– ಅಬಕಾರಿ ಸಚಿವ ತಿಮ್ಮಾಪುರ ತವರು ಜಿಲ್ಲೆಯಲ್ಲಿ ಕೃತ್ಯ
ಬಾಗಲಕೋಟೆ: ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ (RB Timmapur) ಅವರ ತವರು ಜಿಲ್ಲೆಯಲ್ಲೇ ಅಕ್ರಮ ಮದ್ಯ ಮಾರಾಟ (Illegal Liquor Sale) ಮಾಡಿದ್ದನ್ನು ಪ್ರಶ್ನಿಸಿದವನನ್ನು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ರಡ್ಡೇರ್ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.
ಡಿ.21 ರಂದು ಈ ದುರ್ಘಟನೆ ನಡೆದದ್ದು, ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಗ್ರಾಮದ 40 ವರ್ಷದ ವೆಂಕನಗೌಡ ಶೇಷಪ್ಪನವರ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸ್ಫೋಟ ಪ್ರಕರಣ – ಡ್ರೋನ್ ಪ್ರತಾಪ್ಗೆ ಜಾಮೀನು
ಕೊಲೆಗೈದ ಆರೋಪಿ ಹನಮಂತ್ ನೀಲರ್, ತನ್ನ ಮನೆಯಲ್ಲೇ ಅಕ್ರಮ ಮದ್ಯ ಮಾರಾಟವನ್ನು ಮಾಡುತ್ತಿದ್ದ. ಇದರಿಂದ ಪಕ್ಕದ ಮನೆಯ ವೆಂಕನಗೌಡ ಮನೆಯವರಿಗೆ ದಿನಂಪ್ರತಿ ಕುಡುಕರಿಂದ ಕಿರಿಕಿರಿಯಾಗುತ್ತಿತ್ತು. ಹೀಗಾಗಿ ಅಕ್ರಮ ಮದ್ಯ ಮಾರಾಟ ಮಾಡದಂತೆ ಮೃತ ವೆಂಕನಗೌಡ, ಹನಮಂತ್ ನೀಲರ್ಗೆ ಸೂಚಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪದೇ ಪದೇ ಜಗಳ ನಡೆಯುತ್ತಿತ್ತು.
ತನ್ನ ವಿರುದ್ಧ ಮಾತನಾಡಿದ್ದಕ್ಕೆ ಹನಮಂತ್, ಪಕ್ಕದ ಊರಿನಿಂದ ಸಂಬಂಧಿಕರನ್ನು ಕರೆಯಿಸಿ, ವೆಂಕನಗೌಡ ಮೇಲೆ ಡಿಸೆಂಬರ್ 21 ರಂದು ಕಟ್ಟಿಗೆ, ಹಾಗೂ ಕೈಗಳಿಂದ ಮಾರಣಾಂತಿಕ ಹಲ್ಲೆ ಮಾಡಿಸಿದ್ದ. ಹಲ್ಲೆಗೊಳಗಾಗಿ ಪ್ರಜ್ಞಾಹೀನ ಸ್ಥಿತಿ ತಲುಪಿದ್ದ ವೆಂಕನಗೌಡಗೆ ಕರೆಂಟ್ ಶಾಕ್ ಕೊಟ್ಟು ಹಿಂಸೆ ನೀಡಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ವೆಂಕನಗೌಡ ಶೇಷಪ್ಪನವರ್ ಅವರನ್ನು ಪರಿಚಯಸ್ಥರು ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಹಲ್ಲೆಗೊಳಗಾಗಿದ್ದ ವೆಂಕನಗೌಡ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.