ಕೋಲಾರ: ಸಂಸದ ಕೆ.ಎಚ್.ಮುನಿಯಪ್ಪನವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೇ ಕಾಂಗ್ರೆಸ್ ನಿರ್ನಾಮವಾಗುತ್ತದೆ ಎಂದು ಬಲಗೈ ಹೊಲೆಯರ ಜನಾಂಗದ ಅಧ್ಯಕ್ಷ ಬಾಲಾಜಿ ಚನ್ನಯ್ಯರವರು ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುನಿಯಪ್ಪನವರು ತಮ್ಮ ಪುತ್ರಿಗೆ ಸಚಿವ ಸ್ಥಾನ ನೀಡುವುದಕ್ಕೆ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಹಲವು ಪಕ್ಷಗಳ ಜೊತೆ ಅನೈತಿಕ ಕುಟುಂಬ ರಾಜಕಾರಣ ಮಾಡುತ್ತಿರುವ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಇಂತಹ ವ್ಯಕ್ತಿಗೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ, ಅವರು ಎಲ್ಲಾ ಪಕ್ಷಗಳ ಮುಖಂಡರೊಂದಿಗೆ ಅನೈತಿಕ ರಾಜಕಾರಣ ಮಾಡಿ, ಕಾಂಗ್ರೆಸ್ ನಿರ್ನಾಮ ಮಾಡುವುದುರಲ್ಲಿ ಸಂದೇಹವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಜೂನ್ 14ರಂದು ದೆಹಲಿಯಲ್ಲಿ ಬಲಗೈ ಸಮುದಾಯ ಕಾಂಗ್ರೆಸ್ಗೆ ಬೆಂಬಲ ನೀಡಿಲ್ಲ ಎನ್ನುವ ಕೆ.ಎಚ್.ಮುನಿಯಪ್ಪನವರು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಬಲಗೈ ಸಮುದಾಯದ ಬೆಂಬಲವಿಲ್ಲದೇ 7 ಬಾರಿ ಸಂಸದರಾದರೇ ಎಂದು ಅವರು ಪ್ರಶ್ನಿಸಿದರು. ಇದನ್ನೂ ಓದಿ: ಅವಕಾಶ ಕೊಟ್ರೆ ಸಂಸತ್ತಿಗೆ ಸ್ಪರ್ಧಿಸದೇ ಕೆಪಿಸಿಸಿ ಅಧ್ಯಕ್ಷನಾಗ್ತೀನಿ: ಕೆಹೆಚ್ ಮುನಿಯಪ್ಪ
ಮುನಿಯಪ್ಪನವರು ಸಂಸದರಾದ ಬಳಿಕ ಇಲ್ಲಿಯವರೆಗೂ ಬಲಗೈ ಸಮುದಾಯದ ಏಳಿಗೆಗೆ ಶ್ರಮಿಸಿಲ್ಲ ಹಾಗೂ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ರಾಜ್ಯದ ಹಲವೆಡೆ ಕಾಂಗ್ರೆಸ್ ಗೆಲುವಿಗೆ ಬಲಗೈ ಹೊಲೆಯ ಸಮುದಾಯ ಕಾರಣ ಎಂದು ಹೇಳಿದರು.