ಬೆಂಗಳೂರು: ಸರ್ಕಾರಕ್ಕೆ ತಾಕತ್ತಿದ್ದರೆ ಪಿಎಸ್ಐ ಅಕ್ರಮ ಪ್ರಕರಣದಲ್ಲಿ ನನ್ನನ್ನು ಬಂಧಿಸಲಿ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನನಗೆ ಸಿಐಡಿಯಿಂದ ಮೂರನೆ ನೋಟಿಸ್ ಬಂದಿದೆ. ಇದು ಹಾಸ್ಯಾಸ್ಪದವಾಗಿದೆ. ಮೂರಲ್ಲ ನೂರು ನೋಟಿಸ್ ಕೊಟ್ಟರೂ ನಾನು ಹೆದರಲ್ಲ. ಸರ್ಕಾರಕ್ಕೆ ನನ್ನ ಬಗ್ಗೆ ಇರುವ ಆಸಕ್ತಿಯನ್ನು ತನಿಖೆ ಬಗ್ಗೆ ತೋರಿಸಿದರೆ ಇನ್ನಷ್ಟು ಸತ್ಯ ಹೊರ ಬರಲಿದೆ. ಸರ್ಕಾರಕ್ಕೆ ತಾಕತ್ತಿದ್ದರೆ ನನ್ನನ್ನು ಅರೆಸ್ಟ್ ಮಾಡಲಿ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಗೌರವ್ ಗುಪ್ತ ಎತ್ತಂಗಡಿ – ತುಷಾರ್ ಗಿರಿನಾಥ್ ಬಿಬಿಎಂಪಿ ಮುಖ್ಯ ಆಯುಕ್ತರಾಗಿ ವರ್ಗ
ನಿಯಮ 91 ರ ಅಡಿಯಲ್ಲಿ ನನಗೆ ನೋಟಿಸ್ ಕೊಟ್ಟಿದ್ದರು. ಅದಕ್ಕೆ ಸೂಕ್ತವಾದ ದಾಖಲೆಯನ್ನು ನಾನು ಕೊಟ್ಟಿದ್ದೇನೆ. ಬಿಜೆಪಿ ನಾಯಕರು ಮೊದಲು ಸೆಕ್ಷನ್ 91 ಅಂದರೆ ಏನು ಅಂತ ತಿಳಿದುಕೊಳ್ಳುವುದು ಒಳ್ಳೆಯದು. ಈಗ ಏನು ಮಾಡಬೇಕು ಅನ್ನೋದನ್ನು ನಮ್ಮ ಪಕ್ಷದ ವರಿಷ್ಠರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ಸರ್ಕಾರದ ಈ ನೋಟಿಸ್ಗೆಲ್ಲ ಹೆದರಲ್ಲ. ಅವರ ಪಕ್ಷದ ಸಚಿವರು ಹಾಗೂ ಪರಿಷತ್ ಸದಸ್ಯರು ಮೊದಲೇ ಪತ್ರ ಬರೆದಿದ್ದರು. ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಸಿಐಡಿ ಮೂರನೆ ನೋಟಿಸ್ ನೀಡಿದ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಿಐಡಿ ನೋಟಿಸ್ಗೆ ಖುದ್ದು ಹಾಜರಾಗಬೇಕೆ ಅಥವಾ ಬೇಡವೆ ಎಂಬುದರ ಬಗ್ಗೆ ಡಿಕೆಶಿ ಜೊತೆ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಈಗ ಒಡೆದ ಮನೆ ಒಂದಷ್ಟು ಬಣ ವಲಸೆರಾಮಯ್ಯರಿಗೆ ಜೈಕಾರ ಹಾಕುತ್ತಿದೆ: ಬಿಜೆಪಿ ವ್ಯಂಗ್ಯ
ಆನಂತರ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷರ ಜೊತೆ ನೋಟಿಸ್ ಬಗ್ಗೆ ಮಾತನಾಡಿದ್ದೇನೆ. ಸಿಎಲ್ಪಿ ನಾಯಕರ ಜೊತೆಯೂ ಮಾತನಾಡುತ್ತೇನೆ. ಕಾನೂನು ಪ್ರಕಾರ ಹೇಗೆ ನಡೆದುಕೊಳ್ಳಬೇಕೋ ಹಾಗೆ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.