ಚಿತ್ರದುರ್ಗ: ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ನಿವಾಸದಲ್ಲಿ ಆದಾಯ ತೆರಿಗೆ ದಾಳಿ ವೇಳೆ ಸಿಕ್ಕಿದ ಡೈರಿಯಲ್ಲಿ ಉಲ್ಲೇಖಗೊಂಡಿರುವ ವಿಚಾರಗಳನ್ನು ಓದಿದರೆ ಸರ್ಕಾರದ ಅಕ್ರಮಗಳ ಬಗ್ಗೆಯೇ ಒಂದು ವಾರ ಭಾಷಣ ಮಾಡಬಹುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಹೊಳಲ್ಕೆರೆಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಭಾಷಣ ಮಾಡಿದ ಅವರು, 170 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿರುವ ಈ ಯಾತ್ರೆ ಸುಮಾರು 8 ಸಾವಿರ ಕಿಲೋ ಮೀಟರ್ ಮುಗಿಸಿದೆ. ಈ ಯಾತ್ರೆ ಪ್ರಭಾವದಿಂದಾಗಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಇಲ್ಲಿಯವರೆಗೆ ಮೂರು ಲಕ್ಷ ಕೋಟಿ ರೂ. ಅನುದಾನ ನೀಡಿದ್ದು, ಈ ಹಣವನ್ನು ಸರ್ಕಾರ ತಿಂದು ಹಾಕಿದೆ. ತಾಯಂದಿರ ಕಣ್ಣು ಒರೆಸಲು ಉಜ್ವಲ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಹಣ ಎಲ್ಲಿ ಹೋಯಿತು ಅಂದರೆ ಅದು ಕಾಂಗ್ರೆಸ್ ಕಾರ್ಯಕರ್ತನ ಮನೆ ಸೇರಿದೆ. ಮೋದಿ ಕಳಿಸಿದ ಮೂರು ಲಕ್ಷದ ಜೊತೆಗೆ ಜನ ಕಟ್ಟಿದ ತೆರಿಗೆ ಹಣವನ್ನು ಸಹ ಈ ಸರ್ಕಾರ ತಿಂದಿದೆ ಎಂದು ಕಟುವಾಗಿ ಟೀಕಿಸಿದರು.
ಯಾರಾದರೂ ನಿಮಗೆ ಬೆಲೆಬಾಳುವ ಗಡಿಯಾರ ಉಡುಗೊರೆ ಕೊಟ್ಟಿದ್ದಾರಾ? ಸಿಎಂ ಸಿದ್ದರಾಮಯ್ಯಗೆ 70 ಲಕ್ಷ ರೂ. ಮೌಲ್ಯದ ವಾಚ್ ಎಲ್ಲಿಂದ ಬಂತು? ಸಿಎಂಗೆ ಯಾಕೆ ದುಬಾರಿ ಉಡುಗೊರೆ ನೀಡುತ್ತಾರೆ ಗೊತ್ತೆ ಎಂದು ಪ್ರಶ್ನಿಸಿ ಉದ್ಯೋಗಿಗಳಿಗೆ ಅನುಕೂಲ ಮಾಡಿದ್ದ ಕಾರಣ ಸಿಎಂಗೆ ಉಡುಗೊರೆ ಸಿಕ್ಕಿದೆ. ಗ್ರಂಥಾಲಯ ಮೇಲ್ವಿಚಾರಕರ ಸಂಬಳ ಹೆಚ್ಚಿಸಲು ಲಂಚ ಕೇಳುವ ಮಂತ್ರಿಗಳಿದ್ದಾರೆ. ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕಾಗಿ 100 ಕೋಟಿ ರೂ. ಲಂಚ ಕೇಳುತ್ತಾರೆ ಎಂದು ಶಾ ಆರೋಪಿಸಿದರು.
ಕರ್ನಾಟಕದ ಜನರ ಆಶೀರ್ವಾದದಿಂದಲೂ ನರೇಂದ್ರ ಮೋದಿ ಪ್ರಧಾನಿ ಆಗಿದ್ದಾರೆ. ನಮಗಿಂತ ಮೊದಲು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಸರ್ಕಾರ ಕೇಂದ್ರ ದಲ್ಲಿತ್ತು. 14ನೇ ಹಣಕಾಸು ಯೋಜನೆಯಲ್ಲಿ 2 ಲಕ್ಷ 19 ಸಾವಿರ ಕೋಟಿ ಕರ್ನಾಟಕಕ್ಕೆ ಅನುದಾನ ಸಿಕ್ಕಿದೆ. ಈ ಅನುದಾನ ಹಣ ಎಲ್ಲಿ ಹೋಯಿತು ಎಂದು ಅವರು ಪ್ರಶ್ನಿಸಿದರು.
