– ದೂದಗಂಗಾ, ವೇದಗಂಗಾ, ಹೀರಣ್ಯಕೇಶಿ ನದಿಗಳ ನೀರಿನ ಮಟ್ಟ ಏರಿಕೆ
ಬೆಳಗಾವಿ: ಮಹಾರಾಷ್ಟ್ರದ (Maharashtra) ಘಟ್ಟ ಪ್ರದೇಶ ಹಾಗೂ ಬೆಳಗಾವಿ (Belagavi) ಜಿಲ್ಲೆಯಲ್ಲಿ ನಿರಂತರ ಮಳೆ (Rain) ಸುರಿಯುತ್ತಿದೆ. ಪರಿಣಾಮ ಕೃಷ್ಣಾ ಹಾಗೂ ಅದರ ಉಪ ನದಿಗಳ ನೀರಿನ ಒಳ ಹರಿವಿನಲ್ಲಿ ಗಣನೀಯ ಏರಿಕೆಯಾಗಿದ್ದು, ನದಿ ತೀರಗಳಲ್ಲಿ ಕ್ಷಣಕ್ಷಣಕ್ಕೂ ಪ್ರವಾಹದ ಭೀತಿ ಆವರಿಸಿದೆ.
ನಿರಂತರ ಮಳೆಯಿಂದ ಕೃಷ್ಣಾ ನದಿಯ (Krishna River) ಒಳ ಹರಿವು 1 ಲಕ್ಷ ಕ್ಯೂಸೆಕ್ ದಾಟಿದೆ. ದೂದಗಂಗಾ, ವೇದಗಂಗಾ, ಹೀರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲೂ ಗಣನೀಯ ಏರಿಕೆಯಾಗಿದೆ.
ಹೀರಣ್ಯಕೇಶಿ ನದಿ ಕೂಡ ಭರ್ತಿಯಾಗಿದ್ದು, ನದಿ ತೀರದ ಜಮೀನುಗಳು ಜಲಾವೃತವಾಗಿವೆ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 11 ಸೇತುವೆಗಳು ಜಲಾವೃತವಾಗಿದ್ದು, ಪರ್ಯಾಯ ಮಾರ್ಗಗಳ ಮೂಲಕ ಜನರ ಸಂಚಾರ ಮಾಡುತ್ತಿದ್ದಾರೆ.
ಹುಕ್ಕೇರಿ ತಾಲೂಕಿನ ಹೀರಣ್ಯಕೇಶಿ ನದಿಗೆ ಅಡ್ಡಲಾಗಿರುವ ಮದಮಕ್ಕನಾಳ – ಯರನಾಳ ಸೇತುವೆ ಜಲಾವೃತವಾಗಿದೆ. ಪ್ರವಾಹ ಭೀತಿ ಇದರೂ ಪ್ರಯಾಣಿಕರು ಸಂಚಾರ ಮಾಡುತ್ತಿದ್ದರು. ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಎಚ್ಚೆತ್ತ ಬೆಳಗಾವಿ ಜಿಲ್ಲಾಡಳಿತ, ಬ್ಯಾರಿಕೇಡ್ ಅಳವಡಿಸಿ ಪೊಲೀಸರನ್ನ ನಿಯೋಜನೆ ಮಾಡಿದೆ.
ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಕೃಷ್ಣಾ ನದಿ ತೀರದ ದತ್ತ ದೇವಸ್ಥಾನ ಜಲಾವೃತವಾಗಿದೆ. ಈಗಾಗಲೇ ಅಪಾಯದ ಮಟ್ಟದಲ್ಲಿ ಕೃಷ್ಣಾ ನದಿ ಹರಿಯುತ್ತಿರುವ ಕಾರಣ, ಚಿಕ್ಕೋಡಿ ತಹಶೀಲ್ದಾರ್ ಚಿದಂಬರ ಕುಲಕರ್ಣಿ ನದಿ ತೀರಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನ ಪರಿಶೀಲಿಸಿದ್ದಾರೆ.