ದಿ ಹೇಗ್: ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಖಂಡಿಸಿ ಭಾರತದ ನ್ಯಾಯಾಧೀಶರೊಬ್ಬರು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮತ ಚಲಾಯಿಸಿದ್ದಾರೆ.
ಯುಎನ್ನ ಉನ್ನತ ನ್ಯಾಯಾಲಯವು ಉಕ್ರೇನ್ ಮೇಲಿನ ಆಕ್ರಮಣವನ್ನು ನಿಲ್ಲಿಸುವಂತೆ ರಷ್ಯಾಕ್ಕೆ ಬುಧವಾರ ಆದೇಶ ನೀಡಿತು. ರಷ್ಯಾದ ಒಕ್ಕೂಟವು ಫೆಬ್ರವರಿ 24 ರಂದು ಉಕ್ರೇನ್ ಭೂಪ್ರದೇಶದಲ್ಲಿ ಪ್ರಾರಂಭಿಸಿದ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಪ್ರಕರಣದ ಅಂತಿಮ ತೀರ್ಮಾನ ಬಾಕಿಯಿದೆ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ನ್ಯಾಯಾಧೀಶ ಜೋನ್ ಡೊನೊಗ್ಯು ಹೇಳಿದ್ದಾರೆ. ಇದನ್ನೂ ಓದಿ: ಪುಟಿನ್ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್
ರಷ್ಯಾ ದಾಳಿ ಕುರಿತು ಯುಎನ್ ನ್ಯಾಯಾಲಯಕ್ಕೆ ಉಕ್ರೇನ್ ಅರ್ಜಿ ಸಲ್ಲಿಸಿತ್ತು. ಆಕ್ರಮಣ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಈ ವೇಳೆ ಭಾರತದ ನ್ಯಾಯಾಧೀಶ ದಲ್ವೀರ್ ಭಂಡಾರಿ ಅವರು ರಷ್ಯಾ ವಿರುದ್ಧ ಮತ ಹಾಕಿದ್ದಾರೆ.
ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹಾಗೂ ಸಾಮಾನ್ಯ ಸಭೆಯಲ್ಲಿ ರಷ್ಯಾ ವಿರುದ್ಧದ ನಿರ್ಣಯದಿಂದ ಭಾರತ ದೂರ ಉಳಿದಿದೆ. ಮಾತುಕತೆ ಮೂಲಕ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದೆ. ಆದರೆ ಭಾರತದ ನ್ಯಾಯಾಧೀಶ ಈಗ ರಷ್ಯಾ ವಿರುದ್ಧ ಮತ ಚಲಾಯಿಸಿದ್ದಾರೆ. ಇದನ್ನೂ ಓದಿ: ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್ ಮೇಯರ್ ಬಿಡುಗಡೆ
ದಾಳಿ ನಡೆಸುತ್ತಿರುವ ರಷ್ಯಾವನ್ನು ತಡೆಯಬೇಕು. ಅದನ್ನು ನಿಲ್ಲಿಸುವ ಜವಾಬ್ದಾರಿಯೂ ನ್ಯಾಯಾಲಯದ್ದಾಗಿದೆ ಎಂದು ಉಕ್ರೇನ್ ಪ್ರತಿನಿಧಿ ಆಂಟನ್ ಕೊರಿನೆವಿಚ್ ಹೇಳಿದ್ದರು.
ಆದರೆ ಉಕ್ರೇನ್ ಮೇಲಿನ ದಾಳಿಯನ್ನು ರಷ್ಯಾ ಸಮರ್ಥಿಸಿಕೊಂಡಿದೆ. ಆತ್ಮರಕ್ಷಣೆಗಾಗಿ ಈ ದಾಳಿ ನಡೆಸಲಾಗುತ್ತಿದೆ ಎಂದು ರಷ್ಯಾ ಸ್ಪಷ್ಟನೆ ನೀಡಿದೆ.