ಅನ್ನಭಾಗ್ಯದ ಅಕ್ಕಿ ಹಣವನ್ನ ಕಾಂಗ್ರೆಸ್ನವರು ತಿಂದಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಂತೋಷ್ ಲಾಡ್ ಸಿಕ್ಕಿ ಹಾಕಿಕೊಂಡು ರಾಜೀನಾಮೆ ಕೊಟ್ಟರು. ಅಷ್ಟೇ ಅಲ್ಲದೇ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಆಗಿದೆ. ಆದರೆ ಡಿಕೆಶಿ ಸಚಿವರಾಗಿ ಈಗಲೂ ಹೇಗೆ ಮುಂದುವರೆಯುತ್ತಾರೆ? ಮಲಪ್ರಭಾ ಯೋಜನೆಯಲ್ಲಿ 900 ಕೋಟಿ ಅಕ್ರಮ ನಡೆದಿದೆ ಎಂದು ಅಮಿತ್ ಶಾ ಆರೋಪಿಸಿದರು. ಇದನ್ನು ಓದಿ: ಡೈರಿ ಡೈನಮೈಟ್ ಸ್ಫೋಟಕ್ಕೆ ಊಹಿಸಲಸಾಧ್ಯ ಟ್ವಿಸ್ಟ್: ಗೋವಿಂದರಾಜು ಹೇಳಿಕೆಯಿಂದಲೇ ಸರ್ಕಾರಕ್ಕೆ ಕಂಟಕ!
ಬಿಜೆಪಿ ಹಾಗೂ ಆರ್ಎಸ್ಎಸ್ಗೆ ಸೇರಿದ 23 ಜನರ ಹತ್ಯೆಯಾಗಿದೆ. ಅವರು ಏನು ತಪ್ಪು ಮಾಡಿದ್ದಾರೆ? ಸರ್ಕಾರ ಈ ಬಗ್ಗೆ ಕ್ರಮವನ್ನೇ ತೆಗೆದುಕೊಂಡಿಲ್ಲ. ಬಿಜೆಪಿ ಸರ್ಕಾರ ಬರುತ್ತಿದ್ದಂತೆ ಕೊಲೆ ಮಾಡಿದವರನ್ನು ಜೈಲಿಗೆ ಸೇರಿಸುತ್ತೇವೆ. ರಾಜ್ಯ ಸರ್ಕಾರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಎಸ್ಡಿಪಿಐ ವಿರುದ್ಧದ ಎಲ್ಲಾ ಪ್ರಕರಣಗಳನ್ನ ರಾಜ್ಯ ಸರ್ಕಾರ ಹಿಂಪಡೆದಿದೆ. ಯಾವ ಪೊಲೀಸರ ಹಣೆಯಲ್ಲಿ ವಿಭೂತಿ ಹಾಗೂ ಕುಂಕಮ ಇಡದಂತೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ. ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಬಗ್ಗೆ ಮಾತಾಡುತ್ತದೆ. ಆದರೆ ಅವರ ಉದ್ಧಾರಕ್ಕೆ ತರಲು ಹೊರಟಿರುವ ಮಸೂದೆಗೆ ದೆಹಲಿಯಲ್ಲಿ ಕಾಂಗ್ರೆಸ್ ಅಡ್ಡಿ ಪಡಿಸುತ್ತದೆ. ಈ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಮುಕ್ತ ಕರ್ನಾಟಕವನ್ನು ಮಾಡಲು ನಮ್ಮನ್ನು ಬೆಂಬಲಿಸಿ ಎಂದು ಶಾ ಜನರಲ್ಲಿ ಮನವಿ ಮಾಡಿದರು.
ರಾಜ್ಯ ಸರ್ಕಾರ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದು, ದೇವಸ್ಥಾನದ ಅರ್ಚಕರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಇಂತಹ ವೊಟ್ ಬ್ಯಾಂಕ್ ಸರ್ಕಾರ ಮನೆಗೆ ಕಳಿಸಬೇಕೋ? ಬೇಡವೋ ಎನ್ನುವುದನ್ನು ನೀವೇ ನಿರ್ಧರಿಸಬೇಕು. ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತಂದು ಪ್ರಧಾನಿ ಮೋದಿ ಅವರ ಕೈಯನ್ನು ಬಲಪಡಿಸಬೇಕು ಎಂದು ಅಮಿತ್ ಶಾ ವಿನಂತಿಸಿದರು. ಇದನ್ನು ಓದಿ: ಕಾಂಗ್ರೆಸ್ನಿಂದ ‘ಕಪ್ಪ’ಕಾಣಿಕೆ: ಯಾರಿಗೆ ಎಷ್ಟು ಹಣ ಸಂದಾಯವಾಗಿದೆ? ಡೈರಿಯಲ್ಲಿ ಏನಿದೆ?
Watch LIVE: Shri @AmitShah at #ParivartanaYatre in Karnataka. https://t.co/otg1og1f52
— BJP (@BJP4India) January 10, 2018