ಬೆಳಗಾವಿ: ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆಗೆ ಹೆಚ್ಚಿನ ಒತ್ತಡ ಇದೆ. ಸಾವಿರಾರು ಜನ ಹೆಣ್ಣು ಮಕ್ಕಳು ಮನೆ ಎದುರು ಧರಣಿ ಮಾಡ್ತೇವೆ ಅಂತಾ ಒತ್ತಡ ಹಾಕಿದಲ್ಲದೇ ಪತ್ರ ಬರೆದಿದ್ದಾರೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ (Sidddaramaiah) ತಿಳಿಸಿದರು.
ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲೂ ನಿಂತುಕೊಳ್ಳಬೇಕು ಅಂತಾ ಹೇಳ್ತಿದ್ದಾರೆ. ವರುಣಾದಿಂದ ನಿಂತುಕೊಳ್ಳಬೇಕು ಅಂತಾ ನಮ್ಮ ಹುಡುಗ ಹೇಳ್ತಿದ್ದಾನೆ. ಚಾಮರಾಜಪೇಟೆಯಿಂದ ನಿಂತುಕೊಳ್ಳಬೇಕು ಅಂತಾ ಜಮೀರ್ (Zameer Ahmed Khan) ಹೇಳುತ್ತಿದ್ದಾನೆ ಎಂದು ಹೇಳಿದರು.
ಬಾದಾಮಿ (Badami) ಕ್ಷೇತ್ರದಿಂದಲೇ ಸ್ಪರ್ಧೆಗೆ ಹೆಚ್ಚಿನ ಒತ್ತಡ ಇದೆ. ಸಾವಿರಾರು ಜನ ಹೆಣ್ಣು ಮಕ್ಕಳು ಮನೆ ಎದುರು ಧರಣಿ ಮಾಡ್ತೇವೆ ಅಂತಾ ಒತ್ತಡ ಹಾಕಿದಲ್ಲದೇ ಪತ್ರ ಬರೆದಿದ್ದಾರೆ. ನಾನು ಏಕೆ ಯೋಚನೆ ಮಾಡ್ತಿದ್ದೀನಿ ಅಂದ್ರೆ ವಾರಕ್ಕೊಮ್ಮೆ ಹೋಗಿ ಅಲ್ಲಿ ಇರೋದಕ್ಕೆ ಆಗೋದಿಲ್ಲ. ಕಾರ್ಯಕರ್ತರಿಗೆ ಜನರಿಗೆ ಸಿಗೋದಕ್ಕಾಗಲ್ಲ, ಅವರ ಕಷ್ಟ ಸುಖಗಳಿಗೆ ಸ್ಪಂದಿಸೋದಕ್ಕೆ ಆಗೋದಿಲ್ಲ. ನೀವು ಬಂದು ನಿಂತುಕೊಳ್ಳಿ ಅಂತಾ ಅವರು ಹೇಳಬಹುದು. ಆದರೆ ನನಗೆ ಮನಸು ಒಪ್ಪುತ್ತಿಲ್ಲ. 2 ತಿಂಗಳಿನಿಂದ ಬಾದಾಮಿಗೆ ಹೋಗಿಲ್ಲ. ನಾಳೆ ಹೋಗಬೇಕೆಂದುಕೊಂಡಿದ್ದೆ, ಅದೂ ಕ್ಯಾನ್ಸಲ್ ಆಗಿದೆ ಎಂದು ತಿಳಿಸಿದರು.
ಇಬ್ರಾಹಿಂ ಭದ್ರಾವತಿಯಲ್ಲಿ ನಿಲ್ಲಲಿ: ವರುಣಾದಿಂದ ಸ್ಪರ್ಧೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (CM Ibrahim) ಸಲಹೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ವೈಯಕ್ತಿಕವಾಗಿ ಸಿ.ಎಂ.ಇಬ್ರಾಹಿಂ ಒಳ್ಳೆಯ ಗೆಳೆಯ. ಆದರೆ ನಮ್ಮನ್ನ ಬಿಟ್ಟು ಜೆಡಿಎಸ್ ಹೋಗಿ ಅಧ್ಯಕ್ಷರಾಗಿದ್ದಾರೆ. ಅವರು ಭದ್ರಾವತಿಗೆ ಜೆಡಿಎಸ್ನಿಂದ (JDS) ನಿಂತುಕೊಳ್ಳೋದು ಒಳ್ಳೆಯದು. ಅಲ್ಲಿ ಯಾರು ಇಲ್ಲ ಎಂದು ಕುಟುಕಿದರಲ್ಲದೆ, ನಾನು ಎಲ್ಲಿ ನಿಂತುಕೊಳ್ಳಬೇಕು ಅನ್ನೋದನ್ನ ಪಕ್ಷ ತೀರ್ಮಾನ ಮಾಡುತ್ತದೆ. ಜೆಡಿಎಸ್ ಆತ್ಮೀಯವಾಗಿ ಹೇಳೋದಾದ್ರೆ ವೈಯಕ್ತಿಕವಾಗಿ ನನಗೆ ಬಂದು ಹೇಳಲಿ ಎಂದು ಸಲಹೆ ನೀಡಿದರು.
ನಾನು ಒಬ್ಬಂಟಿಗನಾಗಿದ್ರೆ ಇವರೆಲ್ಲ ಯಾರೂ ಎಂದು ಪಕ್ಕದಲ್ಲಿ ನಿಂತಿದ್ದ ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಫಿರೋಜ್ ಸೇಠ್, ಎಂ.ಬಿ.ಪಾಟೀಲ್ ಇವರೆಲ್ಲರನ್ನೂ ತೋರಿಸಿದ ಸಿದ್ದರಾಮಯ್ಯ ಎಲ್ಲ ಧರ್ಮದವರು, ಜಾತಿಯವರು ನನ್ನ ಜೊತೆ ಇದ್ದಾರೆ ಎಂದರು.
ಬಿಎಸ್ವೈ-ಬೊಮ್ಮಾಯಿ ಸಂಬಂಧ ಹಳಸಿದೆ:
ಸಿದ್ದರಾಮಯ್ಯ-ಡಿಕೆಶಿ ಸಂಬಂಧ ಸರಿ ಇಲ್ಲ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿದ ಅವರು, ಯಡಿಯೂರಪ್ಪ-ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸಂಬಂಧ ಚೆನ್ನಾಗಿದೆಯಾ ಅಂತಾ ಗೊತ್ತಾ? ಅವರಿಬ್ಬರ ನಡುವಿನ ಸಂಬಂಧ ಹಳಸಿ ಹೋಗಿದೆ. ನಾವಿಬ್ಬರೂ ಚೆನ್ನಾಗಿದ್ದೇವೆ ಎಂದು ಸಿದ್ದರಾಮಯ್ಯ ಮುಗುಳ್ನಕ್ಕರು.