ ನಾನೇ ಗೆಲ್ಲೋದು ಅಂದ್ರು.
ಗದಗ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ಪ್ರಚಾರ ವೇಳೆ, ಈ ಬಗ್ಗೆ ಮಾತನಾಡಿದ ಬಿ.ಶ್ರೀರಾಮುಲು, ಹಣ ಹಂಚಿ ಗೆಲುವು ಸಾಧಿಸಲು ಸಿ.ಎಂ ಹಿಂಬಾಲಕರು ಬದಾಮಿಯಲ್ಲಿ ಠಿಕಾಣಿ ಹೂಡಿದ್ದಾರೆ. ಸೋಮವಾರ ರೇಡ್ ನಡೆದ ಸಂದರ್ಭದಲ್ಲಿ ಸಿ.ಎಂ. ಇಬ್ರಾಹಿಂ. ಎಸ್ ಆರ್ ಪಾಟೀಲ್ ಹಾಗೂ ಅವರ ಹಿಂಬಾಲಕರು ಬಚ್ಚಿಟ್ಟ ಹಣ ಸಿಕ್ಕಿದೆ. ಬದಾಮಿಯ ಕೃಷ್ಣ ಹೆರಿಟೇಜ್ ನಲ್ಲಿ ರೇಡ್ ಆದಾಗ ಸಿಎಂ ಹಿಂಬಾಲಕರು ಹಣ ಸಮೇತ ಪರಾರಿ ಆಗಿದ್ದಾರೆ. ಜತೆಗೆ ಸಾಕಷ್ಟು ಹಣವೂ ರೇಡ್ ನಲ್ಲಿ ಸಿಕ್ಕಿದೆ ಎಂದಿದ್ದಾರೆ. ಇದನ್ನೂ ಓದಿ: ಹೊಸ ತಿರುವು ಪಡೆದುಕೊಂಡ ಬದಾಮಿ ಐಳಿ ದಾಳಿ ಪ್ರಕರಣ
ಸಿಎಂ ಅವರೇ ಲೋಹಿಯಾ ಸಿದ್ಧಾಂತದ ಕುರಿತು ಮಾತಾಡುತ್ತೀರಿ. ಹಣ ಹಂಚೋ ಕೆಲಸ ನಿಮಗೆ ಕೆಟ್ಟದ್ದು, ಅನ್ನಿಸಲಿಲ್ವಾ?. ಸಂವಿಧಾನದ ಮೇಲೆ ಗೌರವ ಇದ್ದರೆ ಹಿಂಬಾಲಕರನ್ನು ಹಿಂದಕ್ಕೆ ಕರೆಸಿಕೊಳ್ಳಿ ಹಣದಿಂದ ಚುನಾವಣೆ ನಡೆಸುವ ಸಂಪ್ರದಾಯ ಪ್ರಾರಂಭಿಸಿದ್ದೀರಿ. ಅಕ್ರಮ ಮಾರ್ಗದಿಂದ ಚುನಾವಣೆ ಮಾಡಿದರೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜ್ಯಕ್ಕೆ ರೋಲ್ ಮಾಡೆಲ್ ಆಗಬೇಕು ಎಂದು ಗದಗ್ ನಲ್ಲಿ ಶ್ರಿರಾಮುಲು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.