ಬಾಗಲಕೋಟೆ: ಕಾಂಗ್ರೆಸ್ನ (Congress) ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಪ್ರಮುಖವಾದದ್ದಾಗಿದೆ. ಮನೆಯೊಡತಿಗೆ ಎರಡು ಸಾವಿರ ನೀಡುವ ಯೋಜನೆ ಇದಾಗಿದ್ದು, ಇದರಿಂದ ಮಹಿಳಾಮಣಿಗಳು ಫುಲ್ ಖುಷ್ ಆಗಿದ್ದಾರೆ. ಆದರೆ ಇನ್ನೊಂದು ಕಡೆ ಅದೆಷ್ಟೋ ಮಹಿಳೆಯರು ಹಣ ಬಾರದೇ ಇಂದಿಗೂ ಅಲೆದಾಡುತ್ತಿದ್ದಾರೆ. ಅದೊಂದು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಇಂದಿಗೂ 50 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಸಿಕ್ಕಿಲ್ಲ.
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಕೆಲವರಿಗೆ ಸಿಕ್ಕಿದ್ದರೆ, ಇನ್ನೂ ಕೆಲವರಿಗೆ ಸಿಕ್ಕಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ 50 ಸಾವಿರಕ್ಕೂ ಅಧಿಕ ಮಂದಿಗೆ 2000 ರೂಪಾಯಿ ಹಣ ಇನ್ನೂ ದಕ್ಕಿಲ್ಲ. ಆಧಾರ್ ಸರಿಯಿಲ್ಲ, ಕೆವೈಸಿ, ರೇಷನ್ ಕಾರ್ಡ್ ತಿದ್ದುಪಡಿಗಾಗಿ ಮಕ್ಕಳ ಕಲ್ಯಾಣ ಇಲಾಖೆ, ಕರ್ನಾಟಕ ಒನ್ ಕೇಂದ್ರಗಳಿಗೆ ಯಜಮಾನಿಯರು ನಿತ್ಯ ಅಲೆದಾಡುವಂತಾಗಿದೆ. ಅಧಿಕಾರಿಗಳಿಗೆ ಕೇಳಿದ್ರೆ ತಾಂತ್ರಿಕ ಸಮಸ್ಯೆ ಅಂತಿದ್ದಾರೆ ಅಂತ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ (Bagalkote) ಜಿಲ್ಲೆಯಲ್ಲಿ ಒಟ್ಟು 4 ಲಕ್ಷದ 34 ಸಾವಿರ 852 ಫಲಾನುಭವಿಗಳ ಗುರಿ ಹೊಂದಲಾಗಿದೆ. ಇದರಲ್ಲಿ 3 ಲಕ್ಷದ 80 ಸಾವಿರದ 312 ಮಂದಿ ನೊಂದಣಿ ಮಾಡಿಕೊಂಡಿದ್ದಾರೆ. ಆಗಸ್ಟ್ ತಿಂಗಳಲ್ಲಿ 3 ಲಕ್ಷದ 18 ಸಾವಿರದ 270 ಜನರಿಗೆ ತಲಾ 2 ಸಾವಿರ ರೂಪಾಯಿ ಬಂದರೆ 43 ಸಾವಿರದ 438 ಮಂದಿಗೆ ಹಣ (Gruhalakshmi Money) ಬಂದಿಲ್ಲ. ಸೆಪ್ಟಂಬರ್ ನಲ್ಲಿ 3 ಲಕ್ಷದ 17 ಸಾವಿರದ 606 ಜನರಿಗೆ ಹಣ ಬಂದರೆ ಅಗಸ್ಟ್ ನಲ್ಲಿ ಬಂದ ಫಲಾನುಭವಿಗಳ ಪೈಕಿ ಸೆಪ್ಟಂಬರ್ ನಲ್ಲಿ 664 ಮಂದಿಗೆ ಹಣ ಸಿಕ್ಕಿಲ್ಲ.
ಜಿಲ್ಲೆಯಲ್ಲಿ 46,408 ಮಹಿಳೆಯರ ಹೆಸರು ನೊಂದಣಿ ಆಗಿಯೇ ಇಲ್ಲ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಕೆವೈಸಿ, ರೇಷನ್ ಕಾರ್ಡ್ ತಿದ್ದುಪಡಿ ಸೇರಿದಂತೆ ತಾಂತ್ರಿಕ ಕಾರಣದಿಂದ ಇಷ್ಟೆಲ್ಲ ಸಮಸ್ಯೆಯಾಗಿದೆ. ಇದನ್ನು ಆದಷ್ಟು ಸರಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ – ಕುಡುಪು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ?
ಒಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕೆಲವರಿಗೆ ಪ್ರಸಾದವಾದರೆ ಕೆಲವರಿಗೆ ಕೈಗೆಟುಕದೆ ನಿರಾಸೆಯಾಗಿದೆ. ಆದಷ್ಟು ಬೇಗ ತಾಂತ್ರಿಕ ಸಮಸ್ಯೆಗಳನ್ನು ಸರಿದೂಗಿಸಿ ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ಸಿಗುವಂತೆ ಮಾಡಬೇಕಿದೆ.