– ಹೊಸ ಶಸ್ತ್ರಾಸ್ತ್ರ ಮದ್ದುಗುಂಡು, ತಂತ್ರಜ್ಞಾನ ಸಂಶೋಧನೆಗೆ ಹಂಚಿಕೆ
ನವದೆಹಲಿ: ‘ಆಪರೇಷನ್ ಸಿಂಧೂರ’ (Operation Sindoor) ಸಕ್ಸಸ್ ಹಿನ್ನೆಲೆ ಭಾರತ ರಕ್ಷಣಾ (India’s Defence) ವಲಯಕ್ಕೆ ಮತ್ತಷ್ಟು ಬೂಸ್ಟ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದ ರಕ್ಷಣಾ ಬಜೆಟ್ 50,000 ಕೋಟಿ ರೂ.ಗೆ ಹೆಚ್ಚಳವಾಗಬಹುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಪೂರಕ ಬಜೆಟ್ ಮೂಲಕ ಒದಗಿಸಲಾಗುವ ಈ ಹೆಚ್ಚಳವು ಒಟ್ಟಾರೆ ರಕ್ಷಣಾ ಹಂಚಿಕೆಯನ್ನು 7 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗುವಂತೆ ಮಾಡಲಿದೆ ಎಂದು ವಿಶ್ಲೇಷಿಸಲಾಗಿದೆ. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲು – ತಾಲಿಬಾನ್ ವಿದೇಶಾಂಗ ಸಚಿವರ ಜೊತೆ ಜೈಶಂಕರ್ ಮಾತುಕತೆ
ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2025/26 ರ ಬಜೆಟ್ನಲ್ಲಿ ಸಶಸ್ತ್ರ ಪಡೆಗಳಿಗೆ ದಾಖಲೆಯ 6.81 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಈ ವರ್ಷದ ಹಂಚಿಕೆಯು 2024/25 ರಲ್ಲಿನ 6.22 ಲಕ್ಷ ಕೋಟಿ ರೂ.ನಿಂದ ಶೇಕಡಾ 9.2 ರಷ್ಟು ಗಮನಾರ್ಹ ಹೆಚ್ಚಳವಾಗಿದೆ.
ಹೆಚ್ಚಿದ ಬಜೆಟ್ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ಪಡೆಯಲಾಗುವುದು. ಅನುದಾನವನ್ನು ಸಂಶೋಧನೆ, ಅಭಿವೃದ್ಧಿ ಮತ್ತು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಅಗತ್ಯ ಉಪಕರಣಗಳ ಖರೀದಿಗೆ ಬಳಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಮೇಲೆ ಭಾರತದ ಬ್ರಹ್ಮೋಸ್ ದಾಳಿಯಾಗಿದೆ: ಪಾಕ್ ನಿವೃತ್ತ ಏರ್ ಮಾರ್ಷಲ್ ಮಸೂದ್ ಅಕ್ತರ್
2014 ರಿಂದ ನರೇಂದ್ರ ಮೋದಿ ಆಡಳಿತದ ಕೇಂದ್ರಬಿಂದು ರಕ್ಷಣೆಯಾಗಿದೆ. ಬಿಜೆಪಿ ಸರ್ಕಾರದ ಮೊದಲ ವರ್ಷವಾದ 2014/15 ರಲ್ಲಿ ರಕ್ಷಣಾ ಸಚಿವಾಲಯಕ್ಕೆ 2.29 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿತ್ತು. ಪ್ರಸ್ತುತ ಹಂಚಿಕೆಯು ಎಲ್ಲಾ ಸಚಿವಾಲಯಗಳಿಗಿಂತ ಅತ್ಯಧಿಕವಾಗಿದ್ದು, ಒಟ್ಟು ಬಜೆಟ್ನ ಶೇ. 13 ರಷ್ಟಿದೆ.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿ, ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆ, ಆಪರೇಷನ್ ಸಿಂಧೂರ, ಪಾಕ್ ಜೊತೆಗಿನ ಉದ್ವಿಗ್ನತೆ ಮೊದಲಾದ ಬೆಳವಣಿಗೆಗಳ ಮಧ್ಯೆ ಭಾರತದ ರಕ್ಷಣಾ ಸನ್ನದ್ಧತೆ ಮತ್ತು ಬಜೆಟ್ ಹಂಚಿಕೆ ಹೆಚ್ಚಾಗಿದೆ. ಇದನ್ನೂ ಓದಿ: ಕೊನೆಗೂ ಭಾರತದ ಮುಂದೆ ಮಂಡಿಯೂರಿದ ಪಾಕ್ – ಶಾಂತಿ ಮಾತುಕತೆಗೆ ಪಾಕ್ ಪ್ರಧಾನಿ ಆಹ್ವಾನ
ಇಸ್ರೇಲ್ನ ಪ್ರಸಿದ್ಧ ‘ಐರನ್ ಡೋಮ್’ಗೆ ಹೋಲಿಸಬಹುದಾದ ಮುಂದುವರಿದ ವಾಯು ರಕ್ಷಣಾ ವ್ಯವಸ್ಥೆಗಳೊಂದಿಗೆ ಭಾರತೀಯ ಸೇನೆಯ ಪ್ರಬಲ ಸಿನರ್ಜಿ – ಯುದ್ಧತಂತ್ರದ ಚಾತುರ್ಯವನ್ನು ಆಪರೇಷನ್ ಸಿಂಧೂರ ಹೈಲೈಟ್ ಮಾಡಿದೆ. ಆಕಾಶ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಸೇರಿದಂತೆ ಆ ಜಾಲದಲ್ಲಿನ ಸ್ವದೇಶಿ ಉಪಕರಣಗಳ ಮೇಲೆಯೂ ಕೇಂದ್ರೀಕರಿಸಿದೆ